Recent Posts

ಸೋಮೇಶ್ವರ ಶತಕ - ೮ನೇ ತರಗತಿ ಸಿರಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

 
 
 ಸೋಮೇಶ್ವರ ಶತಕ

ಕೃತಿಕಾರರ ಪರಿಚಯ
 
ಪುಲಿಗೆರೆ ಸೋಮನಾಥ ( ಕ್ರಿ.ಶ. ಸುಮಾರು 1299 ) ಧಾರವಾಡ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಪುಲಿಗೆರೆಯವನು . ಪುಲಿಗೆರೆ ಸೋಮನಾಥನೆಂದೇ ಪ್ರಸಿದ್ಧಿ . ಕನ್ನಡ , ಸಂಸ್ಕೃತ ಭಾಷಾಪಂಡಿತನಾದ ಈತನ ಆಂಕಿತ ಪರಹರಾ ಶ್ರೀ ಚನ್ನಸೋಮೇಶ್ವರಾ . ಕನ್ನಡ ರತ್ನಕರಂಡಕ ಚಂಪೂವಿನಲ್ಲಿಯೂ ಸೋಮೇಶ್ವರ ಶತಕವನ್ನು ವೃತ್ತ ಛಂದಸ್ಸಿನಲ್ಲಿಯೂ ರಚಿಸಿದ್ದಾನೆ . ಪ್ರಕೃತ ಚೌಪದಿಗಳನ್ನು
ಕನ್ನಡ ಸಾಹಿತ್ಯ ಪರಿಷತ್ತು ಸಂಪಾದಿಸಿರುವ ಸೋಮೇಶ್ವರ ಶತಕ ಕೃತಿಯಿಂದ ಆಯ್ಕೆಮಾಡಿ ಕೊಳ್ಳಲಾಗಿದೆ .

ಆಶಯ ಭಾವ
 ಆಶಯ ಭಾವ ಮತ್ತು ಪದ್ಯದ ಸಾರಾಂಶ
ಸಮಾಜದ ಅವಿಭಾಜ್ಯ ಅಂಗವಾದ ತಂದೆ , ತಾಯಿ , ಮಗ , ಪತ್ನಿ , ಗುರುಗಳ ಜವಾಬ್ದಾರಿಗಳನ್ನು , ದ್ವಿಜ ರಾಜ . ಮಂತ್ರಿ , ಭಟ ಮೊದಲಾದವರ ಕರ್ತವ್ಯಗಳನ್ನು ಈ ನೀತಿ ಶತಕದಲ್ಲಿ ಮಾರ್ಮಿಕವಾಗಿ ಹೇಳಲಾಗಿದೆ . ನಿಜವಾದ ಮಂತ್ರಿಗೆ ಇರಬೇಕಾದ ಲಕ್ಷಣ , ದೇವರ ಅನುಗ್ರದಿಂದ ಕಾಲಾನುಕ್ರಮದಲ್ಲಿ ಸ್ವಾಭಾವಿಕವಾಗಿ ಆಗುವ ಬದಲಾವಣೆಗಳ ಬಗ್ಗೆಯೂ ವಿವರಿಸಲಾಗಿದೆ . ಈ ಮೂಲಕ ಪ್ರತಿಯೊಬ್ಬರೂ ತಮ್ಮ ತಮ್ಮ ಜವಾಬ್ದಾರಿಗಳನ್ನರಿತಾಗ ಸುಖಿಸಮಾಜದ ನಿರ್ಮಾಣವಾಗುತ್ತದೆಂಬುದು ಈ ನೀತಿ ಶತಕದ ಆಶಯ
ಹಿತವಂ ತೋರುವನಾತ್ಮಬಂಧು ಪೊರೆವಾತಂ ತಂದೆ ಸದ್ಧರ್ಮದಾ |. ಸತಿಯೇ ಸರ್ವಕೆ ಸಾಧನಂ ಕಲಿಸಿದಾತಂ ವರ್ಣಮಾತ್ರಂ ಗುರು ಶ್ರುತಿಮಾರ್ಗ ೦ ಬಿಡದಾತ ಸುವ್ರತಿ ಮಹಾ ಸದ್ವಿದ್ಯೆಯೇ ಪುಣ್ಯಂ  |
ಸುತನೇ ಸದ್ಗತಿದಾತನೈ ಹರಹರಾ ಶ್ರೀಚೆನ್ನಸೋಮೇಶ್ವರಾ | “ ನಮಗೆ ಒಳ್ಳೆಯದನ್ನು ಮಾಡುವವನೇ ನಂಟನು . ನಮ್ಮನ್ನು ಕಾಪಾಡುವವನೇ ತಂದೆ . ಧರ್ಮಮಾರ್ಗದಲ್ಲಿ ನಡೆವ ಹೆಂಡತಿಯೇ ಸಕಲ ಸುಖಕ್ಕೂ ಸಾಧನ , ಒಂದು ಅಕ್ಷರವನ್ನು ಕಲಿಸಿದವನೂ ಗುರು . ವೇದಮಾರ್ಗವನ್ನು ಬಿಡದೆನಡೆಯುವವನು ಋಷಿ. ಒಳ್ಳೆಯ ವಿದ್ಯೆಯೇ ಪುಣ್ಯವನ್ನು ಕೊಡುವುದು. ಮಗನೇ ಸದ್ಗತಿಗೆ ಕಾರಣನು” ಎಂದು ಪುಲಿಗೆರೆ ಸೋಮನಾಥ ಕವಿಯು ಹೇಳುತ್ತಾನೆ. ಪ್ರಜೆಯಂ ಪಾಲಿಸಬಲ್ಲೊಡಾತನರಸಂ ಕೈಯಾಸೆಯಂ ಮಾಡದಂ | ನಿಜ ಮಂತ್ರೀಶ್ವರ ತಂದೆ ತಾಯ ಸಲಹಲ್ ಬಲ್ಲಾತನೇ ಧಾರ್ಮಿಕಂ || ಭಜಕಂ ದೈವದ ಭಕ್ತಿಯುಳ್ಳೊಡೆ ಭಟಂ ನಿರ್ಭೀತ ತಾನಾದವಂ |
ದ್ವಿಜನಾಚಾರತೆಯುಳ್ಳವಂ ಹರಹರಾ ಶ್ರೀಚೆನ್ನಸೋಮೇಶ್ವರಾ|| “ಪ್ರಜೆಗಳನ್ನು ಚೆನ್ನಾಗಿ ಸಂರಕ್ಷಣೆಯನ್ನು ಮಾಡಬಲ್ಲವನೇ ದೊರೆ. ಲಂಚಕ್ಕೆ ಆಸೆ ಪಡದವನೇ ನಿಜವಾದ ಮಂತ್ರಿ. ತ0ದೆತಾಯಿಗಳನ್ನು ಸಲಹಬಲ್ಲವನೇ ಧರ್ಮಿಷ್ಠ  ದೇವರಲ್ಲಿ ಭಕ್ತಿಯುಳ್ಳವನೇ ಭಕ್ತನು ನಿರ್ಭಯನಾದವನೇ ಯೋಧನು. ಒಳ್ಳೆಯ ನಡೆತೆಯುಳ್ಳವನೇ ಬ್ರಹ್ಮಜ್ಞಾನಿ ” ಎಂದು ಪುಲಿಗೆರೆ ಸೋಮನಾಥ ಕವಿಯು ಹೇಳುತ್ತಾನೆ. ಅತಿ ಗಂಭೀರನುದಾರ ಧೀರನು ಮಹಾ ಸಂಪನ್ನ ಸತ್ಯಾತ್ಮನೂ |
ರ್ಜಿತ ನಾನಾಲಿಪಿಭಾಷೆಯೊಳ್ ಪರಿಚಿತಂ ಲಂಚಕ್ಕೆ ಕೈನೀಡದಂ || ವ್ರತ ಸದ್ಧರ್ಮ ವಿಚಾರಶಾಲಿ ಚತುರೋಪಾಯಂಗಳ ಬಲ್ಲವಂ | ಪತಿಕರ್ಯಂ ವರ ಮಂತ್ರಿಯೈ ಹರಹರಾ ಶ್ರೀಚೆನ್ನಸೋಮೇಶ್ವರಾ ||
“ಬಹಳ ಗಂಭೀರನಾದವನು, ದಾನಶೀಲನಾದವನು, ಧೈರ್ಯಶಾಲಿಯಾದವನು, ಗುಣಶಾಲಿಯಾದವನು, ಸತ್ಯಸಂಧನಾದವನು, ಅನೇಕ ಲಿಪಿಗಳನ್ನು ಭಾಷೆಗಳನ್ನು ಪರಿಚಯ ಮಾಡಿಕೊಂಡಿರುವವನು, ಲಂಚಕ್ಕೆ ಆಸೆಪಡದವನು, ನೇಮಿಷ್ಠನು ಒಳ್ಳೆಯ ಧರ್ಮಿಷ್ಠನು ವಿಚಾರಶಾಲಿಯು, ಚತುರೋಪಾಯಗಳನ್ನು ಬಲವನು, ಸ್ವಾಮಿಕಾರ್ಯದಲ್ಲಿ ಆಸಕ್ತಿವುಳ್ಳವನುಶ್ರೇಷ್ಠನಾದ ಮಂತ್ರಿ” ಎಂದು ಪುಲಿಗೆರೆ ಸೋಮನಾಥ ಕವಿಯು ಹೇಳುತ್ತಾನೆ.
ಉಡುರಾಜಂ ಕಳೆಗುಂದಿ ಪೆರ್ಚದಿಹನೇ ನೃಗ್ರೋಧಬೀಜಂ ಕೆಲಂ | ಸಿಡಿದುಂ ಪೆರ್ಮರನಾಗದೇ ಎಳಗರುಂ ಎತ್ತಾಗದೇ ಲೋಕದೊಳ್ ||ಮಿಡಿ ಪಣ್ಣಾಗದೆ ದೈವನೊಲ್ಮೆಯಿರಲಾ ಕಾಲಾನುಕಾಲಕ್ಕೆ ತಾಂ |
ಬಡವಂ ಬಲ್ಲಿದನಾಗನೇ ಹರಹರಾ ಶ್ರೀಚೆನ್ನಸೋಮೇಶ್ವರಾ || “ಚಂದ್ರನು ಕೃಷ್ಣಪಕ್ಷದಲ್ಲಿ ಕಳೆಗುಂದಿದರೂ ಮತ್ತೆ ಶುಕ್ಲಪಕ್ಷದಲ್ಲಿ ವೃದ್ಧಿಹೊಂದುವುದಿಲ್ಲವೇ? ಬಹಳ ಸಣ್ಣದಾಗಿರುವ ಆಲದ ಬೀಜವು ಸಿಡಿದು, ನೆಲದ ಮೇಲೆ ಬಿದ್ದು, ಮೊಳೆತು ದೊಡ್ಡ ಮರವಾಗುವುದಿಲ್ಲವೇ? ಎಳೆಗರುವು ಬೆಳೆದು ದೊಡ್ಡ ಎತ್ತಾಗುವುದಿಲ್ಲವೇ? ಸಣ್ಣ ಹೀಚು ಬಲಿತು ಹಣ್ಣಾಗುವುದಿಲ್ಲವೇ? ಹಾಗೆಯೇ ದೇವರ ಒಲುಮೆಯಿದ್ದರೆ ಮುಂದೊAದು ದಿನ ಬಡವನು ಬಲ್ಲಿದನಾಗದಿರುವನೇ?” ಎಂದು ಪುಲಿಗೆರೆ ಸೋಮನಾಥ ಕವಿಯು ಹೇಳುತ್ತಾನೆ.

ಪದಗಳ ಅರ್ಥ
ದ್ವಿಜ-ಬ್ರಾಹ್ಮಣ ;    ನೃಗ್ರೋಧ-ಆಲದಮರ;      
  ಪತಿಕರ್ಯ-ಸ್ವಾಮಿಕರ್ಯ, (ಆಸಕ್ತನಾದವನು);      
ಪಾಲಿಸು-ಕಾಪಾಡು, ಸಲಹು;
ಪೆರ್ಚು-ಹೆಚ್ಚು, ವೃದ್ಧಿಸು;         
ಪರ್ಮರ-ದೊಡ್ಡಮರ;      
  ಪೊರೆ-ಕಾಪಾಡು;       
ಬಲ್ಲಿದ-ಬಲಿಷ್ಠ,        
ವ್ರತಿ-ನಿಯಮವುಳ್ಳವನು ; ವ್ರತಿಮುನಿ, ತಪಸ್ವಿ        ;
ಶ್ರುತಿ -ವೇದ;    
ಸಂಪನ್ನ-ಗುಣಶಾಲಿ

ಅ . ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ

.1. ನಿಜವಾದ ಬಂಧು ಯಾರು?
ಉತ್ತರ :
ನಮ್ಮ ಹಿತವನ್ನು ಬಯಸುವವರೆ ನಿಜವಾದ ಬಂಧು.

2.ಧಾರ್ಮಿಕನೆಂದು ಯಾರನ್ನು ಕರೆಯಲಾಗಿದೆ?
ಉತ್ತರ :
ತಂದೆ ತಾಯಿಗಳನ್ನು ಸಲಹಬಲ್ಲವನನ್ನು ಧಾರ್ಮಿಕನೆಂದು ಕರೆಯಲಾಗುವುದು.

3. ರಾಜನಾದವನ ಕರ್ತವ್ಯವೇನು?
ಉತ್ತರ :
ಪ್ರಜೆಗಳನ್ನು ಪಾಲಿಸುವುದು ರಾಜನಾದವನ ಕರ್ತವ್ಯವಾಗಿದೆ.

4. ಆಲದ ಮರದ ಬೀಜ ಸಿಡಿದು ಭೂಮಿಗೆ ಬಿದ್ದು ಏನಾಗುತ್ತದೆ?
ಉತ್ತರ :
ಆಲದ ಮರದ ಬೀಜ ಸಿಡಿದು ಭೂಮಿಗೆ ಬಿದ್ದು ಹೆಮ್ಮರವಾಗುತ್ತದೆ.

5. ಪುಲಿಗೆರೆ ಸೋಮನಾಥನ ಅಂಕಿತನಾಮವೇನು?
ಉತ್ತರ :
ಪುಲಿಗೆರೆ ಸೋಮನಾಥನ ಅಂಕಿತನಾಮ ಹರಹರಾ ಶ್ರೀ ಚನ್ನಸೋಮೇಶ್ವರಾ.

ಆ. ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ

1. ಸುವ್ರತಿ ಹಾಗೂ ಸುತನ ಬಗೆಗೆ ಕವಿ ಏನು ಹೇಳಿದ್ದಾನೆ?
ಉತ್ತರ :
ವೇದಮಾರ್ಗವನ್ನು ಬಿಡದೆ ನಡೆಯುವವನು ಋಷಿ, ವೇದಗಳನ್ನು ಬಿಡದೆ ಪಠಸುತ್ತಾ ಪಾಲನೆ
ಮಾಡುವವನೇ ಸುವ್ರತಿ. ಒಳ್ಳೆಯ ವಿದ್ಯೆಯೇ ಪುಣ್ಯವನ್ನು ಕೊಡುವುದು. ಮಗನೇ ಸದ್ಗತಿಗೆ ಕಾರಣನು
ಎಂದು ಕವಿ ಹೇಳಿದ್ದಾರೆ.

2. ಭಟ ಮತ್ತು ದ್ವಿಜರ ಲಕ್ಷಣಗಳೇನು?
ಉತ್ತರ :
ಧೈರ್ಯವಂತನು, ನಿರ್ಭಯನಾದವನೇ ಯೋಧ( ಭಟ )ನು. ಒಳ್ಳೆಯ ಆಚಾರವನ್ನು,
ನಡೆತೆಯುಳ್ಳವನೇ  ಬ್ರಹ್ಮಜ್ಞಾನಿ( ದ್ವಿಜ ) ಎಂದು ಪುಲಿಗೆರೆ ಸೋಮನಾಥ ಕವಿಯು ಹೇಳುತ್ತಾನೆ.

ಇ. ಕೊಟ್ಟಿರುವ ಪ್ರಶ್ನೆಗಳಿಗೆ ಐದು-ಆರು ವಾಕ್ಯಗಳಲ್ಲಿ ಉತ್ತರಿಸಿ.

1. ಶ್ರೇಷ್ಠ ಮಂತ್ರಿಯಲ್ಲಿರಬೇಕಾದ  ಲಕ್ಷಣಗಳೇನು?
ಉತ್ತರ :
“ಬಹಳ ಗಂಭೀರನಾದವನು, ದಾನಶೀಲ, ಧೈರ್ಯಶಾಲಿ, ಗುಣಶಾಲಿ, ಸತ್ಯಸಂಧನಾದವನು, ಅತೀ ಗಂಭೀರನೂ ಉದಾರನೂ ಧೀರನೂ ಮಹಾ ಸಂಪನ್ನನೂ ಸತ್ಯಾತ್ಮನೂ, ಅನೇಕ ಲಿಪಿ, ಭಾಷೆಗಳನ್ನು ಬಲ್ಲವನೂ, ಲಂಚಕ್ಕೆ ಕೈ ಚಾಚದವನೂ, ವಿಚಾರವಂತನೂ, ಸಾಮ, ದಾನ, ಭೇದ, ದಂಡ, ಎಂಬ ಚತುರೋಪಾಯಗಳನ್ನು ಬಲ್ಲವನೂ ಒಡೆಯನ ಕಾರ್ಯದಲ್ಲಿ ನಿಷ್ಠೆ ಇರುವವನು ಆಗಿರಬೇಕು ಇವು ಶ್ರೇಷ್ಠ ಮಂತ್ರಿಯ ಗುಣಗಳು

2. ಬಡವ ಬಲ್ಲಿದನಾಗುವನು ಎಂಬುದಕ್ಕೆ ಕವಿ ನೀಡಿರುವ ನಿದರ್ಶನಗಳಾವುವು?
ಉತ್ತರ :
ಚಂದ್ರನು ಒಂದೇ ಸಮನಾಗಿರುವುದಿಲ್ಲ ಕೃಷ್ಣಪಕ್ಷದಲ್ಲಿ ಕಳೆಗುಂದಿದರೂ ಮತ್ತೆ ಶುಕ್ಲಪಕ್ಷದಲ್ಲಿ
ವೃದ್ಧಿಹೊಂದುವುದಿಲ್ಲವೇ? ಬಹಳ ಸಣ್ಣದಾಗಿರುವ ಆಲದ ಬೀಜವು ಸಿಡಿದು, ನೆಲದ ಮೇಲೆ ಬಿದ್ದು, ಮೊಳೆತು ದೊಡ್ಡ ಮರವಾಗುವುದಿಲ್ಲವೇ? ಎಳೆಗರುವು ಬೆಳೆದು  ದೊಡ್ಡ ಎತ್ತಾಗುವುದಿಲ್ಲವೇ? ಸಣ್ಣ ಹೀಚು ಬಲಿತು ಹಣ್ಣಾಗುವುದಿಲ್ಲವೇ? ಹಾಗೆಯೇ ದೇವರ ಕೃಪೆ, ಒಲುಮೆಯಿದ್ದರೆ ಮುಂದೊಂದು  ದಿನ ಬಡವನು ಬಲ್ಲಿದನಾಗದಿರುವನೇ?” ಎಂದು ಪುಲಿಗೆರೆ ಸೋಮನಾಥ ಕವಿಯು ಹೇಳುತ್ತಾನೆ.

ಈ. ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.

1. “ಸದ್ಧರ್ಮದಾ ಸತಿಯೇ ಸರ್ವಕೆ ಸಾಧನಂ”
ಆಯ್ಕೆ :
ಈ ವಾಕ್ಯವನ್ನು ಕನ್ನಡ ಸಾಹಿತ್ಯ ಪರಿಷತ್ತು ಸಂಪಾದಿಸಿರುವ ‘ಪುಲಿಗೆರೆ ಸೋಮನಾಥ’ ಅವರು
ಬರೆದಿರುವ ‘ಸೋಮೇಶ್ವರ ಶತಕ’ ಕೃತಿಯಿಂದ ಆಯ್ದ ‘ಸೋಮೇಶ್ವರ ಶತಕ’ ಎಂಬ ಪದ್ಯಭಾಗದಿಂದ
ಆರಿಸಲಾಗಿದೆ.
ಸಂದರ್ಭ  : ಸಮಾಜದ ಅವಿಭಾಜ್ಯ ಅಂಗವಾದ ತಂದೆ, ತಾಯಿ, ಮಗ, ಪತ್ನಿ, ಗುರುಗಳ ಜವಾಬ್ದಾರಿಗಳನ್ನು, ತಿಳಿಸುವ ಸಂದರ್ಭದಲ್ಲಿ ಧರ್ಮ ಮಾರ್ಗದಿಂದ ನಡೆದುಕೊಂಡು ಹೋಗುವ ಹೆಂಡತಿಯೇ ನಮ್ಮ ಎಲ್ಲಾ ಸುಖಕ್ಕೂ ಕಾರಣ ಎಂದು ಕವಿ ಹೇಳಿದ್ದಾರೆ.
ಸ್ವಾರಸ್ಯ : ಗಂಡನ ಯಶಸ್ಸು, ಕೀರ್ತಿ, ಸಂಸಾರದ ಉನ್ನತಿ ಎಲ್ಲಾದಕ್ಕೂ ಸತಿಯೇ ಕಾರಣಳು ಎಂಬುದು
ಸ್ವರಸ್ಯಕರವಾಗಿದೆ

2. “ಅತಿ ಗಂಭೀರನುದಾರ ಧೀರನು”
ಆಯ್ಕೆ :
ಈ ವಾಕ್ಯವನ್ನು ಕನ್ನಡ ಸಾಹಿತ್ಯ ಪರಿಷತ್ತು ಸಂಪಾದಿಸಿರುವ ‘ಪುಲಿಗೆರೆ ಸೋಮನಾಥ’ ಅವರು
ಬರೆದಿರುವ ‘ಸೋಮೇಶ್ವರ ಶತಕ’ ಕೃತಿಯಿಂದ ಆಯ್ದ ‘ಸೋಮೇಶ್ವರ ಶತಕ’ ಎಂಬ ಪದ್ಯಭಾಗದಿಂದ
ಆರಿಸಲಾಗಿದೆ.
ಸಂದರ್ಭ : ಒಳ್ಳೆಯ ಮಂತ್ರಿಯಲ್ಲಿ ಇರಬೇಕಾದ ಗುಣಗಳನ್ನು ತಿಳಿಸುವ ಸಂದರ್ಭದಲ್ಲಿ ಬಹಳ ಗಂಭೀರನು, ದಾನಶೀಲನು, ಧೈರ್ಯಶಾಲಿಯೂ ಆಗಿರಬೇಕು ಎಂದು ಹೇಳಿದ್ದಾರೆ
ಸ್ವಾರಸ್ಯ : ಒಬ್ಬ ಮಂತ್ರಿಗೆ ಒಳ್ಳೆಯ ಗುಣಗಳಿರಬೇಕು. ಧೀರನು, ಉದಾರಿಯೂ , ಪ್ರಾಮಾಣಿಕನೂ ಆಗಿರಬೇಕು ಎಂಬುದು ಸ್ವಾರಸ್ಯಕರವಾಗಿದೆ.

3. “ಉಡುರಾಜ ಕಳೆಗುಂದಿ ಪೆರ್ಚದಿಹನೆ”
ಆಯ್ಕೆ :
ಈ ವಾಕ್ಯವನ್ನು ಕನ್ನಡ ಸಾಹಿತ್ಯ ಪರಿಷತ್ತು ಸಂಪಾದಿಸಿರುವ ‘ಪುಲಿಗೆರೆ ಸೋಮನಾಥ’ ಅವರು
ಬರೆದಿರುವ ‘ಸೋಮೇಶ್ವರ ಶತಕ’ ಕೃತಿಯಿಂದ ಆಯ್ದ ‘ಸೋಮೇಶ್ವರ ಶತಕ’ ಎಂಬ ಪದ್ಯಭಾಗದಿಂದ
ಆರಿಸಲಾಗಿದೆ.
ಸಂದರ್ಭ : ಮನುಷ್ಯನಿಗೆ ಕಷ್ಟನಷ್ಟಗಳು ಬಂದಾಗ ನಿರಾಶಾವಾದಿಯಾಗಬಾರದು. ಯಾವಾಗಲೂ ಆಶಾವಾದಿ ಯಾಗಿರಬೇಕು. ಒಂದು ದಿನ ಎಲ್ಲವೂ ಒಳ್ಳೆಯದು ಆಗುತ್ತದೆ. ಚಂದ್ರನು ಕೃಷ್ಣಪಕ್ಷದಲ್ಲಿ ಕಳೆಗುಂದಿದರೂ ಮತ್ತೆ ಶುಕ್ಲಪಕ್ಷದಲ್ಲಿ ವೃದ್ಧಿಹೊಂದುವುದಿಲ್ಲವೇ? ಎಂದು ಹೇಳುವ ಸಂದರ್ಭದಲ್ಲಿ ಕವಿ ಈ ಮಾತನ್ನು ಹೇಳಿದ್ದಾರೇ
ಸ್ವಾರಸ್ಯ : ದೈವದ ಶಕ್ತಿಯ ಮುಂದೆ ಮನುಷ್ಯನ ಪ್ರಯತ್ನ ಏನು ನಡೆಯುವುದಿಲ್ಲ ಕಾಲ ಕಾಲಕ್ಕೆ ವಿದಿಯ ನಿಯಮದಂತೆ ಎಲ್ಲವೂ ನಡೆಯುತ್ತದೆ. ಇಂದು ಬಡವನಾಗಿರುವ ವ್ಯಕ್ತಿ ಮುಂದೆ ಶ್ರೀಮಂತನಾಗಬಹುದು ಎಂಬುದು ಸ್ವಾರಸ್ಯಕರವಾಗಿದೆ.

ಉ. ಮೊದಲೆರಡು ಪದಗಳಿಗಿರುವ ಸಂಬಂಧಿಸಿದಂತೆ  ಮೂರನೆಯ ಪದಕ್ಕೆ ಸಂಬಂಧಿಸಿದ ಪದ ಬರೆಯಿರಿ.

1. ಮಿಡಿ : ಪಣ್ಣಾಗದೇ : : ಎಳಗರು : ___________
2. ನೃಗ್ರೋಧ : ಆಲದ ಮರ : : ಉಡುರಾಜ : ___________
3. ಭಕ್ತಿಯುಳ್ಳ : ಆಗಮಸಂದಿ : : ಕಳೆಗುಂದು : ___________
4. ಧರ್ಮ : ಅಧರ್ಮ : : ಬಡವ : ___________
5. ಕಾರ್ಯ : ಕಜ್ಜ : : ಭಕ್ತಿ : ___________
 
ಸರಿ ಉತ್ತರಗಳು.
1. ಎತ್ತಾಗದೆ
2.. ಚಂದ್ರ
3. ಆದೇಶ ಸಂಧಿ
4. ಬಲ್ಲಿದ
5. ಬಕುತಿ

ಅಭ್ಯಾಸ ಚಟುವಟಿಕೆ

ಅ. ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ.

1. ಅಲಂಕಾರ ಎಂದರೇನು?
ಉತ್ತರ :
ಕಾವ್ಯದ ಸೌಂರ್ಯವನ್ನು ಹೆಚ್ಚಿಸುವ ಚಮತ್ಕಾರಿಕ ಮಾತುಗಳೇ ಅಲಂಕಾರ.

2. ಉಪಮಾಲಂಕಾರ ಎಂದರೇನು? ನಿದರ್ಶನ ಸಹಿತ ವಿವರಿಸಿ.
ಉತ್ತರ :
ಉಪಮಾ ಎಂದರೆ ಹೋಲಿಕೆ ಎಂದರ್ಥ. ಯಾವ ಅಲಂಕಾರದಲ್ಲಿ ಉಪಮೇಯ
ಉಪಮಾನಗಳೊಳಗೆ ಉಪಮಾ (ಹೋಲಿಕೆ ) ಇರುತ್ತದೆಯೋ ಆ ಅಲಂಕಾರವೇ ಉಪಮಾಲಂಕಾರ.
ಉದಾ : ಮನೋರಮೆಯ ಹಣೆ ಬಾಲಚಂದ್ರನಂತೆ  ಆಕರ್ಷಣೀಯವಾಗಿತ್ತು.
ಉಪಮೇಯ : ಮನೋರಮೆಯ ಹಣೆ
ಉಪಮಾನ : ಬಾಲಚಂದ್ರ
ವಾಚಕಪದ : ಅಂತೆ
ಸಮಾನಧರ್ಮ : ಆಕರ್ಷಣೀಯವಾಗಿತ್ತು
ಅಲಂಕಾರ : ಉಪಮಾಲಂಕಾರ (ಪೂರ್ಣೋಪಮಾಲಂಕಾರ)
ಸಮನ್ವಯ : ಉಪಮೇಯವಾದ ಮನೋರಮೆಯ ಹಣೆ ಉಪಮಾನವಾದ ಬಾಲಚಂದ್ರನಿಗೆ
ಹೋಲಿಸಿರುವುದರಿಂದ ಇದು ಉಪಮಾಲಂಕಾರ.

3. ಪೂರ್ಣೋಪಮಾಲಂಕಾರ ಎಂದರೇನು? ವಿವರಣೆ ನೀಡಿ.
ಉತ್ತರ :
ಪೂರ್ಣೋಪಮಾಲಂಕಾರ : ಯಾವ ಉಪಮಾಲಂಕಾರದಲ್ಲಿ ಉಪಮೇಯ, ಉಪಮಾನ, ವಾಚಕ ಪದ, ಸಮಾನಧರ್ಮ ಎಂಬ ನಾಲ್ಕು ಅಂಶಗಳು ಇರುತ್ತವೆಯೋ ಅದೇ ಪೂರ್ಣೋಪಮಾಲಂಕಾರ

ಅ. ಕೊಟ್ಟಿರುವ ವಾಕ್ಯದಲ್ಲಿರುವ ಅಲಂಕಾರವನ್ನು ಹೆಸರಿಸಿ ಸಮನ್ವಯ ಮಾಡಿ.

1. ಮನೋರಮೆಯ ಮುಖ ಕಮಲದಂತೆ ಅರಳಿತು.
ಉಪಮೇಯ : ಮನೋರಮೆಯ ಮುಖ
ಉಪಮಾನ : ಕಮಲ
ವಾಚಕಪದ : ಅಂತೆ
ಸಮಾನಧರ್ಮ : ಅರಳುವುದು
ಅಲಂಕಾರ : ಉಪಮಾಲಂಕಾರ (ಪೂರ್ಣೋಪಮಾಲಂಕಾರ)
ಸಮನ್ವಯ : ಉಪಮೇಯವಾದ ಮನೋರಮೆಯ ಮುಖ ಉಪಮಾನವಾದ ಕಮಲಕ್ಕೆ
 ಹೋಲಿಸಿರುವುದರಿಂದ ಇದು ಉಪಮಾಲಂಕಾರ.

2. ಗೀಜಗನ ಗೂಡುಗಳು ತೂಗಿನ ತೊಟ್ಟಿಲಿನಂತೆ ತೂಗುತ್ತಿದ್ದವು.
 ಉಪಮೇಯ : ಗೀಜುಗನ ಗೂಡುಗಳು
ಉಪಮಾನ : ತೂಗುವ ತೊಟ್ಟಿಲು
ವಾಚಕಪದ : ಅಂತೆ
ಸಮಾನಧರ್ಮ : ತೂಗುವುದು
ಅಲಂಕಾರ : ಉಪಮಾಲಂಕಾರ (ಪೂರ್ಣೋಪಮಾಲಂಕಾರ)
ಸಮನ್ವಯ : ಉಪಮೇಯವಾದ ಗೀಜುಗನ ಗೂಡುಗಳನ್ನು ಉಪಮಾನವಾದ ತೂಗುವ
ತೊಟ್ಟಿಲಿಗೆಕ್ಕೆ ಹೋಲಿಸಿರುವುದರಿಂದ ಇದು ಉಪಮಾಲಂಕಾರ.

ಆ. ‘ಸೋಮೇಶ್ವರ ಶತಕ’ ಪದ್ಯದಲ್ಲಿ ಬಂದಿರುವ ಪ್ರಾಸ ಯಾವುದು?
ಉತ್ತರ :
‘ಸೋಮೇಶ್ವರ ಶತಕ ’ ಪದ್ಯದಲ್ಲಿ ಆದಿಪ್ರಾಸವಿದೆ..
ಪಠ್ಯಾಧಾರಿತ ಚಟುವಟಿಕೆ
 
ಕೊಟ್ಟಿರುವ ಪದ್ಯಭಾಗವನ್ನು ಕಂಠಪಾಠ ಮಾಡಿ.
ಪ್ರಜೆಯಂ ಪಾಲಿಸಬಲ್ಲೊಡಾತನರಸಂ ಕೈಯಾಸೆಯಂ ಮಾಡದಂ |
ನಿಜ ಮಂತ್ರೀಶ್ವರ ತಂದೆ  ತಾಯ ಸಲಹಲ್ ಬಲ್ಲಾತನೇ ಧಾರ್ಮಿಕಂ ||
ಭಜಕಂ ದೈವದ ಭಕ್ತಿಯುಳ್ಳೊಡೆ ಭಟಂ ನಿರ್ಭೀತ ತಾನಾದವಂ |
ದ್ವಿಜನಾಚಾರತೆಯುಳ್ಳವಂ ಹರಹರಾ ಶ್ರೀಚೆನ್ನಸೋಮೇಶ್ವರಾ||


You Might Like

Post a Comment

0 Comments