Recent Posts

ಗಾಂಧೀಜಿಯ ಬಾಲ್ಯ - ೦೮ ನೇ ತರಗತಿ ತಿಳಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

 
ಗಾಂಧೀಜಿಯ ಬಾಲ್ಯ 

ಕೃತಿಕಾರರ ಪರಿಚಯ :       

1)ಮಹಾತ್ಮಾ ಗಾಂಧೀಜಿ (ಮೂಲ ಲೇಖಕರು)
?  ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಪೂರ್ಣ ಹೆಸರು ಮೋಹನದಾಸ ಕರಮಚಂದ ಗಾಂಧಿ. ಇವರು 1869 ನೇ ಅಕ್ಟೋಬರ್ 02 ರಂದು ಗುಜರಾತಿನ ಪೋರಬಂದರಿನಲ್ಲಿ ಜನಿಸಿದರು.  
?  ತಮ್ಮ ಬದುಕಿನ ಅನುಭವಗಳನ್ನು ಹಾಗೂ ಪ್ರಯೋಗಗಳನ್ನು ಕುರಿತು ಅವರೇ ಬರೆದ ಮೈ ಎಕ್ಸ್ಪಿರಿಮೆಂಟ್ ವಿಥ್ಟ್ರೂತ್ ಜಗತ್ತಿನ ಹಲವು ಭಾಷೆಗಳಿಗೆ ಭಾಷಾಂತರಗೊಂಡಿದೆ.  

2. ಗೊರೂರು ರಾಮಸ್ವಾಮಿ ಅಯ್ಯಂಗಾರ್ : (ಅನುವಾದಕರು)  
* ಗೊರೂರು ರಾಮಸ್ವಾಮಿ ಅಯ್ಯಂಗಾರರು ಹಾಸನ ಜಿಲ್ಲೆಯ ಗೊರೂರು ಗ್ರಾಮದವರು. ಇವರು 1904 ನೇ ಜುಲೈ 04   ರಂದು ಜನಿಸಿದರು.   
* ಇವರು ಸ್ವಾತಂತ್ರ್ಯವೇ ಧರ್ಮ, ಹಳ್ಳಿಯಹಾಡು, ಮೆರವಣಿಗೆ, ನಮ್ಮ ಊರಿನ ರಸಿಕರ, ಗರುಡಗಂಬದ ದಾಸಯ್ಯ- ಇನ್ನೂ ಮುಂತಾದ ಕೃತಿಗಳನ್ನು ಬರೆದಿದ್ದಾರೆ.  
* ಪ್ರಸ್ತುತ ಗದ್ಯಭಾಗವನ್ನು ಗೊರೂರು ರಾಮಸ್ವಾಮಿ ಅಯ್ಯಂಗಾರರು ಅನುವಾದಿಸಿರುವ ಮೋ. ಕ. ಗಾಂಧಿ ಅವರ ನನ್ನ ಸತ್ಯಾನ್ವೇಷಣೆ ಕೃತಿಯಿಂದ ಆಯ್ದುಕೊಳ್ಳಲಾಗಿದೆ.                                    

ಅಭ್ಯಾಸ  

1. ಪದಗಳ ಅರ್ಥ ತಿಳಿಯಿರಿ :
ಅಂಕಿತ - ಗುರುತು                                          
ಅಕ್ಷರಶಃ - ಪ್ರತಿಯೊಂದು ವಿವರದಲ್ಲೂ                                    
ಆದರ - ಗೌರವ; ಪ್ರೀತಿ.                                      
ಸೂರೆ - ಕೊಳ್ಳೆ; ಲೂಟಿ. ಆಣತಿ - ಆಜ್ಞೆ                                             
ಆರ್ತ - ಕಷ್ಟಕ್ಕೆ ಸಿಲುಕಿದ; ದುಃಖಿತ.
ಕಲೆ - ನೈಪುಣ್ಯತೆ                                           
ಕಾಪಿ - ನಕಲು; ಕದ್ದು ಬರೆಯುವುದು
ಕಿಂಚಿತ್ತೂ - ಸ್ವಲ್ಪವೂ; ಕೊಂಚವೂ                                
ಕುಚೋದ್ಯ - ಕಿಡಿಗೇಡಿತನ; ಅಪಹಾಸ್ಯ.
ಕೆಟಲ್ - ಕಾಫಿ ಸಂಗ್ರಹಿಸಿಡುವ ಸಾಧನ.                           
ಕ್ಲೇಶ - ದುಃಖ; ನೋವು. ಗದರಿಸು
(ಕ್ರಿ) - ಅಬ್ಬರಿಸು                                     
ಪಾದರಕ್ಷೆ - ಚಪ್ಪಲಿ
ಪಿತೃ - ತಂದೆ                                             
ಪೈಕಿ (ಅ) - ಸಂಬಂಧದಲ್ಲಿ ರಾಗ
ಮಾಲಿಕೆ - ಸಂಗೀತ ಸಾಧನ                                
ವಿಲಾಪ - ಅಳುವಿಕೆ
ವೃಥಾ - ನಿಷ್ಕಾರಣವಾಗಿ; ವ್ಯರ್ಥವಾಗಿ.                           
ಸತ್ಯಸಂಧ - ನಿಜವನ್ನು ನುಡಿಯುವವನು
ಅಡ್ಡೆ - ಹೆಗಲ ಮೇಲೆ ಹೊರುವುದಕ್ಕಾಗಿ ತಕ್ಕಡಿಯಂತೆ ಮಾಡಿರುವ ಬಿದಿರ ದಬ್ಬೆಯ ಸಾಧನ.

ಪ್ರಶ್ನೆಗಳು :

ಅ) ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ಭರ್ತಿಮಾಡಿರಿ.
1. ಮಹಾತ್ಮ ಗಾಂಧೀಜಿಯವರ ಆತ್ಮಕಥೆಯ ಹೆಸರು  ನನ್ನ ಸತ್ಯಾನ್ವೇಷಣೆ
2. ಗಾಂಧೀಜಿಯವರು ಪರೀಕ್ಷೆಯಲ್ಲಿ ತಪ್ಪಾಗಿ ಬರೆದ ಪದ ಕೆಟಲ್
3. ಗಾಂಧೀಜಿಯವರು ಬಾಲ್ಯದಲ್ಲಿ ಓದಿದ ವೂದಲ ಪುಸ್ತಕ ಶ್ರವಣನ ಪಿತೃಭಕ್ತಿ
4. ಬಾಲ್ಯದಲ್ಲಿ ಗಾಂಧೀಜಿಯವರ ಮೇಲೆ ಪ್ರಭಾವ ಬೀರಿದ ನಾಟಕದ ಹೆಸರು ಹರಿಶ್ಚಂದ್ರ  

ಆ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

1. ಗಾಂಧೀಜಿಯವರಿಗೆ ಪರೀಕ್ಷೆಯಲ್ಲಿ ಕಾಪಿ ಮಾಡುವಂತೆ ಉಪಾಧ್ಯಾಯರು ಏಕೆ ಸೂಚಿಸಿದರು?
ಗಾಂಧೀಜಿಯವರು ಮುಂದಿನ ಹುಡುಗನ ಸ್ಲೇಟನ್ನು ನೋಡಿಕೊಂಡು ತನ್ನ ತಪ್ಪನ್ನು ತಿದ್ದಿಕೊಳ್ಳಬೇಕೆಂದು ಪರೀಕ್ಷೆಯಲ್ಲಿ ಕಾಪಿ ಮಾಡುವಂತೆ ಉಪಾಧ್ಯಾಯರು ಸೂಚಿಸಿದರು.

2. ಉಪಾಧ್ಯಾಯರು ಸೂಚಿಸಿದರೂ ಗಾಂಧೀಜಿ ಪರೀಕ್ಷೆಯಲ್ಲಿ ಕಾಪಿ ಮಾಡಲಿಲ್ಲ ಏಕೆ?
ಕಾಪಿ ಮಾಡದಂತೆ ನೋಡಿಕೊಳ್ಳುವುದೇ ಉಪಾಧ್ಯಾಯರ ಕೆಲಸವೆಂದು ತಿಳಿದ ಕಾರಣ ಗಾಂಧೀಜಿ ಪರೀಕ್ಷೆಯಲ್ಲಿ ಕಾಪಿ ಮಾಡಲಿಲ್ಲ.

3. ಉಪಾಧ್ಯಾಯರು ವಿದ್ಯಾರ್ಥಿಗಳಿಗೆ ಕಾಪಿ ಮಾಡಲು ಸೂಚಿಸುವುದು ಸರಿಯಲ್ಲ ಏಕೆ?
ಮಕ್ಕಳ ತಪ್ಪನ್ನು ತಿದ್ದಿ ಸರಿದಾರಿಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುವುದು ಉಪಾಧ್ಯಾಯರ ಕೆಲಸವಾದ್ದರಿಂದ ಕಾಪಿ ಮಾಡಲು ಸೂಚಿಸುವುದು ಸರಿಯಲ್ಲ.

4. ಗಾಂಧೀಜಿಯವರಿಗೆ ಕಾಪಿ ಮಾಡಲು ಹೇಳಿದ ಉಪಾಧ್ಯಾಯರ ಮೇಲೆ ಗೌರವ ಏಕೆ ಕಡಿಮೆ ಆಗಲಿಲ್ಲ?
ಏಕೆಂದರೆ ಹಿರಿಯರ ದೋಷಗಳನ್ನು ಎಣಿಸದಿರುವುದು ಗಾಂಧೀಜಿಯವರ ಸ್ವಾಭಾವಿಕ ಗುಣವಾಗಿತ್ತು.

5. ಗಾಂಧೀಜಿಯವರಿಗೆ ಬಾಲ್ಯದಲ್ಲಿ ಪ್ರಭಾವ ಬೀರಿದ ಇಬ್ಬರು ವ್ಯಕ್ತಿಗಳಾರು?
ಗಾಂಧೀಜಿಯವರಿಗೆ ಬಾಲ್ಯದಲ್ಲಿ ಪ್ರಭಾವ ಬೀರಿದ ಇಬ್ಬರು ವ್ಯಕ್ತಿಗಳು ಹರಿಶ್ಚಂದ್ರ ಮತ್ತು ಶ್ರವಣ ಕುಮಾರ.

ಇ) ಕೆಳಗಿನ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.

1. ಗಾಂಧೀಜಿಯವರ ಬಾಲ್ಯದಲ್ಲಿದ್ದ ಸ್ವಭಾವಗಳಾವುವು?
ಗಾಂಧೀಜಿಯವರಿಗೆ ಆ ಕಾಲದಲ್ಲಿ ಶಿಕ್ಷಕರಿಗಾಗಲಿ, ಸ್ನೇಹಿತರಿಗಾಗಲಿ ಎಂದೂ  ಸುಳ್ಳು ಹೇಳಿದ ನೆನಪಿಲ್ಲ. ಅವರು ಬಹಳ ನಾಚಿಕೆಯ ಸ್ವಭಾವದವರಾಗಿದ್ದರು. ಯಾರ ಜತೆಗೂ ಸೇರುತ್ತಿರಲಿಲ್ಲ. ಅವರ ಪುಸ್ತಕ, ಪಾಠಗಳು ಅವರ  ಮಿತ್ರರಾಗಿದ್ದರು.  

2. ಗಾಂಧೀಜಿಯವರಿಗೆ ಪರೀಕ್ಷೆಯಲ್ಲಿ ಕಾಪಿ ಮಾಡುವಂತೆ ಉಪಾಧ್ಯಾಯರು ಯಾವ ರೀತಿ ಸೂಚಿಸಿದರು?
ಗಾಂಧೀಜಿಯವರ ಉಪಾಧ್ಯಾಯರು ತಮ್ಮ ಪಾದರಕ್ಷೆಯ ತುದಿಯಿಂದ ಗಾಂಧೀಜಿಯವರನ್ನು ಎಚ್ಚರಿಸಲು ಪ್ರಯತ್ನಿಸಿದರು. ಗಾಂಧೀಜಿಯವರು ಆ ಸೂಚನೆಯಂತೆ ನಡೆಯಲಿಲ್ಲ. ಮುಂದಿನ ಹುಡುಗನ ಸ್ಲೇಟನ್ನು ನೋಡಿಕೊಂಡು ಗಾಂಧೀಜಿಯವರು ತನ್ನ ತಪ್ಪನ್ನು ತಿದ್ದಿಕೊಳ್ಳಬೇಕೆಂಬುದು ಉಪಾಧ್ಯಾಯರ ಉದ್ದೇಶವಾಗಿತ್ತು.

3. ಶ್ರವಣ ಪಿತೃಭಕ್ತಿ ನಾಟಕದಲ್ಲಿನ ಯಾವ ಅಂಶ ಗಾಂಧೀಜಿಯವರ ಮೇಲೆ ಪ್ರಭಾವ ಬೀರಿತು?
ಶ್ರವಣ ತನ್ನ ಕುರುಡು ತಂದೆತಾಯಿಯರನ್ನು ಅಡ್ಡೆಯಲ್ಲಿ ಕೂರಿಸಿಕೊಂಡು, ಅದನ್ನು ಹೆಗಲಿನ ಮೇಲೆ ಹೊತ್ತುಕೊಂಡು ಯಾತ್ರೆಗಾಗಿ ಹೋಗುತ್ತಿದ್ದ ಚಿತ್ರ. ಆ ಪುಸ್ತಕ, ಆ ದೃಶ್ಯ ಎರಡೂ ಗಾಂಧೀಜಿಯವರ ಅಂತರಂಗದಲ್ಲಿ ಶಾಶ್ವತವಾಗಿ ಪ್ರಭಾವ ಬೀರಿತು.

4. ಹರಿಶ್ಚಂದ್ರ ನಾಟಕ ಗಾಂಧೀಜಿಯವರ ಮನಸ್ಸಿನಲ್ಲಿ ಯಾವ ರೀತಿಯ ಸ್ಫೂರ್ತಿ ತುಂಬಿತು?
ಗಾಂಧೀಜಿಯವರು ಲೆಕ್ಕವಿಲ್ಲದಷ್ಟು ಸಲ ತಾನೇ ಹರಿಶ್ಚಂದ್ರನಾಗಿ ಆ ನಾಟಕವನ್ನು ಅಭಿನಯಿಸಿಕೊಂಡರು. ಎಲ್ಲರೂ ಏಕೆ ಹರಿಶ್ಚಂದ್ರನಂತೆ ಸತ್ಯಸಂಧರಾಗಿರಬಾರದು? ಇದೇ ಹಗಲೂ ರಾತ್ರಿ ಗಾಂಧೀಜಿ ತಾನೇ ಕೇಳಿಕೊಳ್ಳುತ್ತಿದ್ದ ಪ್ರಶ್ನೆಯಾಗಿತ್ತು. ಸತ್ಯವನ್ನು ಅನುಸರಿಸಬೇಕು. ಹರಿಶ್ಚಂದ್ರ ಸತ್ಯಕ್ಕಾಗಿ ಪಟ್ಟ ಕ್ಲೇಶವನ್ನೆಲ್ಲ, ಆಪತ್ತುಗಳನ್ನೆಲ್ಲ ನಾನೂ ಪಡಬೇಕು. ಇದೊಂದೇ ಅವರ ಮನಸ್ಸಿನಲ್ಲಿ ಸ್ಫೂರ್ತಿ ತುಂಬಿದ ಆದರ್ಶವಾಗಿತ್ತು.   

ಈ) ಕೆಳಗಿನ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ.

1. ಗಾಂಧೀಜಿಯವರು ಪ್ರೌಢಶಾಲೆಯಲ್ಲಿ ಓದುತ್ತಿರುವಾಗ ಪರೀಕ್ಷಾ ಕೊಠಡಿಯಲ್ಲಿ ಯಾವ ಘಟನೆ ನಡೆಯಿತು?
ಗಾಂಧೀಜಿಯವರ ಪ್ರೌಢಶಾಲೆಯ ಮೊದಲನೆಯ ವರ್ಷದ ಪರೀಕ್ಷೆಯ ವೇಳೆಯಲ್ಲಿ ನಡೆದ ಘಟನೆಯೊಂದನ್ನು ಹೇಳಬೇಕು. ಇನ್ಸ್ಪೆಕ್ಟರ್ ಮಿ. ಗೈಲ್ಸ್ ಪರಿಶೀಲನೆಗಾಗಿ ಶಾಲೆಗೆ ಬಂದಿದ್ದರು. ಅವರು ಮೊದಲನೆಯ ತರಗತಿಯ ವಿದ್ಯಾರ್ಥಿಗಳಿಗೆ ಐದು ಪದಗಳನ್ನು ಬರೆಯಲು ಕೊಟ್ಟರು. ಅವುಗಳ ಪೈಕಿ ಕೆಟಲ್ ಎಂಬ ಪದವೂ ಒಂದು. ಗಾಂಧೀಜಿಯವರು ಅದನ್ನು ತಪ್ಪಾಗಿ ಬರೆದೆ. ನಮ್ಮ ಉಪಾಧ್ಯಾಯರು ತಮ್ಮ ಪಾದರಕ್ಷೆಯ ತುದಿಯಿಂದ ಗಾಂಧೀಜಿಯವರನ್ನು ಎಚ್ಚರಿಸಲು ಪ್ರಯತ್ನಿಸಿದರು. ಅವರು ಆ ಸೂಚನೆಯಂತೆ ನಡೆಯಲಿಲ್ಲ. ಮುಂದಿನ ಹುಡುಗನ ಸ್ಲೇಟನ್ನು ನೋಡಿಕೊಂಡು ತನ್ನ ತಪ್ಪನ್ನು ತಿದ್ದಿಕೊಳ್ಳಬೇಕೆಂಬುದು ನಮ್ಮ ಉಪಾಧ್ಯಾಯರ ಉದ್ದೇಶ. ಅದು ಅವರಿಗೆ ಒಪ್ಪಿಗೆಯಾಗಲಿಲ್ಲ. ಏಕೆಂದರೆ ನಾವು ಕಾಪಿ ಮಾಡದಂತೆ ನೋಡಿಕೊಳ್ಳುವುದೇ ಉಪಾಧ್ಯಾಯರ ಕೆಲಸವೆಂದು ಗಾಂಧೀಜಿಯವರು ತಿಳಿದಿದ್ದರು. ಇದರ ಪರಿಣಾಮವಾಗಿ ಗಾಂಧೀಜಿಯವರನ್ನು  ಹೊರತು ಉಳಿದ ಹುಡುಗರೆಲ್ಲ ಐದೂ ಪದಗಳನ್ನೂ ಸರಿಯಾಗಿ ಬರೆದಿದ್ದರು.  

2. ಗಾಂಧೀಜಿಯವರಿಗೆ ಬಾಲ್ಯದಲ್ಲಿ ಶ್ರವಣನ ಪಿತೃಭಕ್ತಿ ಹಾಗೂ ಸತ್ಯ ಹರಿಶ್ಚಂದ್ರ ನಾಟಕಗಳು ಯಾವ ರೀತಿ ಪ್ರಭಾವ ಬೀರಿದವು?
ಗಾಂಧೀಜಿಯವರಿಗೆ ಬಾಲ್ಯದಲ್ಲಿ ಶ್ರವಣನ ಪಿತೃಭಕ್ತಿ ಹಾಗೂ ಸತ್ಯ ಹರಿಶ್ಚಂದ್ರ ನಾಟಕಗಳು ಪ್ರಭಾವ ಬೀರಿದವು. ಶ್ರವಣ ತನ್ನ ಕುರುಡು ತಂದೆತಾಯಿಯರನ್ನು ಅಡ್ಡೆಯಲ್ಲಿ ಕೂರಿಸಿಕೊಂಡು, ಅದನ್ನು ಹೆಗಲಿನ ಮೇಲೆ ಹೊತ್ತುಕೊಂಡು ಯಾತ್ರೆಗಾಗಿ ಹೋಗುತ್ತಿದ್ದ ಚಿತ್ರ. ಆ ಪುಸ್ತಕ, ಆ ದೃಶ್ಯ ಎರಡೂ ಗಾಂಧೀಜಿಯವರ ಅಂತರಂಗದಲ್ಲಿ ಶಾಶ್ವತವಾಗಿ  ಅಂಕಿತವಾದವು.  ಗಾಂಧೀಜಿಯವರು ಲೆಕ್ಕವಿಲ್ಲದಷ್ಟು ಸಲ ತಾನೇ ಹರಿಶ್ಚಂದ್ರನಾಗಿ ಆ ನಾಟಕವನ್ನು ಅಭಿನಯಿಸಿಕೊಂಡರು. ಎಲ್ಲರೂ ಏಕೆ ಹರಿಶ್ಚಂದ್ರನಂತೆ ಸತ್ಯಸಂಧರಾಗಿರಬಾರದು? ಇದೇ ಹಗಲೂ ರಾತ್ರಿ ಗಾಂಧೀಜಿ ತಾನೇ ಕೇಳಿಕೊಳ್ಳುತ್ತಿದ್ದ ಪ್ರಶ್ನೆಯಾಗಿತ್ತು. ಸತ್ಯವನ್ನು ಅನುಸರಿಸಬೇಕು. ಹರಿಶ್ಚಂದ್ರ ಸತ್ಯಕ್ಕಾಗಿ ಪಟ್ಟ ಕ್ಲೇಶವನ್ನೆಲ್ಲ, ಆಪತ್ತುಗಳನ್ನೆಲ್ಲ ತಾನೂ ಪಡಬೇಕು. ಇದೊಂದೇ ಅವರ ಮನಸ್ಸಿನಲ್ಲಿ ಸ್ಫೂರ್ತಿ ತುಂಬಿದ ಆದರ್ಶವಾಗಿತ್ತು.   

ಉ) ಸಂದರ್ಭದೊಡನೆ ವಿವರಿಸಿರಿ.

1. ಹಿರಿಯರ ಆಣತಿಯನ್ನು ಪಾಲಿಸುವುದು ನಮ್ಮ ಕರ್ತವ್ಯ.
ಈ ವಾಕ್ಯವನ್ನು ಗಾಂಧೀಜಿ ಅವರು ಬರೆದಿರುವ ನನ್ನ ಸತ್ಯಾನ್ವೇಷಣೆ ಎಂಬ ಕೃತಿಯಿಂದ ಆಯ್ದ ಗಾಂಧೀಜಿಯ ಬಾಲ್ಯ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.  
ಈ ಮಾತನ್ನು ಗಾಂಧೀಜಿಯವರು ಹೇಳಿದ್ದಾರೆ. ಗಾಂಧೀಜಿಯವರ ಉಪಾಧ್ಯಾಯರು ತಮ್ಮ ಪಾದರಕ್ಷೆಯ ತುದಿಯಿಂದ ಗಾಂಧೀಜಿಯವರನ್ನು ಎಚ್ಚರಿಸಲು ಪ್ರಯತ್ನಿಸಿದರು. ಗಾಂಧೀಜಿಯವರು ಆ ಸೂಚನೆಯಂತೆ ನಡೆಯಲಿಲ್ಲ. ಏಕೆಂದರೆ ಹಿರಿಯರ ದೋಷಗಳನ್ನು ಎಣಿಸದಿರುವುದು ಮತ್ತು ಹಿರಿಯರ ಆಣತಿಯನ್ನು ಪಾಲಿಸಬೇಕೆಂದು ಗಾಂಧೀಜಿಯವರು ತಿಳಿದಿದ್ದರು ಎಂದು ಹೇಳುವ ಸಂದರ್ಭದಲ್ಲಿ ಈ ಮೇಲಿನ ಮಾತು ವ್ಯಕ್ತವಾಗಿದೆ.

2. ಇಗೋ ಇಲ್ಲಿ ನಿನಗೊಂದು ಆದರ್ಶವಿದೆ. ಅದನ್ನು ಅನುಸರಿಸು.
ಈ ವಾಕ್ಯವನ್ನು ಗಾಂಧೀಜಿ ಅವರು ಬರೆದಿರುವ ನನ್ನ ಸತ್ಯಾನ್ವೇಷಣೆ ಎಂಬ ಕೃತಿಯಿಂದ ಆಯ್ದ ಗಾಂಧೀಜಿಯ ಬಾಲ್ಯ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.  ಈ ಮಾತನ್ನು ಗಾಂಧೀಜಿಯವರು ತಮ್ಮ ಮನಸ್ಸಿನಲ್ಲೇ ಹೇಳಿಕೊಂಡಿದ್ದಾರೆ. ಗಾಂಧೀಜಿಯವರು ಬಾಲ್ಯದಲ್ಲಿ ಶ್ರವಣ ಪಿತೃ ಭಕ್ತಿ ನಾಟಕದ ಪುಸ್ತಕವನ್ನು ಓದಿದ್ದರು. ಅದೇ ಸಮಯದಲ್ಲಿ ಸಂಚಾರೀ ಬೊಂಬೆ ಪ್ರದರ್ಶಕರು ಗಾಂಧೀಜಿಯವರ ಊರಿಗೆ ಬಂದರು. ಅವರು ಗಾಂಧೀಜಿಯವರಿಗೆ ತೋರಿಸಿದ ಒಂದು ಚಿತ್ರ, ಇಗೋ ಇಲ್ಲಿ ನಿನಗೊಂದು ಆದರ್ಶವಿದೆ. ಅದನ್ನು ಅನುಸರಿಸು ಎಂದು ಹೇಳಿಕೊಳ್ಳುವ ಸಮಯದಲ್ಲಿ ಈ ಮೇಲಿನ ಮಾತು ಬಂದಿದೆ.

3. ಎಲ್ಲರೂ ಏಕೆ ಹರಿಶ್ಚಂದ್ರನಂತೆ ಸತ್ಯಸಂಧರಾಗಿರಬಾರದು?
ಈ ವಾಕ್ಯವನ್ನು ಗಾಂಧೀಜಿ ಅವರು ಬರೆದಿರುವ ನನ್ನ ಸತ್ಯಾನ್ವೇಷಣೆ ಎಂಬ ಕೃತಿಯಿಂದ ಆಯ್ದ ಗಾಂಧೀಜಿಯ ಬಾಲ್ಯ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.  ಈ ಮಾತನ್ನು ಗಾಂಧೀಜಿಯವರು ಹೇಳಿದ್ದಾರೆ. ಗಾಂಧೀಜಿಯವರು ಲೆಕ್ಕವಿಲ್ಲದಷ್ಟು ಸಲ ತಾನೇ ಹರಿಶ್ಚಂದ್ರನಾಗಿ ಆ ನಾಟಕವನ್ನು ಅಭಿನಯಿಸಿಕೊಂಡರು. ಎಲ್ಲರೂ ಏಕೆ ಹರಿಶ್ಚಂದ್ರನಂತೆ ಸತ್ಯಸಂಧರಾಗಿರಬಾರದು? ಇದೇ ಹಗಲೂ ರಾತ್ರಿ ಗಾಂಧೀಜಿ ತಾನೇ ತನ್ನ ಮನಸ್ಸಿನಲ್ಲಿಯೇ ಪ್ರಶ್ನೆಗಳನ್ನು ಕೇಳಿಕೊಳ್ಳುವ ಸಮಯದಲ್ಲಿ ಈ ಮೇಲಿನ ಮಾತು ಬಂದಿದೆ.
ಭಾಷಾಭ್ಯಾಸ :

ಅ) ಕೆಳಗಿನ ಪದಗಳನ್ನು ಸ್ವಂತ ವಾಕ್ಯದಲ್ಲಿ ಬರೆಯಿರಿ.
1. ಅಕ್ಷರಶಃ   : ಹರಿಶ್ಚಂದ್ರನು ಸತ್ಯವಂತನೆಂಬುದು ಅಕ್ಷರಶಃ ಸತ್ಯ.
2. ಸೂರೆಗೊಳ್ಳು : ಶಾಮಾಶಾಸ್ತ್ರಿಯವರ ಸಂಗೀತ ನನ್ನ ಮನಸ್ಸನ್ನು ಸೂರೆಗೋಡಿತು.
3. ಸ್ಫೂರ್ತಿ   : ಗಾಂಧೀಜಿಯವರ ಆದರ್ಶ ನನಗೆ  ಸ್ಫೂರ್ತಿಯಾಗಿದೆ.
4. ಆದರ್ಶ   : ನಾವು ಆದರ್ಶ ವ್ಯಕ್ತಿಗಳ ತತ್ವಗಳನ್ನು ಪಾಲಿಸಬೇಕು.
5. ಕರ್ತವ್ಯ.   : ನಾವು ಮಾಡುವ ಕರ್ತವ್ಯದಲ್ಲಿ ಪ್ರಾಮಾಣಿಕತೆ ಇರಬೇಕು.  

ಆ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕಗಳನ್ನು ಬರೆಯಿರಿ.
ಸತ್ಯ - ಅಸತ್ಯ,      
ಹಗಲು - ರಾತ್ರಿ,     
ಯೋಗ್ಯ - ಅಯೋಗ್ಯ,   
ದಡ್ಡ - ಜಾಣ,        
ಪ್ರಶ್ನೆ - ಉತ್ತರ,     
ಆಸಕ್ತಿ  - ನಿರಾಸಕ್ತಿ.  

ಇ) ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ.
1) ನ್ಯಾಯಾಲಯ = ನ್ಯಾಯ + ಆಲಯ,          
2) ವಿದ್ಯಾಭ್ಯಾಸ = ವಿದ್ಯ  + ಅಭ್ಯಾಸ   
3) ವಿದ್ಯಾರ್ಥಿ   = ವಿದ್ಯಾ + ಅರ್ಥಿ,             
4) ಮತ್ತೊಂದು =ಮತ್ತು  + ಒಂದು,
5) ಶಾಲೆಯನ್ನು = ಶಾಲೆ + ಅನ್ನು.  

ಈ) ಕೆಳಗಿನ ಪದಗಳಿಗೆ ತತ್ಸಮ-ತದ್ಭವ ರೂಪ ಬರೆಯಿರಿ.
ಅಕ್ಷರ - ಅಕ್ಕರ,  
ದೃಶ್ಯ - ದೃಶ,   
ಪುಸ್ತಕ - ಹೊತ್ತಿಗೆ,  
ವರ್ಷ - ವರುಷ,  
ನಿತ್ಯ - ನಿಚ್ಚ,  
ಕಥೆ - ಕತೆ.

ಸೈದ್ಧಾಂತಿಕ ವ್ಯಾಕರಣ :

ಸಂಧಿಗಳು  : *ಎರಡು ಅಕ್ಷರಗಳು ಪರಸ್ಪರ ಕಾಲ ವಿಳಂಬವಾಗದಂತೆ ಅರ್ಥಕ್ಕೆ ಅನುಸಾರವಾಗಿ ಸೇರುವುದನ್ನು ಸಂಧಿ ಎಂದು ಕರೆಯಲಾಗುತ್ತದೆ.
*ಕನ್ನಡ ಸಂಧಿಗಳು : ಸಂಧಿ ಆಗುವ ಎರಡು ಪದಗಳು ಕನ್ನಡ, ಇಲ್ಲವೇ ಒಂದು ಕನ್ನಡ ಮತ್ತೊಂದು ಸಂಸ್ಕೃತವಾಗಿದ್ದರೆ ಅದನ್ನು ಕನ್ನಡ ಸಂಧಿ ಎಂದು ಕರೆಯಲಾಗುತ್ತದೆ.  

1. ಲೋಪಸಂಧಿ :  
ಉದಾ : ಪೂರ್ವಪದ + ಉತ್ತರಪದ = ಸಂಧಿಪದ
ಮಾತು + ಇಲ್ಲ = ಮಾತಿಲ್ಲ
ಬೇರೆ + ಒಬ್ಬ = ಬೇರೊಬ್ಬ
ನಿನಗೆ + ಅಲ್ಲದೆ = ನಿನಗಲ್ಲದೆ  

2. ಆಗಮ ಸಂಧಿ :  
ಉದಾ : ಪೂರ್ವಪದ + ಉತ್ತರಪದ = ಸಂಧಿಪದ
ಗುರು + ಅನ್ನು = ಗುರುವನ್ನು
ಪಿತೃ + ಅನ್ನು = ಪಿತೃವನ್ನು
ಕೈ + ಅಲ್ಲಿ = ಕೈಯಲ್ಲಿ
ಶಾಲೆ + ಇಂದ = ಶಾಲೆಯಿಂದ  

3. ಆದೇಶ ಸಂಧಿ :
ಉದಾ : ಪೂರ್ವಪದ + ಉತ್ತರಪದ = ಸಂಧಿಪದ
ಮಳೆ + ಕಾಲ = ಮಳೆಗಾಲ
ಬೆಟ್ಟ + ತಾವರೆ = ಬೆಟ್ಟದಾವರೆ
ಹೂ + ಪುಟ್ಟಿ = ಹೂಬುಟ್ಟಿ  


   





 
You Might Like

Post a Comment

0 Comments