Recent Posts

ಹೊನ್ನೆಯ ಮರದ ನೆರಳು - Class 9th Second Language Kannada Textbook Solutions

 ಪದ್ಯ  ೧೪  
ಹೊನ್ನೆಯ ಮರದ ನೆರಳು

ಜನಪದ ಸಾಹಿತ್ಯ

* 'ಹೊನ್ನೆಯ ಮರದ ನೆರಳು' ಭಾಗದಲ್ಲಿನ ತ್ರಿಪದಿಗಳನ್ನು ದೇ.ಜವರೇಗೌಡರವರು ಸಂಪಾದಿಸಿರುವ 'ಜನಪದ ಗೀತಾಂಜಲಿ' ಎಂಬ ಜಾನಪದ ಗೀತೆಗಳ ಸಂಕಲನದಿಂದ ಆರಿಸಲಾಗಿದೆ.

            ಪದಗಳ ಅರ್ಥ 
 
ತವರು - ಹುಟ್ಟಿದ ಮನೆ
ಇಂಗೋಗ್ಲಿ - ಕಡಿಮೆಯಾಗಲಿ; ಬತ್ತಿಹೋಗಲಿ,
ಜಪ - ಮಂತ್ರ ಪಠಣ; ಪ್ರಾರ್ಥನೆ.
ಮಾರುದ್ದ – ಎರಡು ಕೈಗಳನ್ನು ಚಾಚಿದ ಅಳತೆ,
ತಿಟ್ಟು = ದಿಬ್ಬ
ಪಕ್ಕಿ - ಹಕ್ಕಿ, ಪಕ್ಷಿ.
ಮೊಳ - ಮೊಣಕೈಯಿಂದ ಹಸ್ತದ ತುದಿಯಷ್ಟು ದೂರ; ಎರಡು ಗೇಣು.
ತೌರ್ಬಣ್ಣ – ತವರಿನವರು ನೀಡಿದ ಸೀರೆ

   ಪ್ರಶ್ನೆಗಳು 

●    ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. 

1. ಬಡವನ ಮನೆಗೆ ಸಿರಿವಂತಿಕೆ ಯಾವಾಗ ಬರುತ್ತದೆ?

ಉತ್ತರ:- ಭೂಮಿಯಲ್ಲಿ ಬೆಳೆ ಸೊಂಪಾಗಿ ಮಾರುದ್ದ ಬೆಳೆದು, ಮೊಳದುದ್ದ ತೆನೆಯಾಗಿ ನಿಂತಾಗ ಬಡವನ ಮನೆಗೆ ಸಿರಿವಂತಿಕೆ ಬರುತ್ತದೆ.

2, ಚಿಕ್ಕಾಗ ಚೆಲುವ ಯಾರು?
ಉತ್ತರ:- ಚಿಕ್ಕಾಗ ಚೆಲುವ ಚಂದ್ರ

3 ತಾಯಿ ಇಲ್ಲದ ತವರಿಗೆ ಹೋಗುವುದನ್ನು ಜನಪದರು ಯಾವುದಕ್ಕೆ ಹೋಲಿಸಿದ್ದಾರೆ?
ಉತ್ತರ:- ತಾಯಿ ಇಲ್ಲದ ತವರಿಗೆ ಹೋಗುವುದನ್ನು ಜನಪದರು ಬಾಯಾರಿದ ಕರುವೊಂದು ನೀರಿಲ್ಲದೆ ಕೆರೆಗೆ ಬಂದು ನಿರಾಸೆಯಿಂದ ಹಿಂದಿರುಗುವುದಕ್ಕೆ ಹೋಲಿಸಿದ್ದಾರೆ.

4. ಮಕ್ಕಳಾಟ ಸನ್ಯಾಸಿಯ ಜಪವನ್ನು ಏಕೆ ಮರೆಸುತ್ತದೆ?
ಉತ್ತರ:- ಮಕ್ಕಳ ಬಾಲ್ಯದ ಆಟಗಳನ್ನು ನೋಡಿದರೆ, ಸಂಸಾರದ ಬಂಧನವನ್ನು ತ್ಯಜಿಸಿದ ಸನ್ಯಾಸಿಗೂ ಸಹ ಸಂಸಾರದ ಮೇಲೆ ವ್ಯಾಮೋಹ ಉಂಟಾಗಿ ಸನ್ಯಾಸಿಯ ಜಪವನ್ನು ಮರೆಸುತ್ತದೆ.

●    ಕೆಳಗಿನ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.

1. ಜನಪದರು ಭೂಮಿ ತಾಯಿಯನ್ನು ಏನೆಂದು ಬೇಡಿಕೊಳ್ಳುತ್ತಾರೆ?

ಉತ್ತರ:- ಭೂಮಿಯಲ್ಲಿ ಬೆಳೆ ಸೊಂಪಾಗಿ ಮಾರುದ್ದ ಬೆಳೆದು, ಮೊಳದುದ್ದ ತೆನೆಯಾಗಿ ನಿಲ್ಲಲಿ. ಈ ಬೆಳೆಯಿಂದ ಬಡವನ ಮನೆಗೆ ಸಿರಿ ಸಂಪತ್ತು ಬರಲಿ ಹಾಗೂ ಭೂಮಿತಾಯಿ ತನ್ನ ಮಕ್ಕಳ ಹಸಿವನ್ನು ಇಂಗಿಸಲಿ ಎಂದು ಜನಪದರು ಭೂಮಿತಾಯಿಯನ್ನು ಬೇಡಿಕೊಳ್ಳುತ್ತಾರೆ.

2. ಜನಪದರು ಪ್ರಕೃತಿಯನ್ನು ಹೇಗೆ ವರ್ಣಿಸಿದ್ದಾರೆ?
ಉತ್ತರ:- ಭೂಮಿಯಲ್ಲಿ ಹಸಿರಿನಿಂದ ಕೂಡಿದ ಗಿಡ, ಬಳ್ಳಿಗಳನ್ನು ನೋಡಲು ಬಲು ಚೆಂದ. ಗಿಡ-ಮರಗಳಲ್ಲಿ ಮಾವಿನ ಮರದ ಚೆಲುವೆ ಸೊಗಸು, ಹಕ್ಕಿ-ಪಕ್ಷಿಗಳಲ್ಲಿ ಗಿಳಿಯೇ ಬಲು ಸುಂದರ, ಹಾಗೆಯೇ ಆಕಾಶದಲ್ಲಿ ಎಣಿಸಲಾಗದಷ್ಟು ನಕ್ಷತ್ರಗಳಿದ್ದರೂ, ಚಂದ್ರನೇ ಸೊಗಸೆಂದು ಜನಪದರು ಪ್ರಕೃತಿಯನ್ನು ವರ್ಣಿಸಿದ್ದಾರೆ. 

3. ತಾಯಿಲ್ಲದ ತವರನ್ನು ಜನಪದರು ಹೇಗೆ ವರ್ಣಿಸಿದ್ದಾರೆ?
ಉತ್ತರ:- ತಾಯಿಯಿಲ್ಲದ ತವರು ನೀರಿಲ್ಲದ ಕೆರೆ ಇದ್ದಂತೆ, ತಾಯಿಯಿಲ್ಲದ ತವರಿಗೆ ಹೋಗುವುದನ್ನು ಜನಪದರು ಬಾಯಾರಿದ ಕರುವೊಂದು ನೀರು ಇಲ್ಲದ ಕೆರೆಗೆ ಬಂದು ನಿರಾಸೆಯಿಂದ ಹಿಂದಿರುಗಿ ಹೋಗುವುದಕ್ಕೆ ಹೋಲಿಸಿದ್ದಾರೆ. ನೋವು, ಯಾತನೆ ಮುಂತಾದವುಗಳು ತಾಯಿಯಿಲ್ಲದ ತವರಿನಿಂದ ಉಂಟಾಗುತ್ತವೆ ಎಂದು ಜನಪದರು ತಾಯಿಲ್ಲದ ತವರನ್ನು ವರ್ಣಿಸಿದ್ದಾರೆ.

4. ಹೆಣ್ಣು ಮಗಳು ಗಂಡನ ಮನೆಗೆ ಹೇಗೆ ಹೊರಡುತ್ತಾಳೆ?
ಉತ್ತರ:- ಬಾಣಂತನಕ್ಕಾಗಿ ತವರು ಮನೆಗೆ ಬಂದಿದ್ದ ಹೆಣ್ಣುಮಗಳು ಬಾಣಂತನ ಮುಗಿಸಿಕೊಂಡು ತನ್ನ ಗಂಡನ ಮನೆಗೆ ಹೊರಡುವಾಗ ತಲೆಯ ಮೇಲೆ ತೊಟ್ಟಿಲನ್ನು ಹೊತ್ತುಕೊಡು, ತವರು ಮನೆಯ ಸೀರೆಯುಟ್ಟು, ಅಪ್ಪ ಕೊಟ್ಟ ಎಮ್ಮೆಯನ್ನು ಹೊಡೆದುಕೊಂಡು.ದಿಬ್ಬದ ದಾರಿಯಲ್ಲಿ ಸಾಗುತ್ತಾ ತವರಿನ ಕಡೆಗೆ ಮತ್ತೆ ಮತ್ತೆ ನೋಡುತ್ತಾ ಗಂಡನ ಮನೆಗೆ ಹೋಗುತ್ತಾಳೆ.

5. ಮಕ್ಕಳಾಟದ ಮಹಿಮೆಯನ್ನು ಜನಪದರು ವರ್ಣಿಸಿರುವ ರೀತಿಯನ್ನು ತಿಳಿಸಿ
ಉತ್ತರ:- ಮಕ್ಕಳು ಹೊನ್ನೆಯ ಮರದ ನೆರಳಲ್ಲಿ ಆಡುವಾಗ, ಮಕ್ಕಳ ಆಟವನ್ನು ನೋಡಿದ ಸನ್ಯಾಸಿಯು ತಾನು ಮಾಡುವ ಜಪವನ್ನು ಮರೆತಿದ್ದಾನೆ. ಏಕೆಂದರೆ ಮಕ್ಕಳ ಬಾಲ್ಯದ ಆಟಗಳನ್ನು ನೋಡಿದರೆ ಸಂಸಾರದ ಬಂಧನವನ್ನು ತ್ಯಜಿಸಿದ ಸನ್ಯಾಸಿಗೂ ಸಹ ಸಂಸಾರದ ವ್ಯಾಮೋಹ ಮನದಲ್ಲಿ ಮೂಡುತ್ತದೆ ಎಂದು ಜನಪದರು ಮಕ್ಕಳಾಟದ ಮಹಿಮೆಯನ್ನು ವರ್ಣಿಸಿದ್ದಾರೆ.

●    ಕೆಳಗಿನ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ.

1. 'ಹೊನ್ನೆಯ ಮರದ ನೆರಳು' ಜನಪದ ಗೀತೆಯಲ್ಲಿ ತವರು ಹಾಗೂ ಮಕ್ಕಳ ಬಗೆಗೆ ಜನಪದರ ಭಾವನೆಗಳು ಯಾವ ರೀತಿ ವ್ಯಕ್ತವಾಗಿವೆ?

ಉತ್ತರ:- ಜನಪದರು ತಾಯಿಯಿಲ್ಲದ ತವರಿಗೆ ಹೆಣ್ಣು ಮಗಳು ಹೋಗಬಾರದೆಂದು ಹೇಳುತ್ತಾರೆ. ಏಕೆಂದರೆ, ತಾಯಿಯಿಲ್ಲದ ತವರು ನೀರಿಲ್ಲದ ಕೆರೆ ಇದ್ದಂತೆ. ತಾಯಿಯಿಲ್ಲದ ತವರಿಗೆ ಹೋಗುವುದನ್ನು ಜನಪದರು ಬಾಯಾರಿದ ಕರುವೊಂದು ನೀರು ಇಲ್ಲದೆ ಕೆರೆಗೆ ಬಂದು ನಿರಾಸೆಯಿಂದ ಹಿಂದಿರುಗಿ ಹೋಗುವುದಕ್ಕೆ ಹೋಲಿಸಿದ್ದಾರೆ. ನೋವು, ಯಾತನೆ ಮುಂತಾದವುಗಳು ತಾಯಿಯಿಲ್ಲದೆ ತವರಿನಿಂದ ಉಂಟಾಗುತ್ತವೆ ಎಂದು ಜನಪದರು ತಾಯಿಲ್ಲದ ತವರನ್ನು ವರ್ಣಿಸಿದ್ದಾರೆ. ಮಕ್ಕಳು ಹೊನ್ನೆಯ ಮರದ ನೆರಳಲ್ಲಿ ಆಡುವಾಗ, ಮಕ್ಕಳ ಆಟವನ್ನು ನೋಡಿದ ಸನ್ಯಾಸಿಯು ತಾನು ಮಾಡುವ ಜಪವನ್ನು ಮರೆತಿದ್ದಾನೆ. ಏಕೆಂದರೆ ಮಕ್ಕಳ ಬಾಲ್ಯದ ಆಟಗಳನ್ನು ನೋಡಿದರೆ ಸಂಸಾರದ ಬಂಧನವನ್ನು ತ್ಯಜಿಸಿದ ಸನ್ಯಾಸಿಗೂ ಸಹ ಸಂಸಾರದ ವ್ಯಾಮೋಹ ಮನದಲ್ಲಿ ಮೂಡುತ್ತದೆ ಎಂದು ಜನಪದರು ಮಕ್ಕಳಾಟದ ಮಹಿಮೆಯನ್ನು ವರ್ಣಿಸಿದ್ದಾರೆ.

●    ಈ ಸಂದರ್ಭದೊಡನೆ ವಿವರಿಸಿ.

1. ಬಡವನ ಮನೆಗೆ ಸಿರಿ ಬರಲಿ
ಆಯ್ಕೆ:-
ಈ ವಾಕ್ಯವನ್ನು "ದೇ.ಜವರೇಗೌಡರವರು" ಸಂಪಾದಿಸಿರುವ 'ಜನಪದ ಗೀತಾಂಜಲಿ 'ಎಂಬ ಕೃತಿಯಿಂದ ಆಯ್ದ "ಹೊನ್ನೆಯ ಮರದ ನೆರಳು" ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ:- ಈ ಮಾತನ್ನು ಜನಪದರು ಹೇಳಿದ್ದಾರೆ.
ಸ್ವಾರಸ್ಯ:- ಭೂಮಿಯಲ್ಲಿ ಬೆಳೆ ಸೊಂಪಾಗಿ ಮಾರುದ್ದ ಬೆಳೆದು, ಮೊಳದುದ್ದ ತೆನೆಯಾಗಿ ನಿಲ್ಲಲಿ, ಈ ಬೆಳೆಯಿಂದ ಬಡವನ ಮನೆಗೆ ಸಿರಿ ಸಂಪತ್ತು ಬರಲಿ ಹಾಗೂ ಭೂಮಿತಾಯಿ ತನ್ನ ಮಕ್ಕಳ ಹಸಿವನ್ನು ಇಂಗಿಸಲಿ ಎಂದು ಜನಪದರು ಭೂಮಿತಾಯಿಯನ್ನು ಬೇಡಿಕೊಳ್ಳುತ್ತಾರೆ. 

2. ತಾಯಿಲ್ದ ತವರೀಗಿ ಹೋಗದಿರು
ಆಯ್ಕೆ:-
ಈ ವಾಕ್ಯವನ್ನು "ದೇ.ಜವರೇಗೌಡರವರು" ಸಂಪಾದಿಸಿರುವ 'ಜನಪದ ಗೀತಾಂಜಲಿ 'ಎಂಬ ಕೃತಿಯಿಂದ ಆಯ್ದ"ಹೊನ್ನೆಯ ಮರದ ನೆರಳು" ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ:- ಈ ಮಾತನ್ನು ಜನಪದರು ಹೇಳಿದ್ದಾರೆ.
ಸ್ವಾರಸ್ಯ:- ತಾಯಿಯಿಲ್ಲದ ತವರು ನೀರಿಲ್ಲದ ಕೆರೆ ಇದ್ದಂತೆ, ನೋವು, ಯಾತನೆ ಮುಂತಾದವುಗಳು ತಾಯಿಯಿಲ್ಲದ ತವರಿನಿಂದ ಉಂಟಾಗುತ್ತವೆ ಎಂದು ಹೇಳುವಾಗ ಈ ಮೇಲಿನ ಮಾತು ವ್ಯಕ್ತವಾಗಿದೆ.

3. ತಿಟ್ಟಿತ್ತಿ ತಿರುಗಿ ನೋಡ್ಯಾಳ
ಆಯ್ಕೆ:-
ಈ ವಾಕ್ಯವನ್ನು "ದೇ.ಜವರೇಗೌಡರವರು" ಸಂಪಾದಿಸಿರುವ 'ಜನಪದ ಗೀತಾಂಜಲಿ 'ಎಂಬ ಕೃತಿಯಿಂದ ಆಯ್ದ"ಹೊನ್ನೆಯ ಮರದ ನೆರಳು" ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ:- ಈ ಮಾತನ್ನು ಜನಪದರು ಹೇಳಿದ್ದಾರೆ.
ಸ್ವಾರಸ್ಯ:- ಬಾಣಂತನಕ್ಕಾಗಿ ತವರು ಮನೆಗೆ ಬಂದಿದ್ದ ಹೆಣ್ಣುಮಗಳು ಬಾಣಂತನ ಮುಗಿಸಿಕೊಂಡು ತನ್ನ ಗಂಡನ ಮನೆಗೆ ಹೊರಡುವಾಗ ತಲೆಯ ಮೇಲೆ ತೊಟ್ಟಿಲನ್ನು ಹೊತ್ತುಕೊಡು ತವರು ಮನೆಯ ಸೀರೆಯುಟ್ಟು, ಅಪ್ಪ ಕೊಟ್ಟ ಎಮ್ಮೆಯನ್ನು ಹೊಡೆದುಕೊಂಡು ಹೋಗುವಾಗ ಈ ಮಾತು ಬಂದಿದೆ.

4. ಸನ್ನೇಸಿ ಜಪವ ಮರೆತಾನು
ಆಯ್ಕೆ:-
ಈ ವಾಕ್ಯವನ್ನು "ದೇ.ಜವರೇಗೌಡರವರು" ಸಂಪಾದಿಸಿರುವ 'ಜನಪದ ಗೀತಾಂಜಲಿ 'ಎಂಬ ಕೃತಿಯಿಂದ ಆಯ್ದ"ಹೊನ್ನೆಯ ಮರದ ನೆರಳು" ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ:- ಈ ಮಾತನ್ನು ಜನಪದರು ಹೇಳಿದ್ದಾರೆ.
ಸ್ವಾರಸ್ಯ:- ಮಕ್ಕಳ ಬಾಲ್ಯದ ಆಟಗಳನ್ನು ನೋಡಿದರೆ ಸಂಸಾರದ ಬಂಧನವನ್ನು ತ್ಯಜಿಸಿದ ಸನ್ಯಾಸಿಗೂ ಸಹ ಸಂಸಾರದ ವ್ಯಾಮೋಹ ಮನದಲ್ಲಿ ಮೂಡುತ್ತದೆ ಎಂದು ಜನಪದರು ಮಕ್ಕಳಾಟದ ಮಹಿಮೆಯನ್ನು ವರ್ಣಿಸುವಾಗ ಈ ಮೇಲಿನ ಮಾತು ಬಂದಿದೆ.

    ಭಾಷಾಭ್ಯಾಸ 

ಅ) ಕೆಳಗಿನ ಪದಗಳಿಗೆ ವಿರುದ್ಧಾರ್ಥ ಬರೆಯಿರಿ.

ಬಡವ X ಶ್ರೀಮಂತ
ದುಃಖ X ಸುಖ
ಚೆಲುವX ಕುರೂಪ
ನೆಲ X ಮುಗಿಲು
ನೆರಳು X ಬಿಸಿಲು

ಆ) 'ತನ' ಹಾಗೂ 'ವಂತ' ಪ್ರತ್ಯಯಗಳನ್ನು ಬಳಸಿ ಮಾದರಿಯಂತೆ ತಲಾ ಐದು ಪದಗಳನ್ನು ಬರೆಯಿರಿ.
ಮಾದರಿ:

ಸಿರಿ + ತನ = ಸಿರಿತನ
ಬಡ + ತನ = ಬಡತನ
ಸಿರಿ + ವಂತ = ಸಿರಿವಂತ
ಹಣ + ವಂತ = ಹಣವಂತ
ಹಿರಿ + ತನ = ಹಿರಿತನ
ಜಾಣ - ತನ = ಜಾಣತನ
ಗುಣ – ವಂತ = ಗುಣವಂತ
ಧನ + ವಂತ = ಧನವಂತ
ಒಕ್ಕಲು+ ತನ = ಒಕ್ಕಲುತನ
ಗೆಳೆ - ತನ = ಗೆಳೆತನ
ಬುದ್ಧಿ + ವಂತ = ಬುದ್ಧಿವಂತ
ಐಶ್ವರ್ಯ + ವಂತ = ಐಶ್ವರ್ಯವಂತ

ಇ) ಆಡುನುಡಿ ಮತ್ತು ಗ್ರಾಂಥಿಕ ರೂಪ ಇವುಗಳ ನಡುವಿನ ವ್ಯತ್ಯಾಸ ತಿಳಿಯಿರಿ.
 
ಉದಾಹರಣೆಗಳು:
ಆಡುನುಡಿ - ಗ್ರಾಂಥಿಕ ರೂಪ
ತುಂಬೈತಿ – ತುಂಬಿದೆ.
ನೀರಿಲ್ಲ - ನೀರಿಲ್ಲದ
ಕಂದವ್ವ - ಕಂದವ್ವನ
ತಾಯಿಲ್ಲ - ತಾಯಿಯಿಲ್ಲದ
ತಿಟ್ಟತ್ತಿ - ತಿಟ್ಟು ಹತ್ತಿ
ಚಿಕ್ಕಾಗ - ಚಿಕ್ಕಿಯಲ್ಲಿ, ಚಿಕ್ಕಿಗಳಲ್ಲಿ
ಗೂಡಿನ್ಯಾಗ – ಗೂಡಿನಲ್ಲಿ
ಬ್ಯಾಡ - ಬೇಡ
ಏಸೊಂದು - ಎಷ್ಟೊಂದು
ಬಾನೆ – ಬರುತ್ತಾನೆ
ಕುತ್ಕೊ - ಕುಳಿತುಕೊ
ನೋಡ್ಕೊಂಡು - ನೋಡಿಕೊಂಡು
ತಲೇಲಿ - ತಲೆಯಲ್ಲಿ
ಪಕ್ಕಾಗ - ಪಕ್ಕೆಯಲ್ಲಿ, ಪಕ್ಕೆಗಳಲ್ಲಿ
ಐತಿ (ಐತೆ) -ಇದೆ
ಸನ್ನೇ ಸಿ - ಸನ್ಯಾಸಿ
ಬಿಡುತೀನಿ - ಬಿಡುತ್ತೇನೆ
ಮ್ಯಾಲಿನ - ಮೇಲಿನ
ತಕ್ಕೊಂಡು – ತೆಗೆದುಕೊಂಡು
ಆಯ್ತು - ಆಯಿತು
ಆಡ್ತಾ - ಆಡುತ್ತಾ
ಕುಂದ್ರು - ಕುಳಿತುಕೊ
ಕೂಡು - ಕುಳಿತುಕೊ

You Might Like

Post a Comment

0 Comments