Recent Posts

ವಚನಾಮೃತ - ೮ನೇ ತರಗತಿ ಸಿರಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

 ವಚನಾಮೃತ


 ವಚನಕಾರರ ಪರಿಚಯ

– ಶಿವ ಶರಣ ಅಲ್ಲಮಪ್ರಭು : ಅಲ್ಲಮಪ್ರಭು ೧೨ನೇ ಶತಮಾನದ ಪ್ರಸಿದ್ಧ ಚಿಂತಕ, ತತ್ವಜ್ಞಾನಿ, ಶಿವಶರಣ ಮತ್ತು ವಚನಕಾರ. ಈತನು ಜನಿಸಿದ್ದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವಿಯಲ್ಲಿ. ಈತನ ತಂದೆ ನಿರಹಂಕಾರ ಮತ್ತು ತಾಯಿ ಸುಜ್ಞಾನಿ. ಈತ ಕಲ್ಯಾಣದಲ್ಲಿ ಬಸವಣ್ಣ ಸ್ಥಾಪಿಸಿದ ‘ಶೂನ್ಯ ಪೀಠ’ದ ಅಧ್ಯಕ್ಷನಾಗಿ ಅನೇಕರಿಗೆ ಮಾರ್ಗದರ್ಶನ ನೀಡಿದವನು. ಅವನು ಒಬ್ಬ ಅನುಭಾವಿ. ಸತ್ಯಶೋಧನೆಯೇ ಅವನಜೀವನದ ಪರಮ ಗುರಿಯಾಗಿತ್ತು. ಅವನ ವಚನಗಳು ಬೆರಗು ಮತ್ತು ಬೆಡೆಗಿನಿಂದ ಕೂಡಿವೆ ‘ಗುಹೇಶ್ವರಾ’ಎಂಬುದು ಈತನ  ವಚನಗಳ ಅಂಕಿತ

ಆಶಯ ಭಾವ

ತಂದೆ, ತಾಯಿ, ಗುರುಗಳಿಗೆ ದೈವತ್ವದ ಸ್ಥಾನ ಮಾನ ನೀಡಿರುವ ಸಂಸ್ಕೃತಿ ನಮ್ಮದು. ಗುರುವಿನ ಸ್ಥಾನ ಬಹಳ ಪವಿತ್ರವಾದದ್ದು. ಗುರುವಿಗೆ ಸೃಷ್ಟಿ, ಸ್ಥಿತಿ, ಲಯಕಾರಕರಾದ ಬ್ರಹ್ಮ, ವಿಷ್ಣು, ಮಹೇಶ್ವರರ ಸ್ಥಾನವನ್ನು ನೀಡಿ ಗೌರವಿಸಲಾಗಿದೆ. ಏಕೆಂದರೆ ಶಿಷ್ಯನಿಗೆ ಸಂಸ್ಕಾರ, ವಿದ್ಯೆ, ವಿನಯ ಹಾಗೂ ಬದುಕಿನ ಮಾರ್ಗವನ್ನು ನೀಡುವವನು ಗುರು. ಪರಿವರ್ತನೆ ಜಗದ ನಿಯಮ. ಕಾಲಗತಿಯಲ್ಲಿ ಎಲ್ಲವೂ ಪರಿವರ್ತನೆಗೊಳಪಡುತ್ತದೆ ಎಂಬುದನ್ನು ಗುರುವಿನ ಸ್ಥಾನ ಹಾಗೂ ಶಿಷ್ಯನ ಕಲಿಕಾ ಪ್ರವೃತ್ತಿಗಳು ನಾಲ್ಕು ಯುಗಗಳಲ್ಲಿ ಹೇಗೆ ಪರಿವರ್ತನೆಯಾಗಿದೆ ಎಂಬುದನ್ನು ಮಾರ್ಮಿಕವಾಗಿ ಈ ವಚನದಲ್ಲಿ ಬಿಂಬಿತವಾಗಿದೆ ಕೃತಯುಗದಲ್ಲಿ  ಶ್ರೀ ಗುರು ಶಿಷ್ಯಂಗೆ ಬಡಿದು ಬುದ್ಧಿಯ ಕಲಿಸಿದರೆ, ಆಗಲಿ ಮಹಾ ಪ್ರಸಾದವೆಂದೆನಯ್ಯ ತ್ರೇತಾಯುಗದಲ್ಲಿ  ಶ್ರೀಗುರು ಶಿಷ್ಯಂಗೆ ಬೈದು ಬುದ್ಧಿಯ ಕಲಿಸಿದರೆ, ಆಗಲಿ ಮಹಾ ಪ್ರಸಾದವೆಂದೆನಯ್ಯ ದ್ವಾಪರಯುಗದಲ್ಲಿ ಶ್ರೀಗುರುವು ಶಿಷ್ಯಂಗೆ ಝಂಕಿಸಿ ಬುದ್ಧಿಯ ಕಲಿಸಿದರೆ, ಆಗಲಿ ಮಹಾ ಪ್ರಸಾದವೆಂದೆನಯ್ಯ ಕಲಿಯುಗದಲ್ಲಿ ಶ್ರೀಗುರು ಶಿಷ್ಯಂಗೆ ವಂದಿಸಿ ಬುದ್ಧಿಯ ಕಲಿಸಿದರೆ, ಆಗಲಿ ಮಹಾ ಪ್ರಸಾದವೆಂದೆನಯ್ಯ ಗುಹೇಶ್ವರ, ನಿಮ್ಮ ಕಾಲದ ಕಟ್ಟಳೆಯ ಕಲಿತಕ್ಕೆನ ನಾ ಬೆರಗಾದೆನು.
-ಅಲ್ಲಮಪ್ರಭು

ಪದಗಳ ಅರ್ಥ

ಬಡಿದು-ಹೊಡೆತಕೊಡು, ಹೊಡೆ ;
ಪ್ರಸಾದ-ಅನುಗ್ರಹ, ಹರ್ಷ ;
ಝಂಕಿಸು – ಗದರಿಸು, ಬೆದರಿಸು;
ವಂದಿಸು -ನಮಸ್ಕರಿಸು
ಬೆರಗು – ಆಶ್ಚರ್ಯ ,ಅಚ್ಚರಿ
ಕಟ್ಟಳೆ – ಪದ್ಧತಿ, ನಿಯಮ, ಅಪ್ಪಣೆ;
ವಚನದ ಸಾರಾಂಶ :- ಅಲ್ಲಮಪ್ರಭುವಿನ ಈ ವಚನದಲ್ಲಿ ಗುರು ಶಿಷ್ಯರ ಸಂಬಧದ ವರ್ಣನೆ ಇದೆ. ವಿವಿಧ ಕಾಲಘಟ್ಟದಲ್ಲಿ ಗುರು – ಶಿಷ್ಯರ ಶೈಕ್ಷಣಿಕ  ಸಂಬಂಧ , ಗೌರವದ ಭಾವನೆಯನ್ನು ವರ್ಣಿಸಿದ್ದಾರೆ. “ಕೃತಯುಗದಲ್ಲಿ ಶ್ರೀ ಗುರು ಶಿಷ್ಯಂಗೆ ಬಡಿದು ಬುದ್ಧಿಯ ಕಲಿಸಿದರೆ, ಆಗಲಿ ಮಹಾ ಪ್ರಸಾದವೆಂದೆನಯ್ಯ” ಕೃತಯುಗದ ಶಿಷ್ಯನು ಸುಖ, ಭೋಗ, ವೈಭವಗಳಲ್ಲಿ ಮುಳುಗಿ ಮೋಹ ಪರವಶನಾಗಿರುವ ಶಿಷ್ಯನನ್ನು ಇದರಿಂದ ಹೊರ ಬರುವಂತೆ ಮಾಡುವುದು ಸುಲಭದ ಮಾತಲ್ಲ, ಆದ್ದರಿಂದ ಇವನ ಹಿತ ಭಯಸುವ ಶ್ರಿಗುರು ತನ್ನ ಶಿಷ್ಯನನ್ನು ಬಡಿದಾದರೂ ಸರಿಯೇ ಬುದ್ಧಿ ಕಲಿಸಬೇಕು. “ತ್ರೇತಾಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬೈದು ಬುದ್ಧಿಯ ಕಲಿಸಿದರೆ, ಆಗಲಿ ಮಹಾ ಪ್ರಸಾದವೆಂದೆನಯ್ಯ” ಈ ಯುಗದ ಶಿಷ್ಯನಿಗೆ ಶಕ್ತಿ, ಸಿದ್ಧಿಗಳ ಮೇಲೆ ಅಪಾರವಾದ ವ್ಯಾಮೋಹ. ಇದಕ್ಕಾಗಿ ಅವನು ಎಂತಹ ಘೋರ ತಪಸ್ಸಿಗೂ ಸಿದ್ಧ. ಈ ರೀತಿಯ ಮೋಹ, ವ್ಯಾಮೋಹ,ಅನುರಾಗದಿಂದ ತನ್ನ ಶಿಷ್ಯನನ್ನು ಹೊರ ತರಲು ಶ್ರೀಗುರು ಬೈದು ಬುದ್ದಿಯ ಕಲಿಸಿದರೆ ಅದು ಮಹಾ ಪ್ರಸಾದವಾಗುತ್ತದೆ. “ದ್ವಾಪರಯುಗದಲ್ಲಿ ಶ್ರೀಗುರುವು ಶಿಷ್ಯಂಗೆ ಝಂಕಿಸಿ ಬುದ್ಧಿಯಕಲಿಸಿದರೆ, ಆಗಲಿ ಮಹಾ ಪ್ರಸಾದವೆಂದೆನಯ್ಯ”ಈ ಕಾಲದ ಶಿಷ್ಯನಿಗೆ ಯಶ, ಕೀರ್ತಿ ಎಂದರೆ ಪಂಚಪ್ರಾಣ. ಇದರ ಬೆನ್ನು ಹತ್ತಿ ಓಡುವ ಕುದುರೆಗೆ ಲಾಗಾಮು ಹಾಕಿ ಹಿಡಿದು ಸತ್ಯದ ದಾರಿಗೆ ತರಲು ಶ್ರೀಗುರು ಬೆದರಿಸಿ, ಗದರಿಸಿ ಬುದ್ಧಿ ಕಲಿಸುವನು. “ಕಲಿಯುಗದಲ್ಲಿ ಶ್ರೀಗುರು ಶಿಷ್ಯಂಗೆ ವಂದಿಸಿ ಬುದ್ಧಿಯ ಕಲಿಸಿದರೆ, ಆಗಲಿ ಮಹಾ ಪ್ರಸಾದವೆಂದೆನಯ್ಯ”ಈ ಕಾಲದ ಶಿಷ್ಯನು ಗುರುವನ್ನು ಮೀರಿಸುವಷ್ಟು ಜ್ಞಾನದ ಪಿಶಾಚಿಯಾಗಿರುತ್ತಾನೆ. ಅದರಿಂದ ಶ್ರೀಗುರು ಇಂತಹ ಶಿಷ್ಯರನ್ನ ಗೌರವಿಸುತ್ತಾನೆ, ಆದರಿಸುತ್ತಾನೆ. ಶ್ರೀ ಗುರು ಕಾಲದಿಂದ ಕಾಲಕ್ಕೆ ಕರುಣಿಸುವ ಸಕಲ ವಿದ್ಯೆಗಳನ್ನು ಶಿಷ್ಯಯಂದಿರು
‘ಮಹಾಪ್ರಸಾದ’ ವೆಂದು ಸ್ವೀಕರಿಸಬೇಕು. ಆಯ್ದಕ್ಕಿ ಮಾರಯ್ಯ: ಈತನ ಕಾಲ ಕ್ರಿ.ಶ.ಸು ೧೧೬೦. ಶಿವಶರಣ ಹಾಗೂ ವಚನಕಾರ, ರಾಯಚೂರು ಜಿಲ್ಲೆಯ ಅಮರೇಶ್ವರದ ಆಯ್ದಕ್ಕಿ ಲಕ್ಕಮ್ಮನ ಪತ್ನಿ. ಆಯ್ದಕ್ಕಿ ಮಾರಯ್ಯ ಎಂದೇ ಪ್ರಸಿದ್ಧ. ಈವರೆಗೆ ಈತನ ಸುಮಾರು ೩೨ ವಚನಗಳು ದೊರೆತಿವೆ. ಎಂಥ ಪರಿಸ್ಥಿತಿ ಎದುರಾದರು ಕಾಯಕವ ಬಿಡದೆ ಮಾಡಬೇಕು, ಕಾಯಕ ಮಾಡಿ ಬದುಕಬೇಕು, ಯಾಚನೆ ಮಾಡಬಾರದು ಹಾಗೂ ಕೂಡಿಡಬಾರದು ಎಂದು ಹೇಳುವ ಮೂಲಕ ಕಾಯಕಬದುಕಿ£ À
ಮಹತ್ವವನ್ನು ಸಾರಿದ್ದಾರೆ. ಇಂತಹ ಆದರ್ಶವನ್ನು ಹೊಂದಿರುವ ಈತನ ಅಂಕಿತ ‘ಅಮರೇಶ್ವರಲಿಂಗ’ ಬೀದಿಯಲ್ಲಿ ಬಿದ್ದ ಅಕ್ಕಿಯನ್ನು ಆಯ್ದುತಂದು ದಾಸೋಹ ಮಾಡುವುದೇ ಅವರ ಕಾಯಕವಾಗಿತು.

ಆಶಯ ಭಾವ

ಕಾಯಕವೇ ಕೈಲಾಸ ಎಂದು ಹೇಳುವ ಮೂಲಕ ಬಸವಣ್ಣ ಅವರು ಹೇಳಿದ ಕಾಯಕದ ಮಹತ್ವ ಆಯ್ದಕ್ಕಿಮಾರಯ್ಯ ಅವರ ವಚನಗಳಲ್ಲೂ ವ್ಯಕ್ತವಾಗಿದೆ. ಮನುಷ್ಯನಿಗೆ ಕಾಯಕವೇ ಮುಖ್ಯ. ಕಾಯಕದಲ್ಲೇ ಸರ್ವಸ್ವವನ್ನೂ ಕಾಣಬಹುದು. ಇದು ಶ್ರೇಷ್ಠ ಹಾಗೂ ಸಾರ್ವಕಾಲಿಕ ಸತ್ಯ. ಕರ್ತವ್ಯ ನಿಷ್ಠೆ ಮತ್ತು ಬದ್ಧತೆಯನ್ನು ಸಾರುವ ಈ ವಚನ ಇಂದಿಗೂ ಪ್ರಸ್ತುತ

ಪದಗಳ ಅರ್ಥ

ಕಾಯಕ –            ಕಾರ್ಯ,   ಕೆಲಸ, ಉದ್ಯೋಗ;
ಜಂಗಮ –           ಚಲನಶೀಲ   , ಲೋಕಸಂಚಾರಿ,      ವೀರಶೈವ ಧರ್ಮಾನುಸಾರ ವಿರಕ್ತ.
ಹಂಗು –              ಋಣ
ಕಾಯಕದಲ್ಲಿ ನಿರತನಾಡೆ
ಗುರುದರ್ಶನವಾದಡೂ ಮರೆಯಬೇಕು;
ಲಿಂಗಪೂಜೆಯಾದಡೂ ಮರೆಯಬೇಕು
ಜಂಗಮ ಮುಂದೆ ನಿಂದಿದ್ದಡೂ ಹಂಗ ಹರಿಯಬೇಕು
ಕಾಯಕವೆ ಕೈಲಾಸವಾದ ಕಾರಣ
ಅಮರೇಶ್ವರ ಲಿಂಗವಾಯಿತ್ತಾದಡೂ ಕಾಯಕದೊಳಗು          – ಆಯ್ದಕ್ಕಿ ಮಾರಯ್ಯ
ವಚನದ ಸಾರಾಂಶ : ಆಯ್ದಕ್ಕಿ ಮಾರಯ್ಯ ಅವರು ತಮ್ಮ ಈ ವಚನದಲ್ಲಿ ಕಾಯಕದ ಮಹತ್ವವನ್ನು
ತಿಳಿಸಿದ್ದಾರೆ. ಕಾಯಕವೆಂದರೆ ಮನುಷ್ಯನು ಯಾವುದಾದರೊಂದು ದೇಹಿಕ ಶ್ರಮದಲ್ಲಿ ತೊಡಗಿರುವುದು. ಮನುಷ್ಯನು
ಇಂತಹ ಕಾಯಕದಲ್ಲಿಯೇ ದೇವರನ್ನು ಕಾಣಬೇಕು. ಅವವರ ಕಾಯಕವೇ ಅವರವರ ದೇವರು. ಈ ಕಾಯಕವನ್ನು
ನಿಷ್ಠೆ, ಭಕ್ತಿಯಿಂದ ಮಾಡಬೇಕು. ನಾವು ಕಾಯಕದಲ್ಲಿ ತೊಡಗಿದ್ದಾಗ ಗುರುದರ್ಶನವಾದರೂ, ಲಿಂಗಪೂಜೆಯಾದರೂ
ಮರೆಯಬೇಕು. ನಡೆದಾಡುವ ದೇವರು ಜಂಗಮರೇ ಮುಂದೆ ಬಂದು ನಿಂತಿದ್ದರೂ ಮೊದಲು ಕಾಯಕ ಮಾಡಿ
ನಂತರ ಅವರನ್ನು ನೋಡಿ, ಮಾತನಾಡಿಸಬೇಕು. ಏಕೆಂದರೆ ಕಾಯಕ ಗುರು, ಲಿಂಗಪೂಜೆ, ಜಂಗಮರನ್ನು
ಮೀರಿದ್ದೂ ‘ಕಾಯಕವೇ ಕೈಲಾಸ’ ಎಂದು ಭಾವಿಸಬೇಕು. ದೇವರಿಗಿಂತ ಕೆಲಸಕ್ಕೆ ಮೊದಲ ಸ್ಥಾನಕೊಡಬೇಕು
ಎಂಬುದೇ ಈ ವಚನದ ಆಶಯ.
ಪದಗಳ ಅರ್ಥ
ಅರಿವು –             ತಿಳಿವಳಿಕೆ,     ಜ್ಞಾನ;
ಸೀಳುನಾಯಿ –     ಕಾಡುನಾಯಿ;
ಆಚಾರ –         ಒಳ್ಳೆಯ ನಡತೆ;
ನಾಮ –           ಹೆಸರು;
ಗಾವಿಲ –         ಹೆಡ್ಡ, ಗಾಂಪ;
ಅಮುಗೆರಾಯಮ್ಮ: ಈಕೆಯ ಕಾಲ ಕ್ರಿ.ಶ. ಸುಮಾರು ೧೧೬೦. ಹನ್ನೆರಡನೆಯ ಶತಮಾನದ
ವಚನಕಾರ್ತಿಯರಲ್ಲಿ ಒಬ್ಬಳು. ಈಕೆ ಸೊನ್ನಲಿಗೆಯವಳು (ಈಗಿನ ಸೋಲ್ಲಾಪುರ ಪತಿ ಅಮುಗೆ ದೇವಯ್ಯ ನೇಯ್ಗೆ
ಇವರ ಕಾಯಕ. ಈಕೆಯ ಅಂಕಿತನಾಮ ‘ಅಮುಗೇಶ್ವರ’. ತಮ್ಮ ವೈಚಾರಿಕ ಪ್ರಖರತೆ ಹಾಗೂ ಸಾಮಾಜಿಕ
ಕಳಕಳಿಯಿಂದ ಜೀವನವನ್ನು ವಿಭಿನ್ನ ದೃಷ್ಟಿಕೋನದಿಂದ ದರ್ಶಿಸಿ, ಚಿಂತನಗೈದು ವಚನ ರಚನೆಯ
ಮಹಾಕಾಯಕವನ್ನು ರೂಢಿಸಿಕೊಂಡವರು
ಆಶಯ ಭಾವ
ಪ್ರಕೃತಿಯಲ್ಲಿರುವ ಪ್ರಾಣಿ ಪಕ್ಷಿಗಳಲ್ಲಿ ವಿಶೇಷ ಗುಣಗಳು ಸಹಜವಾಗಿರುತ್ತವೆ. ಆದರೆ ಮಾನವ ಹೊಂದಿರುವ ವಿಶೇಷ
ಗುಣವನ್ನು ಇತರ ಪ್ರಾಣಿ ಪಕ್ಷಿಗಳು ಅನುಕರಿಸಲು ಸಾಧ್ಯವಿಲ್ಲ ಅದರಿಂದಾಗಿ ಮಾನವನು ಅರಿವು, ಆಚಾರ,
ಸಮ್ಯಜ್ಞಾನ, ಇವುಗಳಿಂದ ಭಗವಂತನ ಸಾಕ್ಷತ್ಕಾರವನ್ನು  ಪಡೆಯಬಹುದೆಂಬುದನ್ನು ಅಮುಗೆರಾಯಮ್ಮ ಈ ವಚನದ
ಮೂಲಕ ಸ್ಪಷ್ಟಪಡಿಸಿದ್ದಾಳೆ.
ಕಾಗೆಯಮರಿ ಕೋಗಿಲೆಯಾಗಬಲ್ಲುದೆ ?
ಆಡಿನಮರಿ ಆನೆಯಾಗಬಲ್ಲದೆ ?
ಸೀಳ (ಳು) ನಾಯಿ ಸಿಂಹದ ಮರಿಯಾಗಬಲ್ಲುದೆ ?
ಅರಿವು ಆಚಾರ ಸಮ್ಯಜ್ಞಾನವನರಿಯದೆ
ನಾಮವ ಹೊತ್ತುಕೊಂಡು ತಿರುಗುವ ಗಾವಿಲರ
ಮುಖವ ನೋಡಲಾಗದು ಅಮುಗೇಶ್ವರಾ. – ಅಮುಗೆರಾಯಮ್ಮ
ಪದಗಳ ಅರ್ಥ
ತನು     –            ಕಾಯ, ದೇಹ,ಶರೀರ;
ಮರುಗಿಸು  –     ದುಃಖಪಡು;
ಕಾಮ         –     ಬಯಕೆ
ವಚನದ ಸಾರಾಂಶ : ಅಮುಗೆ ರಾಯಮ್ಮ ಈ ವಚನದಲ್ಲಿ ಡಾಂಬಿಕ ಆಚರಣೆ ಮತ್ತು ಹುಟ್ಟು ಗುಣವನ್ನು
ಬದಲಿಸಲು ಸಾಧ್ಯವಿಲ್ಲ ಕಾಗೆ ನೋಡಲು ಕೋಗಿಲೆಯ ರೀತಿ ಇದ್ದ ಮಾತ್ರ ಕೋಗಿಲೆ ಸುಮಧುರ ಧ್ವನಿಯು ಕಾಗೆಗೆ
ಬರಲು ಸಾಧ್ಯವೇ? ಆಡಿನ ಮರಿ ಆನೆಯಾಗಲು ಸಾಧ್ಯವಿಲ್ಲ. ಸೀಳುನಾಯಿ ಕಾಡಿನಲ್ಲಿ ಓಡಾಡಿದ ಮಾತ್ರಕ್ಕೆ ಅದು
ಸಿಂಹನ ರೀತಿ ಬೇಟೆಯಾಡಲು ಸಾಧ್ಯವಿಲ್ಲ. ಅರಿವು, ಆಚಾರ, ಸಮ್ಯಜ್ಞಾನ  ಅರಿಯದೇ ಬರೀ ನಾಮವ
ಹೊತ್ತುಕೊಂಡು ತಿರುಗುವವರ ಮುಖವನ್ನು ನೋಡಲು ಸಾಧ್ಯವಿಲ್ಲ. ಜ್ಞಾನವಿಲ್ಲದ ಆಜ್ಞಾನಿಗಳ ಡಾಂಭಿಕ ಡಾಂಭಿಕ
ಮರುಳಾಗಬಾರದು . ಎಂದು ಮರುಳಾಗಬಾರದು. ಎಂದು ಸಂದೇಶ ನೀಡಿದ್ದಾರೆ.
ಶಿವಶರಣೆ ಲಿಂಗಮ್ಮ: ಈಕೆಯ ಕಾಲ ಕ್ರಿ.ಶ. ಸುಮಾರು ೧೧೬೦. ಹನ್ನೆರಡನೆಯ ಶತಮಾನದ ವಚನಕಾರ್ತಿಯರಲ್ಲಿ
ಒಬ್ಬಳು. ಕ್ಷೌರಿಕ ವೃತ್ತಿಯ ಹಡಪದ ಅಪ್ಪಣ್ಣನವರ ಧರ್ಮಪತ್ನಿ. ಈಕೆಯ ಅಂಕಿತನಾಮ ‘ಅಪ್ಪಣ್ಣಪ್ರಿಯ ಚನ್ನಬಸವಣ್ಣ’
ಎಂಬುದು. ವ್ಯಕ್ತಿಯ ಹುಟ್ಟಿಗೂ ಅವನ ಸಾಧಿಸುವ ಸಾಧನೆಗೂ ಏನೇನು ಸಂಬಂಧವಿಲ್ಲ  ಎಂಬುದನ್ನು
ನಿರೂಪಿಸಿದವಳು. ಈಕೆಯ ವಚನಗಳಲ್ಲಿ ಬೋಧನೆಯ ಧಾಟಿ, ಕಂಡದರ್ಶನ, ಬೀರಿದ ಬೆಳಕು, ಏರಿದ ನಿಲುವು,
ಸಾಧಕರಿಗೂ ಸಾಮಾನ್ಯರಿಗೂ ಶರಣರಿಗೂಇರುವ ವ್ಯತ್ಯಾಸವನ್ನು ತಿಳಿಸಿದ್ದಾಳೆ. ಎಲ್ಲೆಡೆಗೂ ಹರಿದಾಡುವ ಮನಸ್ಸನ್ನು
ಸ್ವೇಯಿಚೆಯಾಗಿ ಹರಿಯಲು  ಬಿಡದೆ ಬಯಲಲ್ಲಿ ಓಡಾಡುವ ಶರಣರ ಪಾದದಲ್ಲಿ ಬೆರೆಯಬೇಕೆನ್ನುವವಳು
ಆಶಯ ಭಾವ
ವಿದ್ಯೆ ಸಾಧಕನ ಸೊತ್ತು. ವಿದ್ಯೆವಿಹೀನನ ಬದುಕು ನಿರರ್ಥಕವೆಂಬುದು ಸರ್ವೇಸಾಮಾನ್ಯ ವಾದ ಅಭಿಪ್ರಾಯ. ಆದರೆ
ವಿದ್ಯೆಯನ್ನು ಗಳಿಸಲು ನಡೆಸುವ ಕಸರತ್ತು, ಪರಿಶ್ರಮಗಳು, ವಿದ್ಯೆ ವಿನಯವನ್ನು ತಂದು ಕೊಡದೆ ಸಂಪಾದನೆಗೆ
ದಾರಿಯಾಗಿರುವುದನ್ನು ನೆನೆದರೆ ವಿಷಾದವಾಗುತ್ತದೆ. ಆದರೆ ಅಂದೇ ನಮ್ಮ ಶಿವಶರಣರು ಜೀವನವೆಂಬ
ಪಾಠಶಾಲೆಯಲ್ಲಿ ಅರಿಷಡ್ವರ್ಗಗಳನ್ನು ನಿಗ್ರಹಿಸಿ ತಮ್ಮ ತಮ್ಮ ಕಾಯದ ಮೂಲಕ ನಿತ್ಯ ಸುಖಿಗಳಾಗಿ ಜೀವನವನ್ನು
ಸಾರ್ಥಕಗೊಳಿಸಿಕೊಂಡ ರೀತಿಯನ್ನುತಮ್ಮ  ಈ ವಚನದಲ್ಲಿ ಮಾರ್ಮಿಕವಾಗಿ ತಿಳಿಸಲಾಗಿದೆ.
ಪ್ರಸ್ತುತ ಆರಿಸಿ ನಿಗದಿ ಪಡಿಸಿರುವ ವಚನಗಳನ್ನು ಎಂ. ಎಂ. ಕಲಬುರ್ಗಿ ಅವರು ಸಂಪಾದಿಸಿ ಪ್ರಕಟಿಸಿರುವ ‘ಸಮಗ್ರ
ವಚನ ಸಂಪುಟ’ಗಳಿಂದ  ಆಯ್ದುಕೊಂಡಿದೆ.
ಮನವ ಗೆದ್ದೆಹನೆಂದು, ತನುವ ಕರಗಿಸಿ ಕಾಯವ ಮರುಗಿಸಿ,
ನಿದ್ರೆಯ ಕೆಡಿಸಿ ವಿದ್ಯೆಯ ಕಲಿತಿಹನೆಂಬ ಬುದ್ಧಿಹೀನರಿರಾ ನೀವು ಕೇಳಿರೋ
ನಮ್ಮ ಶರಣರು ಮನವನೆಂತು ಗೆದ್ದಿಹರೆಂದಡೆ
ಕಾಮ ಕ್ರೋಧವ ನೀಗಿ, ಲೋಭ ಮೋಹ ಮದಮತ್ಸರವ ಛೇದಿಸಿ,
ಆಸೆ ರೋಷವಳಿದು, ಜಗದ ಪಾಶವ ಬಿಟ್ಟು ,
ಆ ಮರುಗಿಸುವ ಕಾಯಕವನೆ ಪ್ರಸಾದ ಕಾಯಕವ ಮಾಡಿ ಸಲಹಿದರು
ಕೆಡಿಸುವ ನಿದ್ರೆಯೆನೆ ಯೋಗ ಸಮಾಧಿಯ ಮಾಡಿ,
ಸುಖವನೇಡಿಸಿ ಜಗವನೆ ಗೆದ್ದ ಶರಣರ ಬುದ್ಧಿಹೀನರೆತ್ತ ಬಲ್ಲರೊ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣ? – ಶಿವಶರಣೆ ಲಿಂಗಮ್ಮ

ಪದಗಳ ಅರ್ಥ

ಕ್ರೋಧ      –        ಸಿಟ್ಟು, ಕೋಪ;
ಲೋಭ     –         ಅತಿಯಾಸೆ;
ಮೋಹ     –          ಮಮತೆ, ಭ್ರಾಂತಿ; ಮದಗರ್ವ, ಸೊಕ್ಕು, ಅಮಲು;
ಮತ್ಸರ      –         ಅಸೂಹೆ , ಹೊಟ್ಟೆಕಿಚ್ಚು;
ಛೇದಿಸು     –        ಬೇರ್ಪಡಿಸು, ತುಂಡರಿಸು ;
ರೋಷ      –        ಸಿಟ್ಟು, ಕೋಪ;
ಪಾಶ        –         ಬಂಧನ  ಕಟ್ಟುಪಾಡು;
ಸಲಹು      –        ಕಾಪಾಡು, ರಕ್ಷಿಸು;
 

ವಚನದ ಸಾರಾಂಶ : ನಾವು ಮನಸನ್ನು ಗೆದ್ದನೆಂದು ಯೋಗಿಯಂತೆ ಸೋಗು ಹಾಕುವ ಬುದ್ಧಿ ಹೀನರಿಗೆ ನಿಜವಾದ ಮನಸ್ಸನ್ನು ಗೆದ್ದ ಜಂಗಮರಿಗೆ ಇರುವ ವ್ಯತ್ಯಾಸವನ್ನು ಶಿವಶರಣೆ ಲಿಂಗಮ್ಮ ಈ ವಚನದಲ್ಲಿ ತಿಳಿಸಿದ್ದಾರೆ. ಸಮಾಸದಲ್ಲಿ ಕೆಲವು ಜನರು ಕಾಯಕ ಮಾಡದೆ ಕೇವಲ ದೈಹಿಕ ದಂಡನೆ, ಹಿಂಸೆಯನ್ನು ಕೊಟ್ಟು, ನಿದ್ದೆಗೆಟ್ಟು ವಿದ್ಯೆ ಕಲಿತವರು ಎಂದು ಹೇಳಿಕೊಳ್ಳುತ್ತಾರೆ. ಆದರೆ ಶಿವಶರಣರು ಕಾಮ – ಕ್ರೋಧ, ಲೋಭ, ಮದ, ಮತ್ಸರಗಳನ್ನು ಗೆದ್ದು, ಆಸೆ ದುರಾಸೆಗಳನ್ನ  ಜಯಿಸಿ, ಜಗದ ಮೋಹವನ್ನು ತೋರೆದು ಕಾಯಕವೇ ಪ್ರಸಾದವೆಂದು ತಿಳಿದು, ನಿದ್ರೆಯನ್ನೇ ಯೋಗ ಸಮಾಧಿಯನ್ನಾಗಿ ಮಾಡಿಕೊಂಡರು. ಸುಖವನ್ನು ತೊರೆದು ಜಗತ್ತನ್ನ ಗೆದ್ದರು. ಇಂತಹ ಶರಣರನ್ನು ಬುದ್ಧಿ
ಹೀನರು ಹೇಗೆ ತಾನೇ ಅರಿಯಲು ಸಾಧ್ಯ ಎಂದು ಹೇಳುತ್ತಾರೆ. ವಚನಾಮೃತ ಪದ್ಯದ ಪ್ರಶ್ನೋತ್ತರಗಳು ನೋಟ್ಸ್
 

ಅ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ
 

1. ಕಲಿಯುಗದಲ್ಲಿ ಗುರುವು ಶಿಷ್ಯನಿಗೆ ಹೇಗೆ ಬುದ್ಧಿಯನ್ನು ಹೇಳಬೇಕಿದೆ?
ಉತ್ತರ :
ಕಲಿಯುಗದಲ್ಲಿ ಗುರುವು ಶಿಷ್ಯನಿಗೆ ವಂದಿಸಿ ಬುದ್ಧಿಯನ್ನು ಹೇಳಬೇಕಿದೆ.
 

2. ಕಾಯಕದಲಿ ನಿರತನಾದವನು ಯಾವುದನ್ನು ಮರೆಯಬೇಕು?
ಉತ್ತರ :
ಕಾಯಕದಲಿ ನಿರತನಾದವನು ಗುರುದರ್ಶನ, ಲಿಂಗ ಪೂಜೆಯನ್ನಾದರೂ ಮರೆಯಬೇಕು.
 

3. ಆಯ್ದಕ್ಕಿ ಮಾರಯ್ಯನ ಪ್ರಕಾರ ಕೈಲಾಸ ಯಾವುದು?
ಉತ್ತರ :
ಆಯ್ದಕ್ಕಿ ಮಾರಯ್ಯನ ಪ್ರಕಾರ ಕಾಯಕವೇ ಕೈಲಾಸ.
 

4. ಕಾಗೆಯು ಏನಾಗಲು ಸಾಧ್ಯವಿಲ್ಲ?
ಉತ್ತರ :
ಕಾಗೆಯು ಕೋಗಿಲೆಯಾಗಲು ಸಾಧ್ಯವಿಲ್ಲ.
 

5. ಯಾರ ಮುಖವನ್ನು ನೋಡಲಾಗದು?
ಉತ್ತರ :
ಅಮುಗೆ ರಾಯಮ್ಮ ಅವರು “ಅರಿವು ಆಚಾರ ಸಮ್ಯಜ್ಞಾನವನರಿಯದೆ ನಾಮವ ಹೊತ್ತುಕೊಂಡು ತಿರುಗುವ ಗಾವಿಲರ” ಮುಖವನ್ನು ನೋಡಲಾಗದು ಎಂದು ಹೇಳಿದ್ದಾರೆ.
 

6. ಶರಣರು ಕೆಡಿಸುವ ನಿದ್ದೆಯನ್ನು ಹೇಗೆ ಗೆದ್ದಿದ್ದಾರೆ?
ಉತ್ತರ : ಶರಣರು ಕೆಡಿಸುವ ನಿದ್ದೆಂi ÀÄನ್ನು ಯೋಗ ಸಮಾಧಿಯನ್ನು ಮಾಡಿ ಗೆದ್ದಿದ್ದಾರೆ.
 

ಆ. ಕೊಟ್ಟಿರುವ  ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ
 

1. ಶ್ರೀಗುರುವು ಶಿಷ್ಯರಿಗೆ ಬುದ್ಧಿ ಕಲಿಸುವುದು ಕಾಲಕಟ್ಟಳೆಗೆ ಹೇಗೆ ಒಳಪಟ್ಟಿದೆ? ವಿವರಿಸಿ.
ಉತ್ತರ :
ಅಲ್ಲಮಪ್ರಭು ಅವರು ತಮ್ಮ ವಚನದಲ್ಲಿ ಶ್ರೀಗುರು ಯಾವ ಯಾವ ಕಾಲದಲ್ಲಿ ಯಾವ ಯಾವ ರೀತಿ ಶಿಷ್ಯನಿಗೆ ಬುದ್ಧಯನ್ನು ಕಲಿಸಬೇಕು ಎಂದಿದ್ದಾರೆ. ಕೃತಯುಗದಲ್ಲಿ ಶ್ರೀಗುರುವು ಶಿಷ್ಯನಿಗೆ ಬಡಿದು ಬುದ್ಧಯನ್ನು ಕಲಿಸುತ್ತಿದ್ದನು. ತ್ರೇತಾಯುಗದಲ್ಲಿ ಶ್ರೀಗುರುವು ಶಿಷ್ಯನಿಗೆ ಬೈದು ಬುದ್ಧಿಯನ್ನು ಕಲಿಸುತ್ತಿದ್ದನು. ದ್ವಾಪರಯುಗದಲ್ಲಿ ಶ್ರಿಗುರುವು ಶಿಷ್ಯನಿಗೆ ಝಂಕಿಸಿ ಬುದ್ಧಿಯನ್ನು ಕಲಿಸುತ್ತಿದ್ದನು. ಆದರೆ ಕಲಿಯುಗದಲ್ಲಿ ಶ್ರೀಗುರು ತನ್ನ ಶಿಷ್ಯನಿಗೆ ವಂದಿಸಿ ಬುದ್ದಿಯನ್ನು ಕಲಿಸಬೇಕಾಗಿದೆ. ಈ ರೀತಿ ಗುರುವು ಶಿಷ್ಯನಿಗೆ ಬುದ್ದಿಯನ್ನು ಕಲಿಸುವುದು ಕಾಲಕಟ್ಟಳೆಗೆ ಒಲಪಟ್ಟಿದೆ.
 

2. ಆಯ್ದಕ್ಕಿ ಮಾರಯ್ಯನು ಕಾಯಕದ ಮಹತ್ವವನ್ನು ಹೇಗೆ ನಿರೂಪಿಸಿದ್ದಾನೆ?
ಉತ್ತರ :
ನಾವು ಮಾಡುವ ಕಾಯಕದಲ್ಲಿ ನಿಷ್ಠೆ ಹೇಗಿರಬೇಕೆಂದರೆ, ಕಾಯಕದಲ್ಲಿ ನಿರತನಾದಾಗ
ಗುರುದರ್ಶನವಾದರೂ ಮರೆಯಬೇಕು. ಲಿಂಗಪೂಜೆ ಮಡುವುದನ್ನು ಮರೆಯಬೇಕು. ಜಂಗಮ ಮುಂದೆ
ಬಂದು  ನಿಂತರು ಅವನ ಹಂಗು ಹರಿಯಬೇಕು. ಕಾಯಕವೇ ಕೈಲಾಸವಾದ ಕಾರಣ ಕೆಲಸಕ್ಕಿಂತ ಬೇರೆ
ದೇವರಿಲ್ಲ. ಕಾಯಕಕ್ಕೆ ಮೊದಲ ಸ್ಥಾನಕೊಡಬೇಕು ಎಂದು ಆಯ್ದಕ್ಕಿ ಮಾರಯ್ಯನು ಕಾಯಕದ ಮಹತ್ವವನ್ನು ತಿಳಿಸಿದ್ದಾರೆ.
 

3. ಅರಿವು, ಆಚಾರ, ಸಮ್ಯಜ್ಞಾನದ ಬಗ್ಗೆ ಅಮುಗೆರಾಯಮ್ಮನ ಅನಿಸಿಕೆ ಏನು?
ಉತ್ತರ :
“ಕಾಗೆಯ ಮರಿ ಕೋಗಿಲೆಯಾಗಲು ಸಾಧ್ಯವಿಲ್ಲ. ಆಡಿನ ಮರಿ ಆನೆಯಾಗಲು ಸಾಧ್ಯವಿಲ್ಲ. ಸೀಳು ನಾಯಿ ಸಿಂಹದ ಮರಿಯಾಗಲು ಸಾಧ್ಯವಿಲ್ಲ. ಅದೇ ರೀತಿ ಅರಿವು, ಆಚಾರ, ಸಮ್ಯಜ್ಞಾನವನ್ನು ಅರಿಯದ ಗಾವಿಲರು ಹಣೆಯ ತುಂಬಾ ಬುದ್ಧಿವಂತರು ಎಂಬ ನಾಮವ ಹೊತ್ತುಕೊಂಡು ತಿರುಗುವವರ ಕೈಯಲ್ಲಿ  ದೇವರನ್ನು ಕಾಣಲು ಸಾಧ್ಯವಿಲ್ಲ” ಎಂದು ಅಮುಗೆ ರಾಯಮ್ಮ ಅವರ ಅನಿಸಿಕೆಯಾಗಿದೆ.
 

4. ಬುದ್ಧಿ ಹೀನರು ಹೇಗೆ ವಿದ್ಯೆಯನ್ನು ಸಂಪಾದಿಸುತ್ತಾರೆ?
ಉತ್ತರ :
ತಮ್ಮ ಮನವ ಗೆದ್ದವೆಂದು ಯೋಗಿಯ ಸೋಗು ಹಾಕುವ ಬುದ್ಧಿಹೀನರಿಗೂ ನಿಜವಾಗಿ ತಮ್ಮ
ಮನವನ್ನು ಗೆದ್ದ ಜಂಗಮರಿಗೂ ಇರುವ ವ್ಯತ್ಯಾಸವನ್ನು ಶಿವಶರಣೆ ಲಿಂಗಮ್ಮ ತಿಳಿಸುತ್ತಾ ಬುದ್ಧಿಹೀನರು ಅರಿಷ್ಟವರ್ಗಗಳನ್ನ  ಗೆಲ್ಲಲಾರದೆ ಮನವನ್ನು ಗೆದ್ದಿರುವೆಂದು ಹೇಳುತ್ತಾರೆ. ಜಗದ ಪಾಶವನ್ನು ಬಿಡದೆ, ಕಾಯಕವನ್ನು ಮಾಡದೆ, ತನುವನ್ನು ಕರಗಿಸಿ, ಕಾಯವ ಮರುಗಿಸುತ್ತಾರೆ. ಯೋಗ ಸಮಾಧಿಯನ್ನು ಮಾಡದೆ ಕೇವಲ ದೈಹಿಕ ದಂಡನೆ ಮಾಡಿ, ಮನವನ್ನು ಶುದ್ಧಮಾಡಿಕೊಳ್ಳದೆ; ನಿದ್ದೆಗೆಟ್ಟು ವಿದ್ಯೆಯನ್ನು ಸಂಪಾದಿಸುತ್ತಾರೆ .
 

5. ಶಿವಶರಣರು ಜಗವನ್ನೇ ಗೆದ್ದಿಹ ವಿಚಾರದಲ್ಲಿ ಲಿಂಗಮ್ಮನ ಅನಿಸಿಕೆಯೇನು?
ಉತ್ತರ :
ಶಿವಶರಣರು “ಕಾಮ ಕ್ರೋಧವನ್ನು ನೀಗಿ ಲೋಭ, ಮೋಹವನ್ನು ಬಿಟ್ಟು, ಮದ, ಮತ್ಸರವನ್ನು ಛೇದಿಸಿ  ಮನವನ್ನು ಗೆಲ್ಲುತ್ತಾರೆ. ಆಸೆ, ರೋಷಗಳನ್ನು ತೋರೆದು ಕಾಯಕವನ್ನೇ ಪ್ರಸಾದವೆಂದು ತಿಳಿದು; ನಿದ್ದೆಯನ್ನೇ ಯೋಗ ಸಮಾಧಿಯನ್ನಾಗಿ ಮಾಡಿಕೊಂಡು ಸುಖವನ್ನು ತೊರೆದು ಜಗತ್ತನ್ನೇ ಗೆದ್ದವರೆಂದರೆ ಶರಣರು. ಅಂತಹವರನ್ನು ಬುದ್ಧಿ ಹೀನರು ಹೇಗೆ ತಾನೆ ಅರಿಯಲು ಸಾಧ್ಯ ಎಂದು ಲಿಂಗಮ್ಮನವರು ಅಭಿಪ್ರಾಯಪಟ್ಟಿದ್ದಾರೇ .
 

ಇ. ಕೊಟ್ಟಿರುವ ಪ್ರಶ್ನೆಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ.
 

1. ವಚನಾಮೃತದಲ್ಲಿ ವ್ಯಕ್ತವಾಗಿರುವ ‘ಕಾಯಕ ತತ್ವದ’ ಮಹತ್ವವನ್ನು ವಿವರಿಸಿ.
ಉತ್ತರ :
ಆಯ್ದಕ್ಕಿ ಮಾರಯ್ಯ ಅವರು ತಮ್ಮ ಈ ವಚನದಲ್ಲಿ ಕಾಯಕದ ಮಹತ್ವವನ್ನು ತಿಳಿಸಿದ್ದಾರೆ.
ಕಾಯಕವೆಂದರೆ ಮನುಷ್ಯನು ಯಾವುದಾದರೊಂದು ದೇಹಿಕ ಶ್ರಮದಲ್ಲಿ ತೊಡಗಿರುವುದು. ಮನುಷ್ಯನು ಇಂತಹ ಕಾಯಕದಲ್ಲಿಯೇ ದೇವರನ್ನು ಕಾಣಬೇಕು. ಅವವರ ಕಾಯಕವೇ ಅವರವರ ದೇವರು. ಈ ಕಾಯಕವನ್ನು ನಿಷ್ಠೆ, ಭಕ್ತಿಯಿಂದ ಮಾಡಬೇಕು. ನಾವು ಕಾಯಕದಲ್ಲಿ ತೊಡಗಿದ್ದಾಗ ಗುರುದರ್ಶನವಾದರೂ, ಲಿಂಗಪೂಜೆಯಾದರೂ ಮರೆಯಬೇಕು. ನಡೆದಾಡುವ ದೇವರು ಜಂಗಮರೇ ಮುಂದೆ ಬಂದು ನಿಂತಿದ್ದರೂ ಮೊದಲು ಕಾಯಕ ಮಾಡಿ ನಂತರ ಅವರನ್ನು ನೋಡಿ, ಮಾತನಾಡಿಸಬೇಕು. ಏಕೆಂದರೆ ಕಾಯಕ ಗುರು,ಲಿಂಗಪೂಜೆ, ಜಂಗಮರನ್ನು ಮೀರಿದ್ದೂ ‘ಕಾಯಕವೇ ಕೈಲಾಸ’ ಎಂದು ಭಾವಿಸಬೇಕು. ದೇವರಿಗಿಂತಕೆಲಸಕ್ಕೆ ಮೊದಲ ಸ್ಥಾನಕೊಡಬೇಕು ಎಂದು ಹೇಳಿದ್ದಾರೆ .
ಕೆಲವರು ಕೆಲಸ ಮಾಡದೆ ಕೇವಲ ದೈಹಿಕ ಹಿಂಸೆಯನ್ನು ಮಾಡಿ, ಮನಸ್ಸನ್ನು ಗೆದ್ದೆ ಎಂದು ಹೇಳುತ್ತಾರೆ,
ನಿಜವಾದ ಕಾಯಕವೇ ಪ್ರಸಾದ ಎಂಬುದನ್ನು ಮರೆಯುತ್ತಾರೆ.
 

ಈ. ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ
 

1. “ನಿಮ್ಮ ಕಾಲದ ಕಟ್ಟಳೆಯ ಕಲಿತನಕ್ಕೆ ನಾ ಬೆರಗಾದೆ”
ಆಯ್ಕೆ :
ಅಲ್ಲಮಪ್ರಭುವಿನ ವಚನದ ಈ ವಾಕ್ಯವನ್ನು ಎಂ.ಎಂ ಕಲಬುರ್ಗಿ ಅವರು ಸಂಪಾದಿಸಿರುವ ‘ಸಮಗ್ರ ವಚನ ಸಂಪುಟ’ ಕೃತಿಯಿಂದ ಆಯ್ದ ‘ವಚನಾಮೃತ’ಎಂಬ ಪದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ : ವಿವಿಧ ಕಾಲಗಟ್ಟದಲ್ಲಿ ಶ್ರೀಗುರು ತನ್ನ ಶಿಷ್ಯನಿಗೆ ಯಾವ ರೀತಿ ಬುದ್ಧಿಯನ್ನು ಕಲಿಸುತ್ತಾನೆ ಎಂದು ವರ್ಣಿಸುತ್ತಾ ಕೃತಯುಗದಲ್ಲಿ ಬಡಿದು, ತ್ರೇತಾಯುಗದಲ್ಲಿ ಬೈದು, ದ್ವಾಪರಯುಗದಲ್ಲಿ ಗದರಿಸಿ, ಕಲಿಂಯುಗದಲ್ಲಿ ವಂದಿಸಿ ಬುದ್ದಿಯನ್ನು ಕಲಿಸಬೇಕಾಗಿದೆ ಎಂದು ಹೇಳುವ ಸಂದರ್ಭದಲ್ಲಿ ಅಲ್ಲಮಪ್ರಭು ಈ ಮಾತನ್ನು ಹೇಳಿದ್ದಾರೆ.
ಸ್ವಾರಸ್ಯ : ಕಾಲ ಬದಲಾದಂತೆ ಕಲಿಯುವವರು, ಕಲಿಸುವವರು ಬದಲಾಗುತ್ತಾರೆ. ಬದಲಾದ ಕಾಲಮಾನಕ್ಕೆ ಶ್ರೀಗುರು ಬುದ್ದಿ ಕಲಿಸುವ ವಿಧಾನದಲ್ಲಿ ಬದಲಾಣೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂಬ ಅಂಶ ಸ್ವಾರಸ್ಯಕರವಾಗಿದೆ.
 

2. “ನಾಮವನೊತ್ತುಕೊಂಡು ತಿರುಗುವ ಗಾವಿಲರ ಮುಖವ ನೋಡಲಾಗದು”
ಆಯ್ಕೆ :
ಅಮುಗೆ ರಾಯಮ್ಮನವರ ಈ ವಚನದ ವಾಕ್ಯವನ್ನು ಎಂ.ಎಂ ಕಲಬುರ್ಗಿ ಅವರು ಸಂಪಾದಿಸಿರುವ ‘ಸಮಗ್ರ ವಚನ ಸಂಪುಟ’ ಕೃತಿಯಿಂದ ಆಯ್ದ ‘ವಚನಾಮೃತ’ಎಂಬ ಪದ್ಯಭಾಗದಿಂದ ಆರಿಸಲಾಗಿದೆ
ಸಂದರ್ಭ : ಕಾಗೆ ಕೋಗಿಲೆಯಾಗಲು, ಆಡಿನ ಮರಿ ಆನೆಯಾಗಲು, ಸೀಳುನಾಯಿ ಸಿಂಹವಾಗಲು ಸಾಧ್ಯವಿಲ್ಲ. ಹಾಗೆಯೇ ಅರಿವು, ಆಚಾರ,ಸಮ್ಯಜ್ಞಾನವನರಿಯದೆ ದೆ ಕೇವಲ ಜ್ಞಾನಿಗಳು ಎಂಬ ನಾಮಹೊತ್ತು ಕೊಂಡು ತಿರುಗು ದಡ್ಡರ ಮುಖ ನೋಡಲು ಸಾಧ್ಯವಿಲ್ಲ ಎಂದು ಹೇಳುವ ಸಂದರ್ಭದಲ್ಲಿ ಅಮುಗೆ ರಾಯಮ್ಮ ಈ ಮಾತನ್ನು ಹೇಳುತ್ತಾರೆ.
ಸ್ವಾರಸ್ಯ : ಭಗವಂತನ ಸಾಕ್ಷಾತ್ಕಾರಕ್ಕಾಗಿ ಜ್ಞಾನ ಸಂಪಾದನೆ ಮಾಡಲೇಬೇಕು. ಬರೀ ಜ್ಞಾನಿ ಎಂಬ ಹೆಸರು ಸಾಲದು ಎಂಬ ಮಾತು ಸ್ವಾರಸ್ಯಕರವಾಗಿದೆ.
 

3. “ಜಂಗಮ ಮುಂದೆ ನಿಂದಿದ್ದಡೂ ಹಂಗು ಹರಿಯಬೇಕು”
ಆಯ್ಕೆ :
ಆಯ್ದಕ್ಕಿ ಮಾರಯ್ಯನವರ ಈ ವಚನದ ವಾಕ್ಯವನ್ನು ಎಂ.ಎಂ  ಕಲಬುರ್ಗಿ ಅವರು ಸಂಪಾದಿಸಿರುವ ‘ಸಮಗ್ರ ವಚನ ಸಂಪುಟ’ ಕೃತಿಯಿಂದ ಆಯ್ದ ‘ವಚನಾಮೃತ’ಎಂಬ ಪದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ : ನಾವು ಕೆಲಸ, ಕಾಯಕದಲ್ಲಿ ನಿರತನಾದರೆ ಗುರು ದರ್ಶನ, ಲಿಂಗಪೂಲೆ, ಜಂಗಮನ
ದರ್ಶನವನ್ನು ಮರೆತು ಕಾಯಕದಲ್ಲಿ ತೊಡಬೇಕು ಎಂದು ಕಾಯಕದ ಮಹತ್ವವನ್ನು ತಿಳಿಸು ಸಂದರ್ಭದಲ್ಲಿ ಈ ಮಾತನ್ನು ಆಯ್ದಕ್ಕಿ ಮಾರಯ್ಯ ಹೇಳಿದ್ದಾರೆ.
ಸ್ವಾರಸ್ಯ : ಕಾಯಕವೇ ಕೈಲಾಸ, ಕಾಯಕವೇ ದೇವರು. ಎಂದು ಪ್ರತಿಪಾದಿಸಿರುವುದು ಸ್ವಾರಸ್ಯಕರವಾಗಿದೆ.
 

4. “ ಕಾಯಕವನೆ ಪ್ರಸಾದ ಕಾಯಕ ಮಾಡಿ ಸಲಹಿದರು ”
ಆಯ್ಕೆ :
ಶಿವಶರಣೆ ಲಿಂಗಮ್ಮ ಅವರ ವಚನದ ಈ ವಾಕ್ಯವನ್ನು ಎಂ.ಎಂ ಕಲಬುರ್ಗಿ ಅವರು ಸಂಪಾದಿಸಿರುವ  ‘ಸಮಗ್ರ ವಚನ ಸಂಪುಟ’ ಕೃತಿಯಿಂದ ಆಯ್ದ ‘ವಚನಾಮೃತ’ಎಂಬ ಪದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ : ಬುದ್ಧಿಹೀನರು ಮತ್ತು ಶಿವಶರಣೆಯ ನಡುವಿನ ವ್ಯತ್ಯಾಸವನ್ನು ತಿಳಿಸುತ್ತಾ ಬುದ್ಧಹೀನರು ಕಾಯಕ ಮಾಡದೆ ದೇಹಕ್ಕೆ ಹಿಂಸೆಯನ್ನು ಮಾಡಿ ವಿದ್ಯೆ ಕಲಿಯುತ್ತಾರೆ. ಆದರೆ ಶಿವಶರಣೆಯರು ಕಾಯಕವನ್ನೇ ಪ್ರಸಾದವೆಂದು ತಿಳಿದು ಬದುಕಿದರು ಎಂದು ಹೇಳುವ ಸಂದರ್ಭದಲ್ಲಿ ಈ ಮಾತು ಬಂದಿದೆ.
ಸ್ವಾರಸ್ಯ : ಬುದ್ಧಿಹೀನರು ಸುಮ್ಮನೆ ಕಾಯವನ್ನು ಕರಗಿಸುತ್ತಾರೆ, ಶಿವಶರಣೆಯರು ತಮ್ಮ ಕಾಯವನ್ನು
ಕಾಯಕದಲ್ಲಿ ತೊಡಗಿಸಿ ಪ್ರಸಾದ ಕಾಯವಾಗಿ ಮಾಡುತ್ತಾರೆ ಎಂಬ ಅಂಶ ಸ್ವಾರಸ್ಯಕರವಾಗಿದೆ.
 

ಉ. ಕೊಟ್ಟಿರುವ ನಾಲ್ಕು ಉತ್ತರಗಳಲ್ಲಿ ಸರಿಯಾದ ಉತ್ತರ ಪದವನ್ನು ಆರಿಸಿ ಬರೆಯಿರಿ
 

1. ತ್ರೇತಾಯುಗದಲ್ಲಿ ಶ್ರೀಗುರುವು ಶಿಷ್ಯನಿಗೆ ಬುದ್ಧಿಯನ್ನು ಹೀಗೆ ಕಲಿಸುತ್ತಿದ್ದರು :
ಅ) ಬಡಿದು  ಆ) ಬೈದು  ಇ) ವಂದಿಸಿ   ಈ) ಝಂಕಿಸಿ
 

2. ಆಯ್ದಕ್ಕಿ ಮಾರಯ್ಯನ ಅಂಕಿತ ನಾಮ :
 ಅ) ಗುಹೇಶ್ವರ  ಆ) ಅಮುಗೇಶ್ವರ    ಇ) ಅಮರೇಶ್ವರಲಿಂಗ    ಈ) ಅಪ್ಪಣ್ಣಪ್ರಿಯ.
 

3. ‘ಕೋಗಿಲೆ’ ಪದದ ತದ್ಭವ ರೂಪ :
ಅ) ಕೋಕಿಲ    ಆ) ಸಂಕಿಲಾ    ಇ) ಕೋಕಿಲೆ     ಈ) ಕೊಕಿಲಾ
 

4. ‘ಜಂಗಮ’ ಪದದ ವಿರುದ್ಧಾರ್ಥಕ ಪದ :
ಅ) ವಿರಕ್ತಿ    ಆ) ವಿದ್ವಾಂಸ      ಇ) ಗುರು       ಈ) ಸ್ಥಾವರ
 

5. “ತನುವ ಕರಗಿಸಿ ಕಾಯ ಮರುಗಿಸಿ ವಿದ್ಯೆಯನ್ನು ಕಲಿತಿಹೆ ” ಎನ್ನುವವರು :
ಅ) ಶಿವಶರಣರು         ಆ) ಬುದ್ಧಿಹೀನರು        ಇ) ಸಾಮಾನ್ಯರು     ಈ) ವಿದ್ಯಾರ್ಥಿಗಳು
 

ಸರಿ ಉತ್ತರಗಳು
1. ಅ) ಬಡಿದು
2. ಇ) ಅಮರೇಶ್ವರ ಲಿಂಗ
3. ಅ) ಕೋಕಿಲ
4. ಈ) ಸ್ಥಾವರ
5. ಆ) ಬುದ್ಧಹೀನರು :
 

ಊ. ಗುಂಪಿಗೆ ಸೇರದ ಪದಗಳನ್ನು ಆಯ್ದು ಬರೆಯಿರಿ
1. ಆನೆ ಗಜ ಹಯ ಕರಿ
2. ಬಸವಣ್ಣ ಕನಕದಾಸರು ಅಲ್ಲಮಪ್ರಭು ಅಮುಗೆ ರಾಯಮ್ಮ
3. ಕಾಮ ಕ್ರೋಧ ಧನ ಲೋಭ
4. ದ್ವಾಪರಯುಗ ಕೃತಯುಗ ಸುವರ್ಣಯುಗ  ಕಲಿಯುಗ
5. ತನು ದೇಹ ಮಾಯ ಕಾಯ
 

ಸರಿ ಉತ್ತರಗಳು.
1. ಹಯ
2. ಕನಕದಾಸರು
3. ಧನ
4. ಸುವರ್ಣಯುಗ
5. ಮಾಯ
 

ಅ. ಕೊಟ್ಟಿರುವ ಪದ್ಯಭಾಗವನ್ನು ಕಂಠಪಾಠ ಮಾಡಿ
1. ಆಯ್ದಕ್ಕಿಮಾರಯ್ಯನವರ ವಚನಗಳ ಮೊದಲ ನಾಲ್ಕು ಸಾಲುಗಳು. ಕಾಯಕದಲ್ಲಿ ನಿರತನಾಡೆ ಗುರುದರ್ಶನವಾದಡೂ ಮರೆಯಬೇಕು; ಲಿಂಗಪೂಜೆಯಾದಡೂ ಮರೆಯಬೇಕು ಜಂಗಮ ಮುಂದೆ ನಿಂದಿದ್ದಡೂ ಹಂಗ ಹರಿಯಬೇಕು.
 

2. ಅಮ್ಮುಗೆ ರಾಯಮ್ಮನವರ ವಚನಗಳ ಮೊದಲ ನಾಲ್ಕು ಸಾಲುಗಳು.
ಕಾಗೆಯಮರಿ ಕೋಗಿಲೆಯಾಗಬಲ್ಲುದೆ ?
ಆಡಿನಮರಿ ಆನೆಯಾಗಬಲ್ಲದೆ ?
ಸೀಳ (ಳು) ನಾಯಿ ಸಿಂಹದ ಮರಿಯಾಗಬಲ್ಲುದೆ ?
ಅರಿವು ಆಚಾರ ಸಮ್ಯಜ್ಞಾನವನರಿಯದೆ.






You Might Like

Post a Comment

0 Comments