Recent Posts

ಸಾರ್ವಜನಿಕ ಹಣಕಾಸು ಮತ್ತು ಆಯ-ವ್ಯಯ - ೧೦ ನೇ ತರಗತಿ ಸಮಾಜ ವಿಜ್ಞಾನ ಪುಸ್ತಕದ ಪ್ರಶ್ನೋತ್ತರಗಳು

ಸಾರ್ವಜನಿಕ ಹಣಕಾಸು ಮತ್ತು ಆಯ-ವ್ಯಯ

I. ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ,

1. ‘ವೈಯಕ್ತಿಕ ಹಣಕಾಸು’ ಎಂದರೇನು?

ವ್ಯಕ್ತಿ ಅಥವಾ ಕುಟುಂಬದ ವರಮಾನ, ವೆಚ್ಚ ಮತ್ತು ಸಾಲದ ನಿರ್ವಹಣೆಯ ಬಗ್ಗೆ ತಿಳಿಸಿಕೊಡುವುದನ್ನು ‘ವೈಯಕ್ತಿಕ ಹಣಕಾಸು’ ಎನ್ನುತ್ತೇವೆ.

2. ಸಾರ್ವಜನಿಕ ಹಣಕಾಸಿನ ಅರ್ಥ ತಿಳಿಸಿ.
ಸರ್ಕಾರದ ವರಮಾನ, ವೆಚ್ಚ ಹಾಗೂ ಸಾಲಗಳ ನಿರ್ವಹಣೆಯನ್ನು ಕುರಿತು ಅಧ್ಯಯನ ಮಾಡುವುದೇ ಸಾರ್ವಜನಿಕ ಹಣಕಾಸು

3. ಕೋಶೀಯ ನೀತಿ ಅಥವಾ ವಿತ್ತೀಯ ನೀತಿ ಎಂದರೇನು?
ಆರ್ಥಿಕ ಅಭಿವೃದ್ಧಿ ಮತ್ತು ಆರ್ಥಿಕ ಸ್ಥಿರತೆಯನ್ನು ಸಾಧಿಸುವ ಉದ್ದೇಶದಿಂದ ಸರ್ಕಾರವು ತನ್ನ ವರಮಾನ, ವೆಚ್ಚ ಮತ್ತು ಸಾಲಕ್ಕೆ ಸಂಬಂಧಿಸಿದಂತೆ ಕಾಲ ಕಾಲಕ್ಕೆ ಅನುಸರಿಸುವ ನೀತಿಗೆ ಕೋಶೀಯ ನೀತಿ ಅಥವಾ ವಿತ್ತೀಯ ನೀತಿ ಎನ್ನುತ್ತಾರೆ

4. ಭಾರತದಲ್ಲಿ ಹಣಕಾಸು ವರ್ಷವು ಯಾವಾಗ ಆರಂಭವಾಗಿ ಯಾವಾಗ ಮುಕ್ತಾಯವಾಗುತ್ತದೆ?
ಭಾರತದಲ್ಲಿ ಹಣಕಾಸು ವರ್ಷವು ಏಪ್ರಿಲ್ 1ರಂದು ಪ್ರಾರಂಭವಾಗಿ ಅದರ ಮುಂದಿನ ವರ್ಷದ ಮಾರ್ಚ್ 31ಕ್ಕೆ ಮುಕ್ತಾಯವಾಗುತ್ತದೆ.

5. ಆಯವ್ಯಯ ಎಂದರೇನು?
ಸರ್ಕಾರದ ಒಂದು ವರ್ಷದ ವರಮಾನ ಮತ್ತು ವೆಚ್ಚಗಳನ್ನು ಕುರಿತು ತಯಾರಿಸಿದ ಅಂದಾಜು ಪಟ್ಟಿಯನ್ನು ಆಯ-ವ್ಯಯ ಪತ್ರ ಅಥವಾ ಮುಂಗಡ ಪತ್ರ ಎಂದು ಕರೆಯುತ್ತಾರೆ.

6. ಭಾರತದಲ್ಲಿ ಆಯ-ವ್ಯಯವನ್ನು ಮಂಡಿಸುವವರು ಯಾರು?
ಹಣಕಾಸು ಸಚಿವರು

7. ಆಯ-ವ್ಯಯ ಪತ್ರದ ಮೂರು ವಿಧಗಳು ಯಾವುವು?
•    ಉಳಿತಾಯ ಆಯ-ವ್ಯಯ
•    ಕೊರತೆಯ ಆಯ-ವ್ಯಯ
•    ಸಮತೋಲನ ಆಯ ವ್ಯಯ

8. ಸಾರ್ವಜನಿಕ ವೆಚ್ಚ ಎಂದರೇನು?
ಸರ್ಕಾರವು ರಾಷ್ಟ್ರದ ರಕ್ಷಣೆ, ಆಡಳಿತ ನಿರ್ವಹಣೆ, ಆರ್ಥಿಕ ಅಭಿವೃದ್ಧಿ ಹಾಗೂ ಜನರ ಯೋಗಕ್ಷೇಮದ ದೃಷ್ಟಿಯಿಂದ ವಿವಿಧ ಚಟುವಟಿಕೆಗಳಿಗಾಗಿ ಹಣವನ್ನು ವೆಚ್ಚ ಮಾಡುತ್ತದೆ. ಇದನ್ನು ಸಾರ್ವಜನಿಕ ವೆಚ್ಚ ಎನ್ನುತ್ತಾರೆ.

9. ಕಂದಾಯ ವರಮಾನ ಎಂದರೇನು?
ಸರ್ಕಾರವು ವಿವಿಧ ತೆರಿಗೆಗಳು ಮತ್ತು ತೆರಿಗೆಯೇತರ ಮೂಲಗಳಿಂದ ಸಂಗ್ರಹಿಸುವ ವರಮಾನವನ್ನು ಕಂದಾಯ ವರಮಾನ ಎಂದು ಕರೆಯುತ್ತಾರೆ

10. ತೆರಿಗೆ ಎಂದರೇನು?
ಪ್ರಜೆಗಳು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸರ್ಕಾರಕ್ಕೆ ಕೊಡಬೇಕಾದ ಕಡ್ಡಾಯ ವಂತಿಗೆಯನ್ನು ತೆರಿಗೆ ಎನ್ನುತ್ತೇವೆ.

11. ಪ್ರಗತಿಪರ ತೆರಿಗೆ ನೀತಿ ಎಂದರೇನು?
ಶ್ರೀಮಂತರು ಬಳಸುವ ಸರಕು-ಸೇವೆಗಳ ಮೇಲೆ ಹೆಚ್ಚಿನ ತೆರಿಗೆಯನ್ನೂ ಮತ್ತು ಸಾಮಾನ್ಯ ಜನರು ಬಳಸುವ ಸರಕು-ಸೇವೆಗಳ ಮೇಲೆ ಕಡಿಮೆ ತೆರಿಗೆಯನ್ನು ವಿಧಿಸುತ್ತಿದೆ. ಸರ್ಕಾರ ತೆರಿಗೆ ವಿಧಿಸುವಲ್ಲಿ ಅನುಸರಿಸುವ ಈ ನೀತಿಯನ್ನು ಪ್ರಗತಿಪರ ತೆರಿಗೆ ನೀತಿ ಎನ್ನುತ್ತಾರೆ.

12. ಪ್ರತ್ಯಕ್ಷ ತೆರಿಗೆ ಎಂದರೇನು?
ಸರ್ಕಾರವು ಯಾರ ಮೇಲೆ ತೆರಿಗೆಯನ್ನು ವಿಧಿಸುತ್ತದೆಯೋ ಅವರೇ ಆ ತೆರಿಗೆಯನ್ನು ಪಾವತಿಸಿದರೆ, ಅಂತಹ ತೆರಿಗೆಯನ್ನು ಪ್ರತ್ಯಕ್ಷ ಎನ್ನುತ್ತಾರೆ.

13. ಪರೋಕ್ಷ ತೆರಿಗೆ ಎಂದರೇನು?
ಸರ್ಕಾರವು ವಿಧಿಸುವ ತೆರಿಗೆಯನ್ನು ಇತರರ ಮೇಲೆ ವರ್ಗಾಯಿಸಲು ಸಾಧ್ಯವಿದ್ದರೆ, ಅಂತಹ ತೆರಿಗೆಯನ್ನು ಪರೋಕ್ಷ ತೆರಿಗೆ ಎನ್ನುತ್ತಾರೆ

14. ಒಂದೇ ಸರಕು ಮತ್ತು ಸೇವಾ ತೆರಿಗೆ ಯಾವಾಗ ಜಾರಿಗೆ ಬಂದಿತು?
ಜುಲೈ 1, 2017

15. ಹೂಡಿಕೆ ಹಿಂತೆಗೆತ ಎಂದರೇನು?
ಸರ್ಕಾರವು ಸಾಲವಲ್ಲದೆ ಇತರೆ ಮೂಲಗಳಿಂದಲೂ ಬಂಡವಾಳ ವರಮಾನವನ್ನು ಸಂಗ್ರಹಿಸುತ್ತದೆ. ಅದು ಸಾರ್ವಜನಿಕ ಉದ್ಯಮಗಳಲ್ಲಿ ಹೂಡಿರುವ ತನ್ನ ಬಂಡವಾಳವನ್ನು ಹಿಂದಕ್ಕೆ ಪಡೆಯುತ್ತದೆ. ಇದಕ್ಕೆ ಹೂಡಿಕೆ ಹಿಂತೆಗೆತ ಎನ್ನುತ್ತಾರೆ

16. ವಿತ್ತೀಯ ಕೊರತೆ ಎಂದರೇನು?
ಆಯವ್ಯಯದಲ್ಲಿ ಸರ್ಕಾರದ ಕಂದಾಯ ವರಮಾನ ಮತ್ತು ಸಾಲೇತರ ಬಂಡವಾಳ ವರಮಾನಗಳಿಗಿಂತ ಸರ್ಕಾರದ ಒಟ್ಟು ವೆಚ್ಚ ಹೆಚ್ಚಾಗಿದ್ದರೆ, ಅದನ್ನು ವಿತ್ತೀಯ ಕೊರತೆ ಎನ್ನುತ್ತಾರೆ.

17. ವಿತ್ತೀಯ ಕೊರತೆಯ ಸೂತ್ರ ಬರೆಯಿರಿ,
ವಿತ್ತೀಯ ಕೊರತೆ = (ಕಂದಾಯ ವರಮಾನ + ಸಾಲೇತರ ಬಂಡವಾಳ ವರಮಾನ) – ಒಟ್ಟು ವೆಚ್ಚ

18. ರೆವೆನ್ಯೂ ಕೊರತೆಯ ಸೂತ್ರ ಬರೆಯಿರಿ
ರೆವೆನ್ಯೂ ಕೊರತೆ = ರೆವೆನ್ಯೂ ಖಾತೆಯ ವರಮಾನ- ರೆವೆನ್ಯೂ ಖಾತೆಯ ವೆಚ್ಚ

19. ಪ್ರಾಥಮಿಕ ಕೊರತೆಯ ಸೂತ್ರ ಬರೆಯಿರಿ
ಪ್ರಾಥಮಿಕ ಕೊರತೆ = ವಿತ್ತೀಯ ಕೊರತೆ – ಬಡ್ಡಿಪಾವತಿ

20. ಮುಂಗಡಪತ್ರದ ಸೂತ್ರ ಬರೆಯಿರಿ
ಮುಂಗಡಪತ್ರ ಅಥವಾ ಆಯ ವ್ಯಯ ಕೊರತೆ = ಒಟ್ಟು ವರಮಾನ – ಒಟ್ಟು ವೆಚ್ಚ

21. ಕೋಶೀಯ ಹೊಣೆಗಾರಿಕೆ ಮತ್ತು ಮುಂಗಡಪತ್ರ ನಿರ್ವಹಣೆ ಕಾಯ್ದೆ ಯಾವಾಗ ಜಾರಿಗೆ ಬಂತು?
2003

22, ಉಳಿತಾಯ ಆಯ-ವ್ಯಯ ಎಂದರೇನು?
ಸರ್ಕಾರದ ವರಮಾನವು ಅದರ ವೆಚ್ಚಕ್ಕಿಂತ ಹೆಚ್ಚಾಗಿದ್ದರೆ, ಅದನ್ನು ಉಳಿತಾಯ ಆಯ-ವ್ಯಯ ಎನ್ನುವರು

23, ಕೊರತೆಯ ಆಯ-ವ್ಯಯ ಎಂದರೇನು?
ವರಮಾನಕ್ಕಿಂತ ವೆಚ್ಚವು ಹೆಚ್ಚಾಗಿದ್ದರೆ ಅದನ್ನು ಕೊರತೆಯ ಆಯ-ವ್ಯಯ ಎನ್ನುವರು

24. ಸಮತೋಲನ ಆಯ- ವ್ಯಯ ಎಂದರೇನು?
ವರಮಾನ ಮತ್ತು ವೆಚ್ಚಗಳೆರಡೂ ಸಮನಾಗಿದ್ದರೆ, ಅದನ್ನು ಸಮತೋಲನ ಆಯ ವ್ಯಯ ಎನ್ನುವರು

25. ಪ್ರಮುಖ ಪ್ರತ್ಯಕ್ಷ ತೆರಿಗೆಗಳನ್ನು ಹೆಸರಿಸಿ.
ವರಮಾನ ತೆರಿಗೆ, ಕಂಪನಿ ತೆರಿಗೆ, ಸಂಪತ್ತಿನ ತೆರಿಗೆ, ಸ್ಟಾಂಪ್ ಶುಲ್ಕ

26. ಪ್ರಮುಖ ಪರೋಕ್ಷ ತೆರಿಗೆಗಳನ್ನು ಹೆಸರಿಸಿ.
ಕೇಂದ್ರ ಅಬಕಾರಿ ತೆರಿಗೆ, ಮೌಲ್ಯವರ್ಧಿತ ತೆರಿಗೆ, ಆಮದು ರಫ್ತು ಸುಂಕಗಳು, ಸೇವಾ ತೆರಿಗೆ

27. ಕೊರತೆ ಹಣಕಾಸು ಎಂದರೇನು?
ಭಾರತೀಯ ರಿಜರ್ವ್ ಬ್ಯಾಂಕಿನಿಂದ ಸಾಲ ಪಡೆಯುವುದು ಮತ್ತು ಹೊಸ ಹಣ ಸೃಷ್ಟಿಸುವುದನ್ನು ಕೊರತೆ ಹಣಕಾಸು ಎಂದು ಕರೆಯುತ್ತೇವೆ.

28. ಸರ್ಕಾರವು ಯಾವ ವಿಧದ ತೆರಿಗೆಗಳನ್ನು ವಿಧಿಸುತ್ತದೆ?
ಅ) ಪ್ರತ್ಯಕ್ಷ ತೆರಿಗೆಗಳು ಬ) ಪರೋಕ್ಷ ತೆರಿಗೆಗಳು,

29, 2017-18ರ ಕೇಂದ್ರ ಸರ್ಕಾರದ ಆಯ-ವ್ಯಯದಲ್ಲಿ ಬಡ್ಡಿ ಪಾವತಿಯ ಪ್ರತಿಶತ ಪ್ರಮಾಣ ಎಷ್ಟು?
24.36%

III ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ,

1. ಸಾರ್ವಜನಿಕ ವೆಚ್ಚದ ಏರಿಕೆಗೆ ಕಾರಣಗಳನ್ನು ವಿವರಿಸಿ

•    ಇಪ್ಪತ್ತನೆಯ ಶತಮಾನದಲ್ಲಿ ಸರ್ಕಾರದ ಪಾತ್ರಗಳ ವಿಸ್ತಾರವು ಅಧಿಕಗೊಂಡಿದ್ದರಿಂದ ಸಾರ್ವಜನಿಕ ವೆಚ್ಚವೂ ಏರಿಕೆಯಾಗಿದೆ.
•    ಸಾರ್ವಜನಿಕ ವೆಚ್ಚವು ಆರ್ಥಿಕ ಅಭಿವೃದ್ಧಿಯನ್ನು ಪೋಷಿಸುವ ಸೌಕರ್ಯಗಳನ್ನು ಸೃಷ್ಟಿಸಿ ಹೊರೆಯಬೇಕಾಗುತ್ತದೆ.
•    ಅದು ಬಂಡವಾಳ ಹೂಡಿಕೆಗೆ ಇರುವ ವಾತಾವರಣವನ್ನು ಸುಧಾರಿಸಬೇಕಾಗುತ್ತದೆ.
•    ಉಳಿತಾಯ, ಹೂಡಿಕೆ ಮತ್ತು ಆವಿಷ್ಕಾರಗಳಿಗೆ ಉತ್ತೇಜಕಗಳನ್ನು ಒದಗಿಸಬೇಕಾಗುತ್ತದೆ.
•    ಅಲ್ಲದೇ ಆರ್ಥಿಕ ಬೆಳವಣಿಗೆಯನ್ನು ತೀವ್ರಗೊಳಿಸಿ ಸ್ಥಿರತೆಯನ್ನೂ ಖಚಿತಪಡಿಸಬೇಕಾಗುತ್ತದೆ.

2. ಕೇಂದ್ರ ಸರ್ಕಾರದ ತೆರಿಗೆಯೇತರ ವರಮಾನದ ಮೂಲಗಳನ್ನು ತಿಳಿಸಿ,
•    ಭಾರತೀಯ ರಿಜರ್ವ್ ಬ್ಯಾಂಕು ಗಳಿಸುವ ಲಾಭ
•    ಭಾರತೀಯ ರೈಲ್ವೆ ಗಳಿಸುವ ಲಾಭ
•    ಅಂಚೆ ಮತ್ತು ದೂರವಾಣಿ ಸೇವೆಗಳಿಂದ ಬರುವ ವರಮಾನ
•    ಸಾರ್ವಜನಿಕ ಉದ್ಯಮಗಳು ಗಳಿಸುವ ವರಮಾನ
•    ನಾಣ್ಯ ಮುದ್ರಣಾಲಯ ಮತ್ತು ಟಂಕಸಾಲೆಯಿಂದ ಬರುವ ವರಮಾನ
•    ವಿವಿಧ ರೀತಿಯ ಶುಲ್ಕಗಳು, ದಂಡಗಳು

3. ಸಾರ್ವಜನಿಕ ವೆಚ್ಚದ ಪ್ರಮುಖ ಉದ್ದೇಶಗಳು ಯಾವುವು?
•    ಆರ್ಥಿಕ ಬೆಳವಣಿಗೆಯನ್ನು ತೀವ್ರಗೊಳಿಸುವುದು
•    ಉದ್ಯಮ, ವ್ಯವಹಾರ ಮತ್ತು ವಾಣಿಜ್ಯಗಳನ್ನು ಪ್ರೋತ್ಸಾಹಿಸುವುದು
•    ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿಯನ್ನು ಪ್ರೋತ್ಸಾಹಿಸುವುದು
•    ಸಮತುಲಿತ ಪ್ರಾದೇಶಿಕ ಬೆಳವಣಿಗೆಯನ್ನು ಪ್ರೋತ್ಸಾಹಿಸುವುದು
•    ಸಾಮಾಜಿಕ-ಆರ್ಥಿಕ ಮೂಲಭೂತ ಸೌಕರ್ಯಗಳನ್ನು ನಿರ್ಮಿಸುವುದು
•    ಸಂಪೂರ್ಣ ಉದ್ಯೋಗ ಸಾಧಿಸುವುದು
•    ಸಾಮಾಜಿಕ ಕಲ್ಯಾಣವನ್ನು ಅಧಿಕಗೊಳಿಸುವುದು

4. ಸಾರ್ವಜನಿಕ ಹಣಕಾಸಿನ ಮಹತ್ವವನ್ನು ವಿವರಿಸಿ
•    ಸರ್ಕಾರದ ವರಮಾನ, ವೆಚ್ಚ ಹಾಗೂ ಸಾಲಗಳ ನಿರ್ವಹಣೆಯನ್ನು ಕುರಿತು ಅಧ್ಯಯನ ಮಾಡುವುದೇ ಸಾರ್ವಜನಿಕ ಹಣಕಾಸು
•    ಸರ್ಕಾರವು ಸಾಮಾನ್ಯವಾಗಿ ತಾನು ಸಂಗ್ರಹಿಸಿದ ವರಮಾನವನ್ನು ಅಥವಾ ಪಡೆದ ಸಾಲದ ಮೊತ್ತವನ್ನು
•    ಅಭಿವೃದ್ಧಿ ಕಾರ್ಯಗಳ ಮೇಲೆ ವ್ಯಯಿಸುತ್ತದೆ.
•    ಇದು ಬೆಳವಣಿಗೆ ದರವನ್ನು ವೃದ್ಧಿಸಿ ಎಲ್ಲರಿಗೂ ಪ್ರಯೋಜನ ದೊರಕಿಸುತ್ತದೆ.
•    ಅದೇ ರೀತಿ ಆರ್ಥಿಕ ಹಿಂಜರಿತದ ಸಂದರ್ಭಗಳಲ್ಲಿ ವೆಚ್ಚವನ್ನು ಹಿಗ್ಗಿಸಿ, ಆರ್ಥಿಕ ಹಿಗ್ಗುವಿಕೆಯ ಸಂದರ್ಭಗಳಲ್ಲಿ ವೆಚ್ಚವನ್ನು ಕುಗ್ಗಿಸಿ, ಸರ್ಕಾರವು ಆರ್ಥಿಕ ಸ್ಥಿರತೆಯನ್ನು ಸಾಧಿಸುತ್ತದೆ.
•    ಸರ್ಕಾರದ ವರಮಾನ, ವೆಚ್ಚ ಮತ್ತು ಅವುಗಳ ನಡುವಿನ ಹೊಂದಾಣಿಕೆಗಳು ವಾರ್ಷಿಕ ಆಯ-ವ್ಯಯ ಅಥವಾ ಮುಂಗಡ ಪತ್ರಗಳ ಭಾಗವಾಗಿರುವುದರಿಂದ, ಸಾರ್ವಜನಿಕ ಹಣಕಾಸಿನ ಅಧ್ಯಯನವು ಆಯ ವ್ಯಯಗಳ ವಿಶ್ಲೇಷಣೆಗೂ ಸಹಾಯಕಾರಿಯಗುತ್ತದೆ

5. ಆಯ-ವ್ಯಯ ಪತ್ರದ ವಿಧಗಳನ್ನು ವಿವರಿಸಿ
ಸರ್ಕಾರದ ವರಮಾನವು ಅದರ ವೆಚ್ಚಕ್ಕಿಂತ ಹೆಚ್ಚಾಗಿದ್ದರೆ, ಅದನ್ನು ಉಳಿತಾಯ ಆಯ-ವ್ಯಯ ಎನ್ನುವರು.
ವರಮಾನಕ್ಕಿಂತ ವೆಚ್ಚವು ಹೆಚ್ಚಾಗಿದ್ದರೆ ಅದನ್ನು ಕೊರತೆಯ ಆಯ-ವ್ಯಯ ಎನ್ನುವರು.
ವರಮಾನ ಮತ್ತು ವೆಚ್ಚಗಳೆರಡೂ ಸಮನಾಗಿದ್ದರೆ, ಅದನ್ನು ಸಮತೋಲನ ಆಯ- ವ್ಯಯ ಎನ್ನುವರು


You Might Like

Post a Comment

0 Comments