Recent Posts

ಭೂಮಿತಾಯ ಕುಡಿಗಳು - ೧೦ ನೇ ತರಗತಿ ನುಡಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

ಭೂಮಿತಾಯ ಕುಡಿಗಳು

-:ಕವಿಪರಿಚಯ:
* ಕವಿಯ ಹೆಸರು: ಕೆ. ಎಸ್. ನಿಸಾರ್ ಅಹಮದ್
* ಜನ್ಮ ವರ್ಷ: ಫೆಬ್ರುವರಿ  05, 1936.                                                                            
* ಜನ್ಮ ಸ್ಥಳ: ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ ಜಿಲ್ಲೆ)                                                              
* ಕೃತಿಗಳು: ಮನಸು ಗಾಂಧಿ ಬಜಾರು, ನೆನೆದವರ ಮನದಲ್ಲಿ, ಸುಮುಹೂರ್ತ, ಸಂಜೆ ಐದರ ಮಳೆ, ನಿತ್ಯೋತ್ಸವ
 
ಅ) ಕೆಳಗಿನ ಪ್ರಶ್ನೆಗಳಿಗೆ ಒಂದೊಂದು ವಾಕ್ಯದ ಉತ್ತರಗಳನ್ನು ಬರೆಯಿರಿ.
1) ಭೂಮಿ ತಾಯ ಕುಡಿಗಳು ಪದ್ಯದಲ್ಲಿ ಕವಿ ಯಾರು ಯಾರು ಒಂದು ಎಂದು ಹೇಳಿದ್ದಾರೆ?
- ಭೂಮಿ ತಾಯ ಕುಡಿಗಳು ಪದ್ಯದಲ್ಲಿ ಕವಿಗಳು ಬಾರತೀಯರಾದ ನಾವು, ನೀವು, ಅವರು, ಇವರು ಎಲ್ಲರೂ ಒಂದು ಎಂದು ಹೇಳಿದ್ದಾರೆ.       

2) ಎಲ್ಲರೂ ಇಂದೇ ಏನೆಂದು ಪಣ ತೊಡಬೇಕೆಂದು ಕವಿ ನಿಸಾರ್ ಅಹಮದ್ ಆಶಿಸಿದ್ದಾರೆ?
- ನಾವೆಲ್ಲರೂ ಒಂದೇ, ಈ ಭಾರತ ಭೂಮಾತೆಯ ಕುಡಿಗಳೆಂದು ಪಣ ತೊಡಬೇಕೆಂದು ಕವಿಗಳಾದ ನಿಸಾರ್ ಅಹಮದ್ ಆಶಿಸಿದ್ದಾರೆ.  

3) ಕಳಸ, ಶಿಲುಬೆ, ಬಿಳಿಮಿನಾರು ಇವು ಯಾವ ಧರ್ಮದ ಸಂಕೇತಗಳಾಗಿವೆ?
- ಕಳಸ, ಶಿಲುಬೆ ಬಿಳಿಮಿನಾರು ಇವು ಕ್ರಮವಾಗಿ ಹಿಂದೂ, ಕ್ರಿಶ್ಚನ್, ಮುಸ್ಲಿಂ ದರ್ಮಗಳ ಸಂಕೇತಗಳಾಗಿವೆ.              

4) ರಸ ಕವಿತ್ವ ಒಂದೇ ಆದರೂ ಅದರ ರಚನೆಗೆ ಬಳಕೆಯಾಗುತ್ತಿರುವ ಛಂದೋ ಪ್ರಕಾರಗಳು ಯಾವುವು?
- ಕಂದ, ವೃತ್ತ, ತ್ರಿಪದಿ ಮತ್ತು ವಚನಸಾಹಿತ್ಯ ಇವೆಲ್ಲ ಸಾಹಿತ್ಯ ಮತ್ತು ಕಾವ್ಯಗಳ ವಿವಿಧ ಪ್ರಕಾರಗಳಾದರೂ ಅವುಗಳ ರಸ ಕವಿತ್ವ ಒಂದೇ ಆಗಿದೆ.
 
5) ನಿತ್ಯೋತ್ಸವ ಕವಿ ಎಂದೇ ಪ್ರಸಿದ್ಧರಾಗಿರುವ ಕವಿ ಯಾರು?
- ನಿತ್ಯೋತ್ಸವ ಕವಿ ಎಂದೇ ಪ್ರಸಿದ್ಧರಾಗಿರುವ ಕವಿ ಪ್ರೊ. ಕೆ. ಎಸ್. ನಿಸಾರ್ ಅಹಮದ್.                 

ಆ) ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರ ಬರೆಯಿರಿ.
 
1) ಆಂಗ್ಲರು, ಆಫ್ರಿಕನ್ನರಲ್ಲಿ ಹರಿವ ನೆತ್ತರೊಂದೇ ಎಂದು ಕವಿ ಹೇಳಿರುವುದರ ಔಚಿತ್ಯವೇನು?
- ಆಂಗ್ಲ ಜನರ ಮೈಬಣ್ಣ ಕೆಂಪಾಗಿರುತ್ತ್ತದೆ. ಆಫ್ರಿಕನ್ ಜನರ ಮೈಬಣ್ಣ ಕಪ್ಪಾಗಿರುತ್ತದೆ. ಆದರೆ ಅವರವರ ಮೈಯಲ್ಲಿ ಹರಿಯುವ ರಕ್ತದ ಬಣ್ಣ ಕೆಂಪು ಒಂದೇ ಆಗಿರುತ್ತದೆ. ವಿಶ್ವದ ಮಾನವರು ಹೇಗೆ ಕಾಣಿಸಲಿ ಎಲ್ಲೆ ಇರಲಿ ಅವರೆಲ್ಲರೂ ಮಾನವ ಸಮುದಾಯಕ್ಕೆ ಸೇರಿರುವವರು ಎಂದು ಕವಿಗಳು ಹೇಳಿರುವುದು ಔಚಿತ್ಯವೇ ಸರಿ.

2) ಭೌಗೋಳಿಕವಾಗಿ ಭಾರತೀಯರೆಲ್ಲಾ ಒಂದೇ ಎಂದು ನಿಸಾರ್ ಅಹಮದ್ ಅವರು ಹೇಗೆ ನಿರೂಪಿಸಿದ್ದಾರೆ?
- ಭಾರತೀಯರಾದ ನಾವು ಕರ್ನಾಟಕ, ವಂಗ, ಆಂದ್ರ ಪ್ರದೇಶ ಎಲ್ಲಿಯೇ ವಾಸವಾಗಿದ್ದರೂ ಮೂಲತಃ ನಾವೆಲ್ಲರೂ ಬಾರತೀಯರೆ. ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ದಿಕ್ಕುಗಳಲ್ಲಿ ಬೀಸುವ ಗಾಳಿ, ಮೇಲೆ ಕಾಣಿಸುವ ಆಕಾಶ ಎಲ್ಲರಿಗೂ ಒಂದೇ ಎಂದು ಕವಿಗಳು ಭೌಗೋಳಿಕವಾಗಿಯೂ ಭಾರತೀಯರೆಲ್ಲಾ ಒಂದೇ ಎಂದು ನಿರೂಪಿಸಿದ್ದಾರೆ.

3) ಬಣ್ಣ ಬೇರೆಯಾದರೂ, ಜೀವರಸ ಒಂದೇ ಎಂಬ ಭಾವನೆ ಭೂಮಿತಾಯ ಕುಡಿಗಳು ಕವನದಲ್ಲಿ ಹೇಗೆ ವ್ಯಕ್ತವಾಗಿದೆ?
- ಆಂಗ್ಲ, ಆಫ್ರಿಕನ್ರ ಮೈಬಣ್ಣ ವಿಭಿನ್ನವಾದರೂ ಅವರವರಲ್ಲಿ ಹರಿಂರಿಯುವ ರಕ್ತದ ಬಣ್ಣ ಕೆಂಪು ಆಗಿರುತ್ತದೆ. ಅದರಂತೆಯೇ, ಅಕ್ಕಿ, ರಾಗಿ, ಗೋಧಿ, ಜೋಳ ಈ ಎಲ್ಲ ದವಸಧಾನ್ಯಗಳ ಬಣ್ಣ ಬೇರೆ ಬೇರೆಯಾದರೂ ರೈತ ಹೊಲದಲ್ಲಿ ಧಾನ್ಯ ಬೆಳೆಯುವ ಪೈರಿನ ಬಣ್ಣ ಹಸಿರೊಂದೆ ಆಗಿರುತ್ತದೆ. ಹೀಗೆ ಬಣ್ಣ ಬೇರೆಯಾದರೂ, ಜೀವರಸ ಒಂದೇ ಆಗಿರುವುದೆಂದು ಕವಿಗಳು ಈ ಪದ್ಯದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

4) ಬೆಳಕಿನ ಸತ್ವ ಮತ್ತು ರಸಕವಿತ್ವ ಒಂದೇ ಎನ್ನುವುದಕ್ಕೆ ನಿಸಾರ್ ಅಹಮದ್‌ ರವರು ನೀಡಿರುವ ನಿದರ್ಶನಗಳಾವುವು?
- ಬಾಣ, ಬಿರುಸು, ಕುಂಡ, ಹಣತೆ ಇವುಗಳ ಸ್ವರೂಪ ಬೇರೆ ಬೇರೆಯಾದರೂ ಇವುಗಳಲ್ಲಿರುವ ಬೆಳಕಿನ ಸತ್ವ ಒಂದೇ ಆಗಿರುತ್ತದೆ. ಅದರಂತೆಯೇ ಕಂದ, ವೃತ್ತ, ತ್ರಿಪದಿ, ವಚನ ಇವೆಲ್ಲ ಸಾಹಿತ್ಯದ ವಿವಿಧ ಪ್ರಕಾರಗಳಾದರೂ ಇವುಗಳ ಒಳಗಿರುವ ರಸಕವಿತ್ವ ಒಂದೇ ಆಗಿರುವುದು ಎಂದು ಕವಿ ನಿಸಾರ್ ಅಹಮದ್ ಅವರು ಕೆಲವು ನಿದರ್ಶನಗಳನ್ನು ನೀಡಿದ್ದಾರೆ.

ಇ) ಕೆಳಗಿನ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರ ಬರೆಯಿರಿ.
 
1) ಮನುಜ ಜಾತಿ ತಾನೊಂದೆ ವಲಂ ಎಂಬ ಭಾವನೆ ಭೂಮಿ ತಾಯಿ ಕುಡಿಗಳು ಕವನದಲ್ಲಿ ಹೇಗೆ ವ್ಯಕ್ತವಾಗಿದೆ? ವಿವರಿಸಿ.
- ಪ್ರಕೃತಿಯಲ್ಲಿ ವೈವಿಧ್ಯತೆಯಿದ್ದರೂ ಮೂಲತಃ ಏಕತೆ ಇರುವಂತೆ ಭಾರತ ಭೂ ತಾಯಿಯ ಮಕ್ಕಳಾದ ನಾವೆಲ್ಲರೂ ಒಂದೇ. ನಾವು ಒಗ್ಗಟ್ಟಿನಿಂದ ಬಾಳಬೇಕು. ಪ್ರಪಂಚದ ಒಂದೊಂದು ದೇಶಗಳಲ್ಲಿ ಆಚಾರ-ವಿಚಾರ, ರೂಢಿ-ಸಂಪ್ರದಾಯ, ಉಡುಗೆ-ತೊಡುಗೆ, ಭಾಷೆ, ಸಂಸ್ಕೃತಿ, ಆಹಾರ ಮೊದಲಾದವುಗಳಲ್ಲಿ ವಿಭಿನ್ನತೆಗಳಿದ್ದರೂ ವಿಶ್ವ ಮಾನವರಾದ ನಾವೆಲ್ಲರೂ ಒಂದೇ. ನಾಗರಿಕತೆ ಬೆಳೆದಂತೆ, ನಾವೇ ಮಾಡಿಕೊಂಡಿರುವ ಧರ್ಮ, ಭಾಷೆ, ಜಾತಿ, ಜನಾಂಗ, ಸಂಪ್ರದಾಯಗಳು ಬೇರೆ ಬೇರೆಯಾಗಿರಬಹುದು. ಪಂಚಬೂ ತಗಳಾದ ಭೂಮಿ, ಆಕಾಶ, ಅಗ್ನಿ, ನೀರು, ಗಾಳಿ ಎಲ್ಲರಿಗೂ ಒಂದೇ ಆಗಿರುವಾಗ ಭೂಮಿ ತಾಯಿಯ ಮಕ್ಕಳೇ ಆದ ನಾವೆಲ್ಲರೂ ಒಂದಾಗಿರಬೇಕು. ಆದಿಕವಿ ಪಂಪ ಹೇಳಿದಂತೆ ಮನುಜ ಜಾತಿ ತಾನೊಂದೆ ವಲಂ ಎಂಬ ಮಾತಿನಂತೆ ನಾವು ಒಂದಾಗಿ ಬಾಳಬೇಕು ಎಂಬ ಭಾವನೆ ಈ ಕವನದಲ್ಲಿ ಅರ್ಥಪೂರ್ಣವಾಗಿ ವ್ಯಕ್ತವಾಗಿದೆ.

2) ಭೂಮಿ ತಾಯ ಕುಡಿಗಳು ಈ ಕವನದ ಸಾರಾಂಶವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.
- ನಾವು-ನೀವು, ಅವರು-ಇವರು, ಎಲ್ಲರೂ ಒಂದೇ. ಈ ಭಾರತ ಭೂಮಾತೆಯ ವಂಶದ ಕುಡಿಗಳೇ ಆಗಿದ್ದೇವೆ. ನಮ್ಮನಮ್ಮಲ್ಲಿ ಸ್ವಭಾವ, ಚಹರೆ, ಧರ್ಮ, ಜಾತಿ, ಭಾಷೆ ಹೀಗೆಲ್ಲ ವಿಭಿನ್ನತೆಗಳಿದ್ದರೂ, ನಾವೆಲ್ಲರೂ ಬಾ ರತೀಯರೆ. ಜಗತ್ತಿನ ಯಾವುದೇ ದೇಶದ ವ್ಯಕ್ತಿಯಾಗಿರಲಿ ಮೊದಲು ಅವರು ವಿಶ್ವ ಮಾನವರೆನಿಸಿಕೊಳ್ಳುತ್ತಾರೆ. ಆಂಗ್ಲರಿರಲಿ, ಆಪ್ರಿಕ ನ್ನರೇ ಇರಲಿ ಅವರವರಲ್ಲಿ ಹರಿಯುವ ರಕ್ತದ ಬಣ್ಣ ಒಂದೇ ಆಗಿದೆ. ದವಸ ಧಾನ್ಯಗಳ ಬಣ್ಣ ಬೇರೆ ಬೇರೆಯಾದರೂ ಹೊಲದಲ್ಲಿ ಆ ಬೆಳೆಯ ಪೈರಿನ ಬಣ್ಣ ಹಸಿರೊಂದೆ ಆಗಿರುತ್ತದೆ. ಬಾಣ, ಬಿರುಸು, ಕುಂಡ, ಹಣತೆ ಇವೆಲ್ಲ ಕಾಣಲು ಬೇರೆ ಬೇರೆ ಎನಿಸಿದರೂ ಅವುಗಳ ಒಳಗಿನ ಬೆಳಕಿನ ಸತ್ವ ಒಂದೇ ಆಗಿರುವುದು. ಸಾಹಿತ್ಯದ ವಿವಿಧ ರೂಪಗಳಾದ ಕಂದ, ವೃತ್ತ, ತ್ರಿಪದಿ, ವಚನ ಇವೆಲ್ಲವುಗಳ ರಸಕವಿತ್ವ ಒಂದೇಯಾಗಿರುತ್ತದೆ. ಭಾರತವಾಸಿಗಳಾದ ನಾವು ಯಾವುದೇ ರಾಜ್ಯದಲ್ಲಿ ವಾಸಿಸಲಿ ಮೊದಲು ನಾವೆಲ್ಲರೂ ಭಾರತೀಯರೆ. ನಾಲ್ಕು ದಿಕ್ಕುಗಳಲ್ಲಿ ಬೀಸುವ ಗಾಳಿ ಮೇಲೆ ಕಾಣಿಸುವ ಆಕಾಶ ಎಲ್ಲರಿಗೂ ಒಂದೇ ಆಗಿರುವಾಗ ನಾವೆಲ್ಲರೂ ಕೂಡಾ ಒಂದಾಗಿ ಒಗ್ಗಟ್ಟಿನಿಂದ ಬಾಳಬೇಕೆಂದು ಕೆ. ಎಸ್. ನಿಸಾರ್ ಅಹಮದ್ ಅವರು ಹೇಳಿದ್ದಾರೆ.

3) ನಿಸಾರ್ ಅಹಮದ್ರವರು ನಾವೆಲ್ಲರೂ ಭೂಮಿ ತಾಯಿಯ ಕುಡಿಗಳೆಂದು ಏಕೆ ಪಣ ತೊಡಬೇಕೆಂದು ಹೇಳಿದ್ದಾರೆ?
- ಪ್ರಕೃತಿಯಲ್ಲಿ ಅಪಾರ ವೈವಿಧ್ಯ ಇದ್ದರೂ ಒಳಗೆ ಸಾಮರಸ್ಯ ಇರುವಂತೆ ಬಾ ರತ ಬೂ ಮಿತಾಯ ಮಕ್ಕಳಾದ ನಾವೆಲ್ಲರೂ ಒಗ್ಗಟ್ಟಾಗಿರಬೇಕು. ಜಗತ್ತಿನ ವಿವಿಧ ದೇಶಗಳಲ್ಲಿ ಒಂದೊಂದು ರೀತಿಯ ಆಚಾರ-ವಿಚಾರ, ಉಡುಗೆ-ತೊಡುಗೆ, ರೂಢಿ-ಸಂಪ್ರದಾಯ, ಆಹಾರ ಪದ್ಧತಿಗಳನ್ನು ಹೊಂದಿದ್ದರೂ ಮಾನವರಾದ ನಾವೆಲ್ಲರೂ ಒಂದೇ ನಾಗರಿಕತೆ ಬೆಳೆದಂತೆ ನಾವೇ ಮಾಡಿಕೊಂಡಿರುವ ಧರ್ಮ, ಜಾತಿ, ಭಾಷೆ, ಜನಾಂಗ ಮತ್ತು ಸಂಪ್ರದಾಯಗಳು ಬೇರೆ ಬೇರೆಯಾಗಿರಬಹುದು. ಪಂಚಭೂತಗಳಾದ ಬೂಮಿ, ಆಕಾಶ, ಅಗ್ನಿ, ಜಲ, ಗಾಳಿ ಒಂದೇ ಆಗಿರುವಾಗ ಈ ಭೂಮಿತಾಯಿಯ ಮಕ್ಕಳಾದ ನಾವೆಲ್ಲರೂ ಒಂದಾಗಬೇಕು. ಏಕತೆಯ ಬಾ ವನೆಯನ್ನು ಹೊಂದಬೇಕು. ನಾವೆಲ್ಲರೂ ಸರಿಸಮಾನರು ಈ ಭೂಮಿತಾಯಿಯ ಕುಡಿಗಳೆಂದು ಪಣ ತೊಡಬೇಕೆಂದು ಕವಿಗಳಾದ ನಿಸಾರ್ ಅಹಮದ್ ಅವರು ಹೇಳುತ್ತಾರೆ.

ಈ) ಕೆಳಗಿನ ಸಾಲುಗಳ ಸಂದರ್ಭಗಳನ್ನು ಸ್ವಾರಸ್ಯಸಹಿತ ವಿವರಿಸಿ.
 
1) ಭೂಮಿ ತಾಯ ಕುಡಿಗಳೆಂದು ಪಣವ ತೊಡಿರಿ ಇದೆ.
ಪದ್ಯದ ಹೆಸರು: ಭೂಮಿ ತಾಯ ಕುಡಿಗಳು.                                                                             
ಕವಿಗಳ ಹೆಸರು: ಪ್ರೊ. ಕೆ. ಎಸ್. ನಿಸಾರ್ ಅಹಮದ್.                                                                
ಸಂದರ್ಭ: ಕವಿಗಳು ನಮ್ಮನ್ನು ಉದ್ದೇಶಿಸಿ ಮಾತನಾಡುವಾಗ ಈ ವಾತನ್ನು ನುಡಿದಿದ್ದಾರೆ.
ವಿವರಣೆ: ಭಾರತ ದೇಶದಲ್ಲಿ ಹುಟ್ಟಿದವರಾದ ನಾವೆಲ್ಲರೂ ಒಂದೇ. ನಾವೆಲ್ಲರೂ ಈ ಭಾರತ ಭೂಮಾತೆಯ ವಂಶದ ಕುಡಿಗಳೇ ಆಗಿದ್ದೇವೆ ಎಂದು ಇಂದೇ ಪ್ರಮಾಣ ಮಾಡೋಣವೆಂದು ಕವಿಗಳು ಮಾನವ ಸಮುದಾಯಕ್ಕೆ ಕರೆ ನೀಡಿದ್ದಾರೆ.

2) ಸ್ವಸ್ವಭಾವ ಚಹರೆ ಬೇರೆ ತಾಯ ಬಸಿರು ಒಂದೆ.
ಪದ್ಯದ ಹೆಸರು: ಭೂಮಿ ತಾಯ ಕುಡಿಗಳು.                                                                       
ಕವಿಗಳ ಹೆಸರು: ಪ್ರೊ. ಕೆ. ಎಸ್. ನಿಸಾರ್ ಅಹಮದ್.                                                                
ಸಂದರ್ಭ: ನಮ್ಮಲ್ಲಿರುವ ವಿಭಿನ್ನ ಗುಣಲಕ್ಷಣ ಹಾಗೂ ಬಾ ರತಾಂಬೆಯ ಕುರಿತು ಹೇಳುವಾಗ ಕವಿಗಳು ಈ ಮಾತನ್ನು ನುಡಿದಿದ್ದಾರೆ.         
ವಿವರಣೆ: ಭಾರತೀಯರಾದ ನಮ್ಮಲ್ಲಿ ಸ್ವಭಾವಗಳಲ್ಲಿ ಹಾಗೂ ಚಹರೆಗಳಲ್ಲಿ ಭಿನ್ನತೆಗಳು ಕಂಡು ಬಂದರೂ ಮೂಲತಃ ನಾವೆಲ್ಲರೂ ಭಾರತೀಯರೆ. ನಮ್ಮೆಲ್ಲರಿಗೂ ಆಸರೆ ನೀಡುವ ಭೂಮಿ ತಾಯಿಯ ಬಸಿರು ಒಂದೇ ಆಗಿದೆ ಎಂದು ಹೇಳುವಾಗ ಕವಿಗಳು ಈ ಮೇಲಿನ ಮಾತನ್ನು ನುಡಿದಿದ್ದಾರೆ.

3) ಕರ್ನಾಟಕದ ವಂಗ ಆಂಧ್ರ ಭಾರತೀಯರೊಂದೆ
ಪದ್ಯದ ಹೆಸರು: ಭೂಮಿ ತಾಯ ಕುಡಿಗಳು.                                                                                
ಕವಿಗಳ ಹೆಸರು: ಪ್ರೊ. ಕೆ. ಎಸ್. ನಿಸಾರ್ ಅಹಮದ್.                                                                             
ಸಂದರ್ಭ: ಕವಿಗಳು ಈ ಮಾತನ್ನು ನಮ್ಮನ್ನು ಉದ್ದೇಶಿಸಿ ನುಡಿದಿದ್ದಾರೆ.                                                 
ವಿವರಣೆ: ಭಾರತವಾಸಿಗಳಾದ ನಾವು ಯಾವುದೇ ರಾಜ್ಯಕ್ಕೆ ಸೇರಿದವರಾದರೂ ನಾವೆಲ್ಲರೂ ಭಾರತೀಯರೆ. ನಾಲ್ಕು ದಿಕ್ಕುಗಳಲ್ಲಿ ಬೀಸುವ ಗಾಳಿ ಮೇಲೆ ಕಾಣಿಸುವ ಆಕಾಶ ಎಲ್ಲರಿಗೂ ಒಂದೇ ಆಗಿರುವಂತೆ ನಾವೆಲ್ಲರೂ ಕೂಡ ಒಗ್ಗಟ್ಟಾಗಿರಬೇಕು ಎಂದು ಹೇಳುವಾಗ ಕವಿಗಳು ಈ ಮೇಲಿನ ಮಾತನ್ನು ನುಡಿದಿದ್ದಾರೆ.

ಉ) ಗುಂಪಿಗೆ ಸೇರದ ಪದವನ್ನು ಆರಿಸಿ ಬರೆಯಿರಿ.
1) ಕಂದ, ವೃತ್ತ, ಉಪಮಾ, ತ್ರಿಪದಿ = ಉಪಮಾ                    
2) ನಾನು, ನೀನು, ಅವರು, ಒಂದೆ = ಒಂದೆ                                                                                               
3) ಅಕ್ಕಿ, ರಾಗಿ, ಮಾವು, ಗೋದಿ  = ಮಾವು                      
4) ಬಾಣ, ಹಣತೆ, ಕುಂಡ, ಬಿರುಸು = ಹಣತೆ                                                                             
5) ಕಳಸ, ವಚನ, ಶಿಲುಬೆ, ಮಿನಾರ್ = ವಚನ  

*ಭಾಷಾಭ್ಯಾಸ*

ಅ) ಕೆಳಗಿನ ಪದಗಳಿಗೆ ಸಮಾನಾರ್ಥಕ ಪದಗಳನ್ನು ಬರೆಯಿರಿ.
1) ನೆತ್ತರು: ರಕ್ತ : ರುಧಿರ : ರಕುತ                                                                               
2) ಭೂಮಿ : ಇಳೆ; ಧರೆ; ವಸುಂಧರೆ; ಧರಣಿ; ಭುವಿ; ದಾತ್ರಿ; ಭೂಮಿ                                                            
3) ತಾಯಿ: ಜನನಿ; ಮಾತೆ; ಅಂಬೆ; ಅಮ್ಮ                                                                               
4) ಬಸಿರು: ಹೊಟ್ಟೆ; ಉದರ                                                                                     
5) ಮುಗಿಲು: ಆಕಾಶ; ನಭ; ಗಗನ; ಬಾನು; ಆಗಸ; ಅಂಬರ                                                               
6) ಗಾಳಿ: ಪವನ; ವಾಯು; ಹವೆ.

ಆ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ರೂಪವನ್ನು ಬರೆಯಿರಿ.
1) ಧರ್ಮ - ಅಧರ್ಮ,
2) ಕರಿದು - ಬಿಳಿದು,
3) ಬಿಳುಪು - ಕಪ್ಪು,
4) ಹಗಲು - ಇರುಳು,
5) ಬೆಳಕು - ಕತ್ತಲು

ಇ) ಕೆಳಗಿನ ತತ್ಸಮಗಳಿಗೆ ತದ್ಭವ ರೂಪವನ್ನು ಬರೆಯಿರಿ.
1) ವರ್ಣ-ಬಣ್ಣ, 2) ಧರ್ಮ-ದಮ್ಮ, ದರುಮ, 3) ಪ್ರಣತಿ-ಹಣತೆ, 4) ಭೂಮಿ-ಭುವಿ

ಈ) ಕೆಳಗಿನ ಪದಗಳನ್ನು ಬಿಡಿಸಿ ಬರೆದು, ಸಂಧಿಗಳನ್ನು ಹೆಸರಿಸಿ.
1) ಕುಡಿಗಳು + ಎಂದು = ಕುಡಿಗಳೆಂದು (ಲೋಪ ಸಂಧಿ)  
2) ದರ್ಮದ + ಉಸಿರು = ದರ್ಮದುಸಿರು (ಲೋಪ ಸಂಧಿ)      
3) ನೆತ್ತರು + ಒಂದೆ = ನೆತ್ತರೊಂದೆ (ಲೋಪಸಂಧಿ)       
4) ಪೂರ್ವ + ಉತ್ತರ = ಪೂರ್ವೋತ್ತರ (ಗುಣಸಂಧಿ)           
5) ಭಾರತೀಯರು + ಒಂದೆ = ಭಾರತೀಯರೊಂದೆ (ಲೋಪಸಂಧಿ)

ಉ) ಅ ಪಟ್ಟಿಯನ್ನು ಬ ಪಟ್ಟಿಗೆ ಹೊಂದಿಸಿ ಬರೆಯಿರಿ.
       ಅ                      ಬ                                                                                       
1) ಪೂರ್ವ          ಅ) ತೆಂಕಣ                                                                                  
2) ಪಶ್ಚಿಮ          ಆ) ಬಡಗಣ                                                                                
3) ಉತ್ತರ            ಇ) ಜರಗಣ                                                                               
4) ದಕ್ಷಿಣ           ಈ) ಪಡುವಣ                                  
                           ಉ) ಮೂಡಣ         
ಉತ್ತರಗಳು : 1-ಉ, 2-ಈ, 3-ಆ, 4-ಅ.   

ಈ ಕೆಳಗಿನ ಪದ್ಯಭಾಗಗಳನ್ನು ಕಂಠಪಾಠ ಮಾಡಿರಿ. 
ನಾವು ನೀವು ಅವರು ಇವರು                                                                                    
ಒಂದೆ ಒಂದೆ ಒಂದೆ                                                                                           
ಭೂಮಿ ತಾಯ ಕುಡಿಗಳೆಂದು                                                                                     
ಪಣವ ತೊಡಿರಿ ಇಂದೆ                                                                             

ಕರ್ನಾಟಕ ವಂಗ ಆಂಧ್ರ                                                                                                     
ಭಾರತೀಯರೊಂದೆ.                                                                           
ಪೂರ್ವೋತ್ತರ ಪಡು ತೆಂಕಣ                                                                       
ಗಾಳಿ ಮುಗಿಲು ಒಂದೆ

 
                                                                            






                                          
You Might Like

Post a Comment

0 Comments