Recent Posts

ವ್ಯಾಕರಣ - ೦೮ ನೇ ತರಗತಿ ತಿಳಿ ಕನ್ನಡ ವ್ಯಾಕರಣಾಂಶಗಳು

 ವ್ಯಾಕರಣ
 
ಗಾದೆಗಳ ವಿಸ್ತರಣೆ

1) ಹಾಸಿಗೆ ಇದ್ದಷ್ಟು ಕಾಲು ಚಾಚು
ಪೀಠಿಕೆ: ವೇದ ಸುಳ್ಳಾದರು ಗಾದೆ ಸುಳ್ಳಾಗದು ಎನ್ನುವಂತೆ, ಗಾದೆ ಮಾತುಗಳು ಸರ್ವಕಾಲಿಕ ಸತ್ಯವನ್ನು ತಿಳಿಸುವ ಮಾತುಗಳಾಗಿವೆ. ಇವು ಹಿರಿಯರ ಅನುಭವಜನ್ಯದಿಂದ ಬಂದಿವೆ. ಮೇಲ್ನೋಟದ ಅರ್ಥಕ್ಕಿಂತ ಭಿನ್ನವಾದ ಅರ್ಥದಿಂದ ಕೂಡಿರುತ್ತವೆ.
ವಿವರಣೆ - ನಾವು ನಮ್ಮ ಅರ್ಹತೆಗೆ ತಕ್ಕ ಗುರಿಯನ್ನು, ಆಸೆಯನ್ನು ಹೊಂದಿರಬೇಕು. ಇಲ್ಲದಿದ್ದರೆ ತಿರುಕ ಕಂಡ ಕನಸಿನಂತೆ ಕನಸು ಕನಸಾಗಿಯೇ ಉಳಿಯುತ್ತದೆ. ಮುಂದೆ ಪಡಬಾರದ ಕಷ್ಟವನ್ನು ಪಡಬೇಕಾಗುತ್ತದೆ. ಆದ್ದರಿಂದ ಹಣವನ್ನು ದುಂದುವೆಚ್ಚ ಮಾಡಬಾರದು. ನ್ಯಾಯಯುತವಾಗಿ ಸಂಪಾದಿಸಿದ ಸಂಪಾದನೆಯಲ್ಲಿಯೇ ಜೀವನ ನಡೆಸಬೇಕು ಎಂಬುದು ಮೇಲಿನ ಗಾದೆ ಮಾತಿನ ಅರ್ಥವಾಗಿದೆ.  

2) ಅತಿ ಆಸೆ ಗತಿಗೇಡು
ಪೀಠಿಕೆ :ವೇದ ಸುಳ್ಳಾದರು ಗಾದೆ ಸುಳ್ಳಾಗದು ಎನ್ನುವಂತೆ, ಗಾದೆ ಮಾತುಗಳು ಸರ್ವಕಾಲಿಕ ಸತ್ಯವನ್ನು ತಿಳಿಸುವ ಮಾತುಗಳಾಗಿವೆ. ಇವು ಹಿರಿಯರ ಅನುಭವಜನ್ಯದಿಂದ ಬಂದಿವೆ. ಮೇಲ್ನೋಟದ ಅರ್ಥಕ್ಕಿಂತ ಭಿನ್ನವಾದ ಅರ್ಥದಿಂದ ಕೂಡಿರುತ್ತವೆ.
ವಿವರಣೆ:  ಮನುಷ್ಯನಿಗೆ ಆಸೆ ಇರಬೇಕು, ಆದರೆ ದುರಾಸೆ ಇರಬಾರದು. ಅತಿಯಾದ ಅಸೆ ದುಃಖಕ್ಕೆ ಕಾರಣವಾಗಿ ಇರುವುದನ್ನು ಕಳೆದುಕೊಂಡು ಗತಿಹೀನರನ್ನಾಗಿ ಮಾಡುತ್ತ್ತದೆ.
ಉದಾ - ಊಟ ಬಹಳ ರುಚಿಯಾಗಿದೆ ಎಂದು ಹೆಚ್ಚು ತಿಂದರೆ ಅಜೀರ್ಣವಾಗುತ್ತದೆ. ಖ್ಯಾತ ಕವಿ ಡಿ.ವಿ.ಜಿ ಅವರು ಹೇಳುವಂತೆ ಜೀವನದಲ್ಲಿ ಅತಿ ಎಂಬುದು ಎಲ್ಲಿಯೂ ಇಲ್ಲದಿದ್ದರೆ ನೆಮ್ಮದಿಯ ಜೀವನ ನಮ್ಮದಾಗುತ್ತದೆ. ಆದ್ದರಿಂದ ಅತಿ ಆಸೆ ಹೊಂದದೆ ಇದ್ದುದರಲ್ಲಿಯೇ ತೃಪ್ತರಾಗಿರಬೇಕು ಎಂಬುದು ಈ ಗಾದೆಯ ಅರ್ಥ ಹಾಗೂ ಉದ್ದೇಶವಾಗಿದೆ.  

3) ಕೈ ಕೆಸರಾದರೆ ಬಾಯಿ ಮೊಸರು.
ಪೀಠಿಕೆ: ವೇದ ಸುಳ್ಳಾದರು ಗಾದೆ ಸುಳ್ಳಾಗದು ಎನ್ನುವಂತೆ, ಗಾದೆ ಮಾತುಗಳು ಸರ್ವಕಾಲಿಕ ಸತ್ಯವನ್ನು ತಿಳಿಸುವ ಮಾತುಗಳಾಗಿವೆ. ಇವು ಹಿರಿಯರ ಅನುಭವಜನ್ಯದಿಂದ ಬಂದಿವೆ. ಮೇಲ್ನೋಟದ ಅರ್ಥಕ್ಕಿಂತ ಭಿನ್ನವಾದ ಅರ್ಥದಿಂದ ಕೂಡಿರುತ್ತವೆ.
ವಿವರಣೆ: ಕೈ ಕೆಸರಾದರೆ ಬಾಯಿ ಮೊಸರು ಎಂದರೆ ಕಷ್ಟ ಪಟ್ಟು ದುಡಿದರೆ ದುಡಿಮೆಗೆ ತಕ್ಕ ಪ್ರತಿಫಲ ಸಿಗುತ್ತದೆ. ಎಂಬುದು ಈ ಮೇಲಿನ ಗಾದೆ ಮಾತಿನ ಅರ್ಥವಾಗಿದೆ. ಉದಾಹರಣೆಗೆ ರೈತರು ಸರಿಯಾದ ಸಮಯದಲ್ಲಿ ಹೊಲದಲ್ಲಿ ಉತ್ತಿ ಬಿತ್ತಿ ಬೆಳೆ ಬೆಳೆದರೆ ಮುಂದೆ ಫಸಲು ಸಮೃದ್ಧವಾಗಿ ಸಿಗುತ್ತದೆ. ಆಳಾಗಿ ದುಡಿ ಅರಸನಾಗಿ ಉಣ್ಣು, ಎಂಬ ಗಾದೆಮಾತಿಗೆ ಸಮಾನವಾದ ಗಾದೆಯಾಗಿದೆ. ಇದರಲ್ಲಿ ಕಾಯಕದ ಮಹತ್ವ ಅಡಗಿದೆ.  

4) ದೇಶ ಸುತ್ತಿ ನೋಡು; ಕೋಶ ಓದಿ ನೋಡು
ಪೀಠಿಕೆ: ವೇದ ಸುಳ್ಳಾದರು ಗಾದೆ ಸುಳ್ಳಾಗದು ಎನ್ನುವಂತೆ, ಗಾದೆ ಮಾತುಗಳು ಸರ್ವಕಾಲಿಕ ಸತ್ಯವನ್ನು ತಿಳಿಸುವ ಮಾತುಗಳಾಗಿವೆ. ಇವು ಹಿರಿಯರ ಅನುಭವಜನ್ಯದಿಂದ ಬಂದಿವೆ. ಮೇಲ್ನೋಟದ ಅರ್ಥಕ್ಕಿಂತ ಭಿನ್ನವಾದ ಅರ್ಥದಿಂದ ಕೂಡಿರುತ್ತವೆ.
ವಿವರಣೆ:  ದೇಶ ಸುತ್ತಿ ನೋಡು, ಕೋಶ ಓದಿ ನೋಡು. ಇದೊಂದು ಪ್ರಚಲಿತದಲ್ಲಿರುವ ಗಾದೆಮಾತಾಗಿದೆ. ಜ್ಞಾನ ಸಂಪಾದನೆಯು ಪ್ರವಾಸ ಮಾಡುವುದರಿಂದ ಇಲ್ಲವೇ ಪುಸ್ತಕ ಓದುವುದರಿಂದ ಸಾಧ್ಯವಾಗುತ್ತದೆ ಎಂಬುದು ಈ ಗಾದೆಮಾತಿನ ಅರ್ಥವಾಗಿದೆ. ಪ್ರವಾಸ ಮಾಡುವುದು ಎಲ್ಲರಿಂದಲೂ ಸಾಧ್ಯವಿಲ್ಲ. ಆದರೆ ಜ್ಞಾನ ಭಂಡಾರದ ಕೀಲಿಕೈಯಂತಿರುವ ಪುಸ್ತಕವನ್ನು ಓದುವುದು ಎಲ್ಲರಿಂದಲೂ ಸಾಧ್ಯ ಎಂಬುದು ಈ ಗಾದೆ ಮಾತಿನ ವೈಶಿಷ್ಟ್ಯವಾಗಿದೆ.  

5) ಬೆಳೆಯುವ ಸಿರಿ ಮೊಳಕೆಯಲ್ಲಿ.
ಪೀಠಿಕೆ: ವೇದ ಸುಳ್ಳಾದರು ಗಾದೆ ಸುಳ್ಳಾಗದು ಎನ್ನುವಂತೆ, ಗಾದೆ ಮಾತುಗಳು ಸರ್ವಕಾಲಿ ಸತ್ಯವನ್ನು ತಿಳಿಸುವ ಮಾತುಗಳಾಗಿವೆ. ಇವು ಹಿರಿಯರ ಅನುಭವಜನ್ಯದಿಂದ ಬಂದಿವೆ. ಮೇಲ್ನೋಟದ ಅರ್ಥಕ್ಕಿಂತ ಭಿನ್ನವಾದ ಅರ್ಥದಿಂದ ಕೂಡಿರುತ್ತವೆ.
ವಿವರಣೆ- ಮುಂದೆ ಬೆಳೆಯಬಹುದಾದ ಪೈರಿನ ಗುಣವನ್ನು ಅದು ಮೊಳಕೆಯಲ್ಲಿ ಇದ್ದಾಗಲೇ ಕಂಡುಬರುತ್ತದೆ. ಒಬ್ಬ ಸಾಧಕನ ಸಾಧನೆಯ ಗುಣ ಆತನ ಬಾಲ್ಯದಲ್ಲಿಯೇ ಕಂಡು ಬರುತ್ತದೆ. ಎಂಬುದು ಈ ಗಾದೆ ಮಾತಿನ ಅರ್ಥವಾಗಿದೆ. ಪಂಡಿತ ಪುಟ್ಟರಾಜ ಗವಾಯಿಗಳ ಸಾಧನೆ ಇದಕ್ಕೆ ಉತ್ತಮ ಉದಾಹರಣೆಯಾಗಿದೆ. 

ಪ್ರಬಂಧಗಳು
 
1) ಪರಿಸರ ಸಂರಕ್ಷಣೆಯ ಇಂದಿನ ಅಗತ್ಯ:
ಪೀಠಿಕೆ: - ಮನುಷ್ಯ ಪರಿಸರದ ಕೂಸು ಎಂಬುದು ಪ್ರಸಿದ್ಧವಾದ ಮಾತು. ಪರಿಸರ ಎಂಬುದು ಮನುಷ್ಯನಿಗೆ ಮಾತ್ರವಲ್ಲ, ಪ್ರತಿಯೊಂದು ಜೀವಿಗೂ ತಾಯಿಯ ಸಮಾನ. ಆದರೆ ಇಂದು ಮಾನವ ಪರಿಸರದ ಮೇಲೆ ಬಲತ್ಕಾರ ಮಾಡುತ್ತಿದ್ದಾನೆ. ಇದರಿಂದ ಪರಿಸರ ನಾಶವಾಗುತ್ತಿದೆ.
ವಿಷಯ ನಿರೂಪಣೆ: - ಮಾನವನು ತನ್ನ ಸ್ವಾರ್ಥಕ್ಕಾಗಿ ಪರಿಸರವನ್ನು ವಿವಿಧ ರೀತಿಯಲ್ಲಿ ಹಾಳು ಮಾಡುತ್ತಿದ್ದಾನೆ. ಇದಕ್ಕೆಪ್ರತಿಯಾಗಿ ಪ್ರಕೃತಿಯು ನೆರೆ ಹಾವಳಿ, ಭೂಕಂಪ, ಅತಿವೃಷ್ಟಿ,ಅನಾವೃಷ್ಟಿ, ಅಕಾಲವೃಷ್ಟಿ, ಚಂಡಮಾರುತ, ಸಾಂಕ್ರಾಮಿಕರೋಗಗಳ ಮೂಲಕ ಪ್ರತಿಭಟನೆಯನ್ನು ನಡೆಸಿದೆ. ಇದನ್ನು ಅರಿತು ಪರಿಸರ ಸಂರಕ್ಷಣೆ ಮಾಡುವುದು ಇಂದಿನ ಅಗತ್ಯವಾಗಿದೆ. ಪರಿಸರ ಮಾಲಿನ್ಯಕ್ಕೆ ಅತಿಕ್ರಮಣ ಸಾಗುವಳಿ, ಅರಣ್ಯನಾಶ, ರಾಸಾಯನಿಕ ಗೊಬ್ಬರಗಳ ಬಳಕೆ,ಗಣಿಗಾರಿಕೆ ಮುಂತಾದವು ಕಾರಣಗಳಾಗಿವೆ. ದಿನದಿಂದ ದಿನಕ್ಕೆ ಅಂತರ್ಜಲದ ಮಟ್ಟ ಕುಸಿಯುತ್ತಿದೆ. ಎಷ್ಟೋ ಜೀವಸಂಕುಲಗಳು ಅಳಿವಿನಂಚಿನಲ್ಲಿವೆ. ಪರಿಸರದಲ್ಲಿ ಒಂದು ಅಂಶವು ಅಳಿದು ಹೋದರೆ ಸಮತೋಲನ ತಪ್ಪುತ್ತದೆ.
ಉಪಸಂಹಾರ :- ಪರಿಸರ ದಿನದಿಂದ ದಿನಕ್ಕೆ ನಾಶವಾಗುತ್ತಾ ಸಾಗಿದರೆ ನಮ್ಮ ಮುಂದಿನ ಪೀಳಿಗೆಗೆ ಶುದ್ಧ ನೀರು,ಗಾಳಿ, ಆಹಾರ ಸಿಗದೇ ಹೋಗಬಹುದು. ಆದ್ದರಿಂದ ಇದನ್ನರಿತು ಪರಿಸರ ಸಂರಕ್ಷಣೆ ಮಾಡುವುದು ಇಂದಿನ ಅಗತ್ಯವಾಗಿದೆ.  

2) ಕ್ರೀಡೆಗಳ ಮಹತ್ವ:
ಪೀಠಿಕೆ:- ಆರೋಗ್ಯವೇ ಭಾಗ್ಯ ಎಂಬ ನಾಣ್ಣುಡಿಯಂತೆ ಕ್ರೀಡೆಗಳು ಆಧುನಿಕತೆಯಲ್ಲಿ ಬಹಳ ಪ್ರಾಮುಖ್ಯತೆ ಪಡೆದುಕೊಂಡಿವೆ. ಸದೃಢ ದೇಹದಲ್ಲಿ ಸದೃಢ ಮನಸ್ಸು ರೂಪಗೊಳ್ಳುತ್ತದೆ. ಆದ್ದರಿಂದ ಪಾಠದ ಜೊತೆಗೆ ಆಟವು ಬೇಕಾಗಿದೆ.
ವಿಷಯ ನಿರೂಪಣೆ:- ಇಂದು ಮಾನವನ ಬದುಕು ಯಾಂತ್ರಿಕ ಬದುಕಾಗಿದೆ. ಜೀವನದಲ್ಲಿ ಉತ್ಸಾಹ ತುಂಬಲು ಮಕ್ಕಳಿಂದ ಹಿಡಿದು ವೃದ್ದರೆಲ್ಲರಿಗೂ ಕ್ರೀಡೆಗಳು ಅವಶ್ಯಕವಾಗಿವೆ. ನಮಗೆ ಇಷ್ಟವಾದ ಕ್ರೀಡೆಯನ್ನು ಆಯ್ಕೆಮಾಡಿಕೊಂಡು ಸತತವಾಗಿ ಪ್ರಯತ್ನಮಾಡಿದರೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಬಹುದು. ಇದಕ್ಕೆ ಉತ್ತಮ ಉದಾಹರಣೆಯಾಗಿ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಮುಂತಾದವರು ನಮ್ಮ ಕಣ್ಮುಂದೆ ಇದ್ದಾರೆ. ಮಗು ಕ್ರೀಡೆಯಲ್ಲಿ ಭಾಗಿಯಾಗುವುದರಿಂದ ಏಕಾಗ್ರತೆ, ಚುರುಕುತನ, ತತಕ್ಷಣದಲ್ಲಿ ಪ್ರತಿಕ್ರಿಯಿಸುವ ಮನೋಭಾವ ಹಾಗೂ ನಾಯಕತ್ವದ ಗುಣಗಳು ಬೆಳೆದು ಪರಿಪೂರ್ಣ ವ್ಯಕ್ತಿತ್ವ ಹೊಂದಲು ಸಾಧ್ಯವಾಗುತ್ತದೆ.
ಉಪಸಂಹಾರ:- ಒಟ್ಟಾರೆಯಾಗಿ ಕ್ರೀಡೆಗಳು ಮಾನವನ ಬದುಕಿನ ಒಂದು ಅಂಗವಾಗಿವೆ. ನಮ್ಮ ಪೂರ್ವಜರಿಂದ ಬಳುವಳಿಯಾಗಿ ಬಂದಿರುವ ಜನಪದ ಕ್ರೀಡೆಗಳನ್ನು ಉಳಿಸಿ ಬೆಳೆಸುವ ಹೊಣೆ ನಮ್ಮದಾಗಬೇಕಿದೆ.  

3) ಸಂಪರ್ಕ ಮಾಧ್ಯಮಗಳಲ್ಲಿ ದೂರದರ್ಶನದ ಪಾತ್ರ:
ಪೀಠಿಕೆ :- ಸಂಪರ್ಕ ಮಾಧ್ಯಮಗಳಲ್ಲಿ ಅತೀ ಹೆಚ್ಚು ಬಳಕೆಯಲ್ಲಿರುವ ಮಾಧ್ಯಮ ದೂರದರ್ಶನವಾಗಿದೆ. ಹೆಸೆರೇ ಹೇಳುವಂತೆ ದೂರದಲ್ಲಿರುವುದನ್ನು ಕುಳಿತಲ್ಲಿಯೇ ದರ್ಶನ ಮಾಡಿಸುವುದು ದೂರದರ್ಶನವಾಗಿದೆ.
ವಿಷಯ ನಿರೂಪಣೆ :- ದೂರದರ್ಶನ ಜನಜೀವನದ ಒಂದು ಅವಿಭಾಜ್ಯ ಅಂಗವಾಗಿದೆ. ಇದು ಮಕ್ಕಳಾದಿಯಾಗಿ ವಯೋವೃದ್ದರವರೆಗೂ ಎಲರನ್ನು ಆಕರ್ಷಿಸುವ ಮಾಧ್ಯಮವಾಗಿದೆ. ಸಮಾಜದ ನಾನಾ ವೃತ್ತಿಗಳಲ್ಲಿ ತೊಡಗಿರುವ ಎಲ್ಲಾ ಜನರಿಗೂ ಉಪಯುಕ್ತ ಮಾಹಿತಿಯನ್ನು ಒದಗಿಸುವುದರೊಂದಿಗೆ ಮನೋರಂಜನಾ ಮಾಧ್ಯಮವಾಗಿಯೂ ಕಾರ್ಯನಿರ್ವಹಿತ್ತಿದೆ. ಉದಾಹರಣಗೆ ರೈತರಿಗೆ  ಕೃಷಿ ಮಾಹಿತಿಯನ್ನು, ವರ್ತಕರಿಗೆ ಮಾರುಕಟ್ಟೆಯ ವಿವರವನ್ನು, ಕರಾವಳಿ ತೀರದವರಿಗೆ ಹವಾಮಾನ ಹಾಗೂ ವಾಯುಗುಣದ ಎಚ್ಚರಿಕೆಯನ್ನು ಕುಳಿತಲ್ಲೇ ಏಕಕಾಲಕ್ಕೆ ಎಲ್ಲರಿಗೂ ತಿಳಿಸುತ್ತದೆ. ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆಗಾಗಿ ವಿಜ್ಞಾನ, ಗಣಿತ ವಿಷಯಗಳ ಪಾಠಮಾಲಿಕೆ ಪ್ರಸಾರವಾಗುತ್ತಿವೆ. ಕ್ರೀಡೆ, ಸಂಗೀತ, ವಿಜ್ಞಾನ, ಚಲನಚಿತ್ರ, ವಿವಿಧ ಕ್ಷೇತ್ರಗಳ ಮಾಹಿತಿ ನೀಡುವುದರೊಂದಿಗೆ ಇದೊಂದು ಜ್ಞಾನಾಭಿವೃದ್ಧಿಯನ್ನು ಉಂಟು ಮಾಡುವ ಮಾಧ್ಯಮವಾಗಿದೆ.
ಉಪಸಂಹಾರ:- ಆಧುನಿಕತೆಯಲ್ಲಿ ದೂರದರ್ಶನದ ಪಾತ್ರ ಪ್ರಮುಖವಾದದ್ದು. ವಿದ್ಯಾರ್ಥಿಗಳು ಇದರ ಸಾಧಕ ಭಾದಕಗಳನ್ನು ಅರಿತು ಉಪಯೋಗಿಸಿಕೊಳ್ಳಬೇಕು.  

4) ರಾಷ್ಟ್ರೀಯ ಹಬ್ಬಗಳು
ಪೀಠಿಕೆ:- ರಾಷ್ಟ್ರೀಯ ಹಬ್ಬಗಳು ಆಯಾ ದೇಶದ ನಾಗರಿಕತೆ, ಸಂಸ್ಕೃತಿ ಹಾಗೂ ಇತಿಹಾಸವನ್ನು ಬಿಂಬಿಸುವ ಪ್ರತೀಕಗಳಾಗಿವೆ. ಎಳೆಯರಲ್ಲಿ ದೇಶಾಭಿಮಾನ ಮೂಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.
ವಿಷಯ ನಿರೂಪಣೆ :- ದೇಶದ ಎಲ್ಲ ಜನರು ತಮ್ಮ ಜಾತಿ, ಧರ್ಮವನ್ನು ಮರೆತು ನಾವೆಲ್ಲರೂ ಒಂದು, ನಾವೂ ಭಾರತೀಯರು ಎಂಬ ಭಾವನೆಯನ್ನು ಹೊಂದಿ ಏಕಕಾಲಕ್ಕೆ ಎಲ್ಲರೂ ಕೂಡಿ ಆಚರಿಸುವ ಹಬ್ಬಗಳೇ ರಾಷ್ಟ್ರೀಯ ಹಬ್ಬಗಳು. ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿದ ಭವ್ಯ ಭಾರತದ ಪ್ರಮುಖ ರಾಷ್ಟ್ರೀಯ ಹಬ್ಬಗಳೆಂದರೆ ಸ್ವಾತಂತ್ರ್ಯೋತ್ಸವ ಹಾಗೂ ಗಣರಾಜ್ಯೋತ್ಸವ. ಸ್ವಾತಂತ್ರ್ಯೋತ್ಸವವನ್ನು ಅಗಸ್ಟ 15 ರಂದು ಗಣರಾಜ್ಯೋತ್ಸವವನ್ನು ಜನೇವರಿ 26ರಂದು ಆಚರಿಸುತ್ತೇವೆ. ಭಾರತ ಸ್ವತಂತ್ರ ಹೊಂದಿದ ಇತಿಹಾಸವನ್ನು ಸ್ವಾತಂತ್ರ್ಯೋತ್ಸವ ಬಿಂಬಿಸಿದರೆ, ಗಣರಾಜ್ಯೋತ್ಸವ ದೇಶ ಏಕರೂಪದ ಆಡಳಿತ ಹಾಗೂ ಕಾನೂನು ವ್ಯವಸ್ಥೆಗೆ ಒಳಪಟ್ಟ ಇತಿಹಾಸವನ್ನು ಬಿಂಬಿಸುತ್ತದೆ.
ಉಪಸಂಹಾರ:- ದೇಶದ ಎಲ್ಲ ಜನರು ಶಾಲೆ, ಕಾಲೇಜು, ಕಛೇರಿ, ಸಾರ್ವಜನಿಕ ಸ್ಥಳಗಳಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಿ, ದೇಶಕ್ಕೆ ಗೌರವ ಸೂಚಿಸುವುದು ಹಾಗೂ ಯುವಕರಲ್ಲಿ ದೇಶಾಭಿಮಾನ ಮೂಡಿಸುವಲ್ಲಿ ರಾಷ್ಟ್ರೀಯ ಹಬ್ಬಗಳು ಪ್ರಮುಖ ಪಾತ್ರವಹಿಸುತ್ತವೆ.  

5) ಸ್ವಚ್ಛ ಭಾರತ ಅಭಿಯಾನ
ಪೀಠಿಕೆ: - ಸ್ವಚ್ಛತೆಯು ಉತ್ತಮ ನಾಗರಿಕತ್ವದ ಲಕ್ಷಣವಾಗಿದೆ. ಮಾನವನ ನೆಮ್ಮದಿಯ ಬದುಕಿನ ಒಂದು ಅಂಶವಾಗಿದೆ. ನವ ಭಾರತದ ಕನಸನ್ನು ಹೊತ್ತ ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು 02.10.2014 ರಲ್ಲಿ ಈ ಯೋಜನೆಯನ್ನು ಜಾರಿಗೆ ತಂದರು.
ವಿಷಯ ನಿರೂಪಣೆ: - ಪ್ರಧಾನ ಮಂತ್ರಿಗಳು ದೆಹಲಿಯ ರಾಜಘಾಟದಲ್ಲಿ ಮಹಾತ್ಮಾ ಗಾಂಧೀಜಿಯವರ ದೇಶದ ಅಭಿವೃದ್ಧಿಯ ಮಾತುಗಳನ್ನು ನೆನಪಿಸಿಕೊಳ್ಳುತ್ತಾ ತಾವೇ ಸ್ವತಃ ರಸ್ತೆ ಸ್ವಚ್ಛಗೊಳಿಸುವುದರ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ದೇಶದ ನಾಗರಿಕರಿಗೆ ಮಾದರಿಯಾದರು. ದೇಶದ ಸರಕಾರಿ ಮತ್ತು ಸರಕಾರೇತರ ಸಂಘ ಸಂಸ್ಥೆಗಳ ಹಾಗೂ ಶಾಲಾ ಕಾಲೇಜು ವಿದ್ಯಾರ್ಗಳ ಸಹಭಾಗಿತ್ವದಲ್ಲಿ ಯೋಜನೆಯನ್ನು ಯಶಸ್ವಿಗೊಳಿಸಲು ಯೋಜಿಸಲಾಯಿತು. 2019 ಅಕ್ಟೋಬರ್ 2 ಒಳಗಾಗಿ ದೇಶವನ್ನು ಬಯಲು ಶೌಚದಿಂದ ಮುಕ್ತಗೊಳಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಶೌಚಾಲಯ ಕಟ್ಟಿಕೊಳ್ಳಲು ಅನೇಕ ಸರಕಾರ ಹಾಗೂ ಸಹಕಾರಿ ಸಂಘಗಳು ಸಹಾಯಧನ ನೀಡುತ್ತಿವೆ. ಈ ಯೋಜನೆಯ ಧ್ಯೇಯ ವಾಕ್ಯ ಒಂದು ಹೆಜ್ಜೆ ಸ್ವಚ್ಛತೆಯ ಕಡೆಗೆ ಎಂಬುದಾಗಿದೆ.
ಉಪಸಂಹಾರ: ದೇಶದ ಅಭಿವೃದ್ಧಿ ಆ ದೇಶದ ಸ್ವಚ್ಛತೆ ಮತ್ತು ಅದರ ಕಾರ್ಯ ವೈಖರಿಯನ್ನು ಅವಲಂಬಿಸಿರುತ್ತದೆ.ಎಲ್ಲರೂ ಮುಕ್ತ ಮನಸ್ಸಿನಿಂದ ಕಾರ್ಯ ನಿರ್ವಹಿಸಿದಲ್ಲಿ ಈ ಯೋಜನೆ ಯಶಸ್ವಿಯಾಗುವುದರಲ್ಲಿ ಎರಡು ಮಾತಿಲ್ಲ.  

6) ಕಂಪ್ಯೂಟರ್‌ನ  ಉಪಯೋಗಗಳು
ಪೀಠಿಕೆ:- ಕಂಪ್ಯೂಟರ್ ಈ ಪದದ ಅರ್ಥವು ಕನ್ನಡದಲ್ಲಿ ಗಣಕಯಂತ್ರ ಎಂದಾಗುತ್ತದೆ. ಆಧುನಿಕತೆಯಲ್ಲಿ ಇದರ ಪ್ರಾಮುಖ್ಯತೆ ಬಹಳಷ್ಟಿದೆ. ಇಂದು ಪ್ರತಿಯೊಂದು ಶಾಲಾ ಕಾಲೇಜು, ವಿವಿಧ ಕಛೇರಿಗಳಲ್ಲಿಯೂ ಕಂಪ್ಯೂಟರ್‌ನ ಬಳಕೆಯಿದೆ. ವಿಜ್ಞಾನ ಮುಂದುವರೆದಂತೆ ಇದರಲ್ಲಿ ಅನೇಕ ವಿಧಗಳನ್ನು ನೋಡುತ್ತಿದ್ದೇವೆ.
ವಿಷಯ ನಿರೂಪಣೆ:-ಕಂಪ್ಯೂಟರ್ ಎಂಬ ಈ ಮಾಯ ಪೆಟ್ಟಿಗೆಯ ಬಳಕೆಯಿಂದ ಮಾನವನು ಕೈಯಾರೆ ಮಾಡುವ ಮುರ್ನಾಲ್ಕು ದಿನದ ಕೆಲಸವನ್ನು ಈ ಕಂಪ್ಯೂಟರ್‌ನ ಸಹಾಯದಿಂದ ಕೆಲವೇ ಗಂಟೆಗಳಲ್ಲಿ ಮಾಡಬಹುದಾಗಿದೆ. ಗಣಿತ, ವಿಜ್ಞಾನ,ಸಾಮಾನ್ಯ ಜ್ಞಾನ, ಸಾಹಿತ್ಯ, ಸಂಸ್ಕೃತಿ ಜಗತ್ತಿನ ಅನುಭವ ಪರಿಧಿಯು ನಮಗೆ ಅಂಗೈಯಲ್ಲಿ ಕಾಣುವಂತಾಗಿದೆ. ಮಾನವನು ತನಗೆ ಅವಶ್ಯವಿರುವ ದಾಖಲೆಗಳನ್ನು ಇದರಲ್ಲಿ ಸಂಗ್ರಹಿಸಿ, ಬೇಕೆಂದಾಗ ತಕ್ಷಣದಲ್ಲಿ ಪಡೆಯಬಹುದಾಗಿದೆ.
ಉಪಸಂಹಾರ:- ಒಟ್ಟಾರೆಯಾಗಿ ಕಂಪ್ಯೂಟರ್‌ನ ಬಳಕೆ ಆಧುನಿಕ ಯುಗದಲ್ಲಿ ಬಹಳ ಮಹತ್ವ ಪಡೆದುಕೊಂಡಿದೆ. ವೈಜ್ಞಾನಿಕ ಜಗತ್ತಿನ ವಿಶಿಷ್ಟ ಕೊಡುಗೆಯಿಂದ ಕಂಪ್ಯೂಟರ್ ವಿಶಿಷ್ಟ ಸಂಪತ್ತಾಗಿದೆ.    

ಪತ್ರಲೇಖನ       

 ಖಾಸಗಿ ಪತ್ರ / ವೈಯಕ್ತಿಕ ಪತ್ರ

1)  ನಿಮ್ಮನ್ನು ಶ್ರೀರಂಗಪಟ್ಟಣದ ಸರ್ಕಾರಿ ಪ್ರೌಢಶಾಲೆಯ ಕೀರ್ತಿಕುಮಾರ್ ಎಂದು ಭಾವಿಸಿಕೊಂಡು ಹಾಸನದಲ್ಲಿರುವ ನಿಮ್ಮ ತಂದೆಗೆ ಶಾಲಾ ಶುಲ್ಕ ಕಟ್ಟಲು 150/- ರೂಪಾಯಿಗಳನ್ನು ಕೋರಿ  ಒಂದು ಪತ್ರ ಬರೆಯಿರಿ.

ಇವರಿಂದ:                                                                                       ದಿನಾಂಕ : 05.06.2020
ಕೀರ್ತಿಕುಮಾರ,
ಒಂಬತ್ತನೆಯ ತರಗತಿ, ಸರ್ಕಾರಿ ಪ್ರೌಢಶಾಲೆ,   
ಶ್ರೀರಂಗಪಟ್ಟಣ - 571438.  

ತೀರ್ಥರೂಪರವರಿಗೆ ನಿಮ್ಮ ಮಗನು ಮಾಡುವ ಸಾಷ್ಟಾಂಗ ನಮಸ್ಕಾರಗಳು.
ಇಲ್ಲಿ ನಾನು ಆರೋಗ್ಯವಾಗಿದ್ದೇನೆ. ಅಲ್ಲಿ ನಿಮ್ಮ ಮತ್ತು ಅಮ್ಮನ ಆರೋಗ್ಯ ಹೇಗಿದೆ? ಯಾವುದಕ್ಕೂ ಪತ್ರ ಬರೆಯಿರಿ. ಇಲ್ಲಿ ನಾನು ಚೆನ್ನಾಗಿ ವಿದ್ಯಾಭ್ಯಾಸ ಮಾಡುತ್ತಿದ್ದೇನೆ. ನಿಮ್ಮ ಅಪೇಕ್ಷೆಯಂತೆ ಪ್ರಥಮ ಸ್ಥಾನದಲ್ಲಿ ಉತ್ತೀರ್ಣನಾಗಲು ಪ್ರಯತ್ನಿಸುತ್ತಿದ್ದೇನೆ. ಪತ್ರದ ಮುಖ್ಯ ವಿಚಾರವೇನೆಂದರೆ, ಜೂನ್ 10 ನೇ ತಾರೀಖಿನ ಒಳಗಾಗಿ ವಾರ್ಷಿಕ ಪರೀಕ್ಷೆಯ ಶುಲ್ಕ 150/- (ನೂರ ಐವತ್ತು ಮಾತ್ರ) ರೂಪಾಯಿಗಳನ್ನು ಕಟ್ಟಬೇಕಾಗಿದೆ. ತಾವು ಆದಷ್ಟು ಬೇಗ ಅಂಚೆ ಮೂಲಕ ಹಣ ಕಳುಹಿಸಿ ಕೊಡಿ ಎಂದು ಕೇಳಿಕೊಳ್ಳುತ್ತೇನೆ. ಮನೆಯವರಿಗೆಲ್ಲ ನನ್ನ ನಮಸ್ಕಾರಗಳನ್ನು ತಿಳಿಸಿ. ಉಳಿದ ವಿಷಯವನ್ನು ಊರಿಗೆ  ಬಂದಾಗ ಮಾತನಾಡುತ್ತೇನೆ.  
ನಮಸ್ಕಾರಗಳೊಂದಿಗೆ,                                                              
ನಿಮ್ಮ ಪ್ರೀತಿಯ  ಮಗ
ಕೀರ್ತಿಕುಮಾರ

ಇವರಿಗೆ:
ಶ್ರೀ ಸಿದ್ದಪ್ಪ,
ಮನೆ ಸಂಖ್ಯೆ 54, 1ನೆಯ ಮುಖ್ಯರಸ್ತೆ,
ಕುವೆಂಪುನಗರ, ಹಾಸನ - 573 201        

2)  ನಿಮ್ಮನ್ನು ಗೌರಿಬಿದನೂರಿನ ವಿನಾಯಕ ಪ್ರೌಢಶಾಲೆಯ ಮಮತ ಕೆ.ಎಲ್. ಎಂದು ಭಾವಸಿಕೊಡು ತುಮಕೂರಿನಲ್ಲಿರುವ ನಿಮ್ಮ ತಂದೆಗೆ ನಿಮ್ಮ ವಿದ್ಯಾಭ್ಯಾಸದ ಪ್ರಗತಿಯನ್ನು ಕುರಿತು ಒಂದು ಪತ್ರ ಬರೆಯಿರಿ.

ಇವರಿಂದ,                                                                                    ದಿನಾಂಕ 25-02-2020
ಮಮತ ಕೆ. ಎಲ್. 10 ನೇ ತರಗತಿ,
ಬಿ ವಿಭಾಗ, ವಿನಾಯಕ ಪ್ರೌಢಶಾಲೆ,
ಗೌರಿಬಿದನೂರು.  

ತೀರ್ಥರೂಪರವರಿಗೆ
ನಿಮ್ಮ ಮಗಳು ಮಾಡುವ ನಮಸ್ಕಾರಗಳು.
ನಾನು ಇಲ್ಲಿ ಆರೋಗ್ಯವಾಗಿದ್ದೇನೆ. ನಿಮ್ಮ ಯೋಗಕ್ಷೇಮದ ವಿಚಾರವಾಗಿ ಪತ್ರವನ್ನು ಬರೆಯಿರಿ. ಇಲ್ಲಿ ನಮ್ಮ ನಿತ್ಯದ ಶಾಲಾ ಚಟುವಟಿಕೆಗಳು ಯಾವ ತೊಂದರೆಯೂ ಇಲ್ಲದಂತೆ ನಡೆಯುತ್ತಿವೆ. ಕಳೆದ ವಾರ ಮಾಸಿಕ ಪರೀಕ್ಷೆಗಳು ನಡೆದಿದ್ದವು. ಆ ಪರೀಕ್ಷೆಯಲ್ಲಿ ನಾನು ತರಗತಿಗೆ ದ್ವಿತೀಯ ಸ್ಥಾನವನ್ನು ಪಡೆದಿದ್ದೇನೆ. ಮಂದಿನ ಪರೀಕ್ಷೆಯಲ್ಲಿ ಇನ್ನು ಸ್ವಲ್ಪ ಪ್ರಯತ್ನ ಮಾಡಿದಲ್ಲಿ ನೀನು ಪ್ರಥಮ ಸ್ಥಾನವನ್ನು ಪಡೆದೇ ಪಡೆಯುತ್ತೀಯ ಎಂದು ನನ್ನ  ಗುರುಗಳು ಹೇಳಿದರು. ನಾನು ಅವರ ಮಾರ್ಗದರ್ಶನದಂತೆ ವ್ಯಾಸಂಗವನ್ನು ಮಾಡಿ, ಶಾಲೆಗೆ ಹಾಗೂ ನಿಮಗೆ ಕೀರ್ತಿಯನ್ನು ತರುತ್ತೇನೆ. 10 ನೇ ತರಗತಿಯ ಫಲಿತಾಂಶ ನಮ್ಮ ಮುಂದಿನ ವ್ಯಾಸಂಗಕ್ಕೆ ದಾರಿದೀಪವಾಗುವುದರಿಂದ ಶಾಲಾ ಶಿಕ್ಷಕರು ತುಂಬಾ ಕಾಳಜಿವಹಿಸಿ ಪಾಠಗಳನ್ನು ಮಾಡುತ್ತಿದ್ದಾರೆ. ನಾವೂ ಕೂಡ ಶ್ರದ್ಧೆವಹಿಸಿ ಕಲಿಯುತ್ತಿದ್ದೇವೆ. ಒಳ್ಳೆಯ ಶಾಲೆ ಹಾಗೂ ಗುರುಗಳನ್ನು ಪಡೆದ ನಾವು ನಿಜಕ್ಕೂ ಧನ್ಯರು. ಮನೆಯಲ್ಲಿ ನನ್ನ ಪ್ರೀತಿಯ ಅಮ್ಮ ಮತ್ತು ಅಣ್ಣನಿಗೆ ನನ್ನ ನಮಸ್ಕಾರಗಳನ್ನು ತಿಳಿಸಿರಿ.       

ನಮಸ್ಕಾರಗಳೊಂದಿಗೆ,                                                                                            ನಿಮ್ಮ ಪ್ರೀತಿಯ
                                                                                                                               (ಮಮತಕೆ.ಎಲ್.)

ಇವರಿಗೆ,                                                                        
ಶ್ರೀ ಬಸವರಾಜ ಕೆ. ಎಲ್.
ಮನೆ ನಂ - 1199, ಬನಶಂಕರಿ ನಿಲಯ,
ರಾಜಕುಮಾರ್ ರಸ್ತೆ, ತುಮಕೂರು.

3.ನಿಮ್ಮ ಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವವನ್ನು ಕುರಿತು ನಿಮ್ಮ ಗೆಳೆಯ/ ಗೆಳತಿಗೆ ಒಂದು ಪತ್ರವನ್ನು ಬರೆಯಿರಿ.

ಇಂದ:                                                                                                                            ದಿನಾಂಕ:12:03:2020                                      
ಸಲ್ಮಾ /ಸಲ್ಮಾನ್                                                                                            
10 ನೇ ತರಗತಿ ಸರ್ಕಾರಿ ಉರ್ದು ಪ್ರೌಢಶಾಲೆ(ಆರ್.ಎಂ.ಎಸ್.ಎ.)
ಅರಳಿಹಳ್ಳಿ, ಭದ್ರಾವತಿ ತಾಲ್ಲೂಕು      

ಪ್ರೀಯ ಗೆಳೆಯ/ಗೆಳತಿ ಯಾದ  ಸುಧಾ/ಸುಧಾಕರ ಳಿಗೆ/ನಿಗೆ ನಿನ್ನ ಗೆಳೆಯ/ಗೆಳತಿ ಮಾಡುವ ವಂದನೆಗಳು.
ನಮ್ಮ ಶಾಲೆಯಲ್ಲಿ ದಿನಾಂಕ 7ನೇ ಫೆಬ್ರವರಿ 2020 ರಂದು ಶಾಲಾ ವಾರ್ಷಿಕೋತ್ಸವವನ್ನು ಹಮ್ಮಿಕೊಂಡಿದ್ದೆವು. ನಮ್ಮ ಮುಖ್ಯೋಪಾಧ್ಯಾಯರ ಮುಂದಾಳತ್ವದಲ್ಲಿ ಎಲ್ಲಾ ಶಿಕ್ಷಕರು,ವಿದ್ಯಾರ್ಥಿಗಳು ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಭಾಗವಹಿಸಿದ್ದರು.
ವಾರ್ಷಿಕೋತ್ಸವದ ಅಂಗವಾಗಿ ವಾರ್ಷಿಕ ಕ್ರೀಡಾಕೂಟ,ರಸಪ್ರಶ್ನೆ,ಪ್ರಬಂಧ,ಭಾಷಣ ಸ್ಪರ್ಧೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದರು.ಕೆಲವು ಸ್ಪರ್ಧೆಗಳಲ್ಲಿ ನಾನು ಸಹ ಭಾಗವಹಿಸಿ ಬಹುಮಾನಗಳನ್ನು ಪಡೆದಿದ್ದೇನೆ ಎಂದು ಹೇಳಲು ನನಗೆ ಹೆಮ್ಮೆ ಎನಿಸುತ್ತದೆ. ಹಾಗೆಯೇ ನನ್ನ ವಿದ್ಯಾಭ್ಯಾಸದ ಕಡೆಗೂ ಗಮನ ನೀಡುತ್ತದ್ದೇನೆ. ಈ ಪತ್ರ ತಲುಪಿದ ತಕ್ಷಣ ಪತ್ರ ಬರೆಯುತ್ತೀಯ ಎಂದು ನಂಬಿರುತ್ತೇನೆ. ಈ ಎಲ್ಲ ವಿಷಯವನ್ನು  ನಿನ್ನ ಮಾತೃಶ್ರೀಯವರಿಗೂ ಹೇಳಿ,ನನ್ನ ನಮಸ್ಕಾರಗಳನ್ನು ತಿಳಿಸು..     
ವಂದನೆಗಳೊಂದಿಗೆ,                                       
ಇಂತಿ ನಿನ್ನ ಪ್ರೀತಿಯ ಗೆಳೆಯ/ಗೆಳತಿ
ಸಲ್ಮಾ / ಸಲ್ಮಾನ್                          
 
ಗೆ,
ಸುಧಾ/ಸುಧಾಕರ
ಸರ್ಕಾರಿ ಪ್ರೌಢಶಾಲೆ,ನೆಹರೂ ನಗರ,
ಶಿವಮೊಗ್ಗ-577421                                             

ವ್ಯವಹಾರಿಕ ಪತ್ರ ಅಥವಾ ಮನವಿ ಪತ್ರ  

4) ನಿಮ್ಮನ್ನು ವಿಜಯಪುರದ ಸಂಗಮೇಶ ಎಂದು ಭಾವಿಸಿಕೊಂಡು ನಿಮ್ಮ ಊರಿನ ಕೋಟೆ ಬೀದಿಗೆ ನೀರಿನ ಸೌಲಭ್ಯ ಒದಗಿಸಿಕೊಡುವಂತೆ ಕೋರಿ, ನಿಮ್ಮ ಜಿಲ್ಲೆಯ ಜಿಲ್ಲಾಧಿಕಾರಿಯವರಿಗೆ ಒಂದು ಪತ್ರ ಬರೆಯಿರಿ.

ಇವರಿಂದ,                                                                                                  ದಿನಾಂಕ : 05.05.2020
ಶ್ರೀ ಸಂಗಮೇಶ,
ಕೋಟೆ ಬೀದಿ,
ಬಿಜಾಪುರ - 586101.

ಇವರಿಗೆ,
ಜಿಲ್ಲಾಧಿಕಾರಿಗಳು,
ವಿಜಯಪುರ - 586101,
ವಿಜಯಪುರ ಜಿಲ್ಲೆ.

ಮಾನ್ಯರೇ,  

                         ವಿಷಯ : ಕೋಟೆ ಬೀದಿಗೆ ನೀರಿನ ಸೌಲಭ್ಯ ಒದಗಿಸುವಂತೆ ಕೋರಿ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮ ಕೋಟೆ ಬೀದಿಯಲ್ಲಿ ಸುಮಾರು 60 ಮನೆಗಳಿದ್ದು ಕೊಳಾಯಿಯ ವ್ಯವಸ್ಥೆ ಇಲ್ಲದೆ ಕುಡಿಯುವ ನೀರಿಗೆ ತುಂಬಾ ತೊಂದರೆಯಾಗಿದೆ. ಜನಪರ ಕಾಳಜಿ ಇರುವ ತಾವು ದಯಮಾಡಿ ಕೋಟೆ ಬೀದಿಗೆ ಬೋರ್ವೆಲ್ ಹಾಕಿಸಿ, ನಳದ ಮೂಲಕ ಕುಡಿಯುವ ನೀರಿನ ಸೌಲಭ್ಯ ಒದಗಿಸಿಕೊಡಬೇಕೆಂದು ತಮ್ಮಲ್ಲಿ ವಿನಯಪೂರ್ವಕವಾಗಿ ಕೋರುತ್ತೇನೆ.
ವಂದನೆಗಳೊಂದಿಗೆ,                                                                                                                
 
ತಮ್ಮ ವಿಶ್ವಾಸಿ,
(ಸಂಗಮೇಶ)

ಸ್ಥಳ : ಬಿಜಾಪುರ

5) ನಿಮ್ಮನ್ನು ಧಾರವಾಡದ ಜವಾಹರ ನವೋದಯ ಶಾಲೆಯ ಚಿನ್ಮಯ ಜಿ.ಎಂ. ಎಂದು ಭಾವಿಸಿಕೊಂಡು ಎರಡು ದಿನ ರಜೆ  ಕೋರಿ  ನಿಮ್ಮ ಶಾಲೆಯ ತರಗತಿ ಶಿಕ್ಷಕರಿಗೆ ಒಂದು ರಜಾ ಅರ್ಜಿ ಬರೆಯಿರಿ.

ಇವರಿಂದ,                                                                                                              ದಿನಾಂಕ 20-04-2020
ಚಿನ್ಮಯ್ ಜಿ.ಎಂ.
8 ನೇ ತರಗತಿ, ಎ ವಿಭಾಗ,
ಜವಾಹರ ನವೋದಯ ಶಾಲೆ ಧಾರವಾಡ.

ಇವರಿಗೆ,
ತರಗತಿ ಅಧ್ಯಾಪಕರು
ಜವಾಹರ ನವೋದಯ ಶಾಲೆ ಧಾರವಾಡ.

ಮಾನ್ಯರೆ,  

                      ವಿಷಯ : ಎರಡು ದಿನ ರಜೆ ನೀಡುವಂತೆ ಕೋರಿ ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ,
ನನ್ನ ಅಕ್ಕನ ಮದುವೆಯು ದಿನಾಂಕ 22-04-2020 ಹಾಗೂ  23-04-2020 ರಂದು ಬೆಳಗಾವಿಯಲ್ಲಿ ನೆರವೇರುತ್ತಿದೆ. ಈ ಸಂಭ್ರಮದಲ್ಲಿ ನಾನೂ ಅಗತ್ಯವಾಗಿ ಪಾಲ್ಗೊಳ್ಳಬೇಕಾಗಿದೆ. ಆದುದರಿಂದ ದಯವಿಟ್ಟು ಮೇಲ್ಕಾಣಿಸಿದ ಎರಡು ದಿನಗಳಿಗೆ ರಜೆಯನ್ನು ನೀಡಬೇಕೆಂದು ವಿನಂತಿಸುತ್ತೇನೆ.      
ನಮಸ್ಕಾರಗಳೊಂದಿಗೆ,                                                                                                                
 
ತಮ್ಮ ವಿಧೇಯ ವಿದ್ಯಾರ್ಥಿ
ಸಹಿ        
(ಚಿನ್ಮಯ್ ಜಿ.ಎಂ.)   

6) ನಿಮ್ಮನ್ನು ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ  ಗುಬ್ಬಿಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ತನುಜ ಎಸ್. ಎಂ. ಎಂದು ಭಾವಿಸಿಕೊಡು ನಿಮ್ಮ ಊರಿನ ಬೀದಿ  ದೀಪಗಳನ್ನು ಸರಿಪಡಿಸುವಂತೆ ಕೋರಿ ನಿಮ್ಮ ಗ್ರಾಮಪಂಚಾಯಿತಿ ಅಧ್ಯಕ್ಷರಿಗೆ ಒಂದು ಪತ್ರ ಬರೆಯಿರಿ.

ಇವರಿಂದ,                                                                                                            ದಿನಾಂಕ 10-01-2020
ತನುಜ ಎಸ್. ಎಂ.
10 ನೇ ತರಗತಿ, ಸರ್ಕಾರಿ ಪ್ರೌಢಶಾಲೆ,
ಗುಬ್ಬಿಹಳ್ಳಿ, ಕಡೂರು ತಾಲ್ಲೂಕು,
ಚಿಕ್ಕಮಗಳೂರು ಜಿಲ್ಲೆ.

ಇವರಿಗೆ,
ಅಧ್ಯಕ್ಷರು,
ಗ್ರಾಮ ಪಂಚಾಯಿತಿ,
ಗುಬ್ಬಿಹಳ್ಳಿ.
ಕಡೂರು ತಾಲ್ಲೂಕು,
ಚಿಕ್ಕಮಗಳೂರು ಜಿಲ್ಲೆ.

ಮಾನ್ಯರೇ,  

                       ವಿಷಯ: ನಮ್ಮ ಊರಿನ ಬೀದಿ ದೀಪಗಳನ್ನು ಸರಿಪಡಿಸುವಂತೆ ಕೋರಿ.
ವಿಷಯಕ್ಕೆ ಸಂಬಂಧಿಸಿದಂತೆ, ತಮ್ಮ ಗಮನಕ್ಕೆ ತರಬಯಸುವುದೇನೆಂದರೆ, ನಮ್ಮ ಊರಿನ ಬೀದಿ ದೀಪಗಳು ಕೆಲವು ದಿನಗಳಿಂದ ಕೆಟ್ಟುಹೋಗಿವೆ. ಇದರಿಂದ ರಸ್ತೆಯಲ್ಲಿ ರಾತ್ರಿ ಹೊತ್ತು ಮುದುಕರು, ಹೆಣ್ಣುಮಕ್ಕಳು ಹಾಗೂ ಮಕ್ಕಳು ಏಕಾಂಗಿಯಾಗಿ ಸಂಚರಿಸಲು ಭಯಪಡುವಂತಾಗಿದೆ. ಹೀಗಾಗಿ, ಜನಪರ ಕಾಳಜಿ ಹೊಂದಿರುವ ತಾವು ಈ ಕೂಡಲೇ ನಮ್ಮ ಗ್ರಾಮದ ಬೀದಿ ದೀಪಗಳನ್ನು ಸರಿಪಡಿಸಿ ಜನರಿಗಾಗುತ್ತಿರುವ ತೊಂದರೆಗಳನ್ನು ನಿವಾರಿಸಬೇಕೆಂದು ಗ್ರಾಮಸ್ಥರ ಪರವಾಗಿ ಮನವಿ ಮಾಡಿಕೊಳ್ಳುತ್ತೇನೆ.
ವಂದನೆಗಳೊಂದಿಗೆ,                                                              
                                                                                                                                   
ತಮ್ಮವಿಶ್ವಾಸಿ,
 (ತನುಜ ಎಸ್. ಎಂ.)










 
You Might Like

Post a Comment

0 Comments