Recent Posts

ಜ್ಯೋತಿಯೇ ಆಗು ಜಗಕೆಲ್ಲ - ೦೮ ನೇ ತರಗತಿ ತಿಳಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು


ಜ್ಯೋತಿಯೇ ಆಗು ಜಗಕೆಲ್ಲ  
 - ಜನಪದಗೀತೆ 

ಕೃತಿಕಾರರ ಪರಿಚಯ :
?  ನಿರಕ್ಷರಸ್ಥರಾದ ಗ್ರಾಮೀಣ ಜನರು ತಮ್ಮ ಜೀವನಾನುಭವಗಳನ್ನು ಸಹಜವಾಗಿಯೇ ಅಭಿವ್ಯಕ್ತಿಸುವ ಜನಪದ ಸಾಹಿತ್ಯ ಕಂಠಸ್ಥ ಸಂಪ್ರದಾಯದಲ್ಲಿ ಬೆಳೆದುಬಂದಿದೆ. ಶುದ್ಧ ದೇಸೀಯ ಸೊಗಡನ್ನು ಹೊಂದಿರುವ ಜನಪದ ಗೀತೆಗಳು ಸತ್ವಯುತವಾಗಿದ್ದು ವಿವೇಕವನ್ನು ಹೇಳುವ ನೀತಿ ವಾಕ್ಯಗಳಾಗಿವೆ.
?  ಪ್ರಕೃತ ತ್ರಿಪದಿಗಳನ್ನು ದೇ. ಜವರೇಗೌಡ ಸಂಪಾದಿಸಿರುವ ಜನಪದ ಗೀತಾಂಜಲಿ ಹಾಗೂ ಹಲಸಂಗಿ ಗೆಳೆಯರು ಸಂಪಾದಿಸಿರುವ ಗರತಿಯ ಹಾಡು ಸಂಕಲನಗಳಿಂದ ಆಯ್ಕೆಮಾಡಿಕೊಳ್ಳಲಾಗಿದೆ.

ಅಭ್ಯಾಸ

1. ಪದಗಳ ಅರ್ಥ ತಿಳಿಯಿರಿ :
ಅಡವಿ - ಕಾಡು; ಅರಣ್ಯ.                             
ಅರಸ - ರಾಜ; ಶ್ರೇಷ್ಠ.
ಆಚಾರ - ಒಳ್ಳೆಯ ನಡತೆ; ಸಂಪ್ರದಾಯ.                  
ಇಟ್ಟು (ಕ್ರಿ) - ಇಡುವುದು; ಊಟಕ್ಕೆ ನೀಡಿ.
ಕುದಿ (ಕ್ರಿ) - ಸಂಕಟಪಡು; ಕೋಪದಿಂದ ಕೆರಳು.             
ಕೈಲಾಸ - ಶಿವನ ನೆಲೆ
ಚೂಡಾಮಣಿ - ರತ್ನದ ಆಭರಣ; ಶ್ರೇಷ್ಠವಾದುದು.            
ಜ್ಯೋತಿ - ಬೆಳಕು; ದೀಪ.
ಪ್ರಭು - ರಾಜ; ಯಜಮಾನ; ಒಡೆಯ.                    
ಬಂಗಾರ - ಚಿನ್ನ; ಹೇಮ; ಕನಕ.
ಭಾವ - ಸಹೋದರಿಯ ಗಂಡ                         
ಮದ್ದಿನ - ಮಧ್ಯಾಹ್ನ; ನಡು ಹಗಲು.
ಸಂಸಾರ - ಕುಟುಂಬ; ಲೌಕಿಕ ಜೀವನ                     
ರೊಕ್ಕ - ಹಣ; ರೂಪಾಯಿ.
ಹೊರಳು (ಕ್ರಿ) - ಉರುಳು; ಬದಲಾಗು; ಬಾಗು.              
ಸಾಗರ - ಸಮುದ್ರ ; ಕಡಲು.                        
ಹಂಗಿಸು (ಕ್ರಿ) - ಹೀಯಾಳಿಸು; ವ್ಯಂಗ್ಯಮಾಡು.               
ಹೊತ್ತು - ಸಮಯ; ಕಾಲ.
ಹಡೆದವ್ವ - ಜನ್ಮ ನೀಡಿದ ತಾಯಿ.                      
ಸಾಂರಾಜ್ಯ - ಸಾಮ್ರಾಜ್ಯ; ರಾಜನ ಆಡಳಿತಕ್ಕೆ ಒಳಪಟ್ಟ ವಿಸ್ತಾರವಾದ ರಾಜ್ಯ.
ಸಂತೆ - ನಿಯಮಿತ ಸ್ಥಳ ಹಾಗೂ ದಿನದಲ್ಲಿ ಕೊಂಡುಕೊಳ್ಳುವುದಕ್ಕೆ ಜನ ಸೇರುವುದು.

ಪ್ರಶ್ನೆಗಳು :

ಅ) ಕೆಳಗೆ ನೀಡಿರುವ ಅ ಪಟ್ಟಿಯೊಂದಿಗೆ ಬ ಪಟ್ಟಿಯನ್ನು ಹೊಂದಿಸಿ ಬರೆದಿದೆ.
ಅ ಪಟ್ಟಿ                   ಬ ಪಟ್ಟಿ
1) ಅಕ್ಕ                    ಈ) ಭಾವ
2) ಮಕ್ಕಳು               ಉ) ಮನೆಮಾರು
3) ರೊಕ್ಕ                  ಆ) ಸಂತೆ   
4) ಸಂಸಾರ               ಅ) ಸಾಗರ    

ಆ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

1. ತಾಯಿ ತನ್ನ ಮಗನು ಯಾವ ಗುಣಗಳಿಗೆ ಒಡೆಯನಾಗಬೇಕೆಂದು ಬಯಸುತ್ತಾಳೆ?
ತಾಯಿ ತನ್ನ ಮಗನು ಆಚಾರಕ್ಕೆ, ನೀತಿಗೆ, ಮಾತಿಗೆ, ಜಗತ್ತಿಗೆ, ಒಡೆಯನಾಗಬೇಕೆಂದು ಬಯಸುತ್ತಾಳೆ.

2. ಜನಪದರು ಸಂಸಾರವನ್ನು ಯಾವುದಕ್ಕೆ ಹೋಲಿಸಿದ್ದಾರೆ?
ಜನಪದರು ಸಂಸಾರವನ್ನು ಸಾಗರಕ್ಕೆ ಹೋಲಿಸಿದ್ದಾರೆ.

3. ಈಸಬಲ್ಲವನಿಗೆ ಸಂಸಾರವೆಂಬ ಸಾಗರ ಹೇಗೆ ಕಾಣಿಸುತ್ತದೆ?
ಈಸಬಲ್ಲವನಿಗೆ ಸಂಸಾರವೆಂಬ ಸಾಗರ ಹೊಳೆಯಂತೆ ಕಾಣಿಸುತ್ತದೆ.

4. ಸಂಸಾರವೆಂಬ ಸಾಗರದಲ್ಲಿ ಈಸುವುದು ಎಂದರೇನು?
ಸಂಸಾರದಲ್ಲಿ ಎಷ್ಟೇ ನೋವು ದುಃಖಗಳಿದ್ದರೂ ಈಸಿ ಜಯಿಸಬೇಕು ಎಂಬುದು ಇದರ  ಅರ್ಥ.

5. ಜನಪದರ ಪ್ರಕಾರ ಜನರೆಲ್ಲ ನೆಂಟರಾಗುವುದು ಯಾವಾಗ?
ಜನಪದರ ಪ್ರಕಾರ ಉಂಡಾಗ, ಉಡುವಾಗ ಜನರೆಲ್ಲ ನೆಂಟರಾಗುವರು.  

ಇ) ಕೆಳಗಿನ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.

1. ತಾಯಿ ತನ್ನ ಮಗು ಯಾವ ಗುಣಗಳಿಂದ ಜಗಕ್ಕೆ ಜ್ಯೋತಿಯಾಗಬೇಕೆಂದು ಬಯಸುತ್ತಾಳೆ?
ತಾಯಿ ತನ್ನ ಮಗ ಆಚಾರಕ್ಕೆ ಅರಸನೂ, ನೀತಿಗೆ ಪ್ರಭುವಾಗಿ, ಮಾತಿನಲ್ಲಿ ಚೂಡಾಮಣಿಯಾಗಿ, ಜ್ಯೋತಿಯೇ ಆಗಬೇಕು ಜಗಕ್ಕೆಲ್ಲ ಎಂದು ಬಯಸುತ್ತಾಳೆ.

2. ತಾಯಿ ತನ್ನ ಮಗುವಿನಲ್ಲಿ ಒಳ್ಳೆಯ ಗುಣಗಳು ಇರಬೇಕೆಂದು ಏಕೆ ಬಯಸುತ್ತಾಳೆ?
ಮಗುವು ಮಾನವೀಯ ಮೌಲ್ಯಗಳಿಂದ ಕೂಡಿದ ಬದುಕನ್ನು ಸಮಾಜದಲ್ಲಿ ನಡೆಸಬೇಕಾದರೆ ತನ್ನ ಮಗನಿಗೆ ಗೌರವಾದಾರಗಳು ದೊರೆಯಬೇಕಾದರೆ ಎಲ್ಲರ ತಾಯಿಯಂತೆ ತನ್ನ ಮಗನು ಶ್ರೇಷ್ಠನೆನಿಸಿಕೊಳ್ಳಬೇಕಾದರೆ ಮಗುವಿನಲ್ಲಿ ಒಳ್ಳೆಯ ಗುಣಗಳು ಇರಬೇಕೆಂದು ಬಯಸುತ್ತಾಳೆ.

3. ಜನಪದರು ಸಂಸಾರವನ್ನು ಸಾಗರಕ್ಕೆ ಏಕೆ ಹೋಲಿಸಿದ್ದಾರೆ?
ಸಂಸಾರವು ಸಾಗರದಂತೆ ಇಲ್ಲಿ ಉಂಟಾಗುವ ಅಲೆಗಳ ರೌದ್ರ ನರ್ತನ ಕಷ್ಟ ದುಃಖಗಳಿಗೆ ಸಮಾನವಾದುದು. ಯಾರಲ್ಲಿ ಎಲ್ಲವನ್ನು ಎದುರಿಸುವ ಧೈರ್ಯ, ಸ್ವಾಭಿಮಾನ, ಆತ್ಮವಿಶ್ವಾಸವಿರುವುದೊ ಅವರು ಈ ಸಂಸಾರವೆಂಬ ಸಾಗರದಲ್ಲಿ ಈಜಿ ದಡ ಸೇರುತ್ತಾರೆ ಎಂದು ಜನಪದರು ಹೇಳಿದ್ದಾರೆ.

4. ಓದಿನ ಮಹತ್ವವನ್ನು ಜನಪದರು ಯಾವ ರೀತಿ ತಿಳಿಸಿದ್ದಾರೆ?
ಜನಪದರು ಓದಿಗೆ ಹೆಚ್ಚಿನ ಮಹತ್ವವನ್ನು ನೀಡಿದ್ದಾರೆ. ಓದುವುದರಿಂದ ಮಾತ್ರ ಅವನು ಜ್ಞಾನಿಯಾಗಬಲ್ಲ. ಕಷ್ಟಪಟ್ಟವನಿಗೆ ಸುಖ ಸಿಗುವಂತೆ ಓದಿದವನಿಗೆ ಮಾತ್ರ ಕೈಲಾಸದ ಸ್ವರ್ಗಸುಖ ಸಿಗಲು ಸಾಧ್ಯ ಎಂದು ತಿಳಿಸಿದ್ದಾರೆ.

5. ಬಂಗಾರದ ಬಳೆತೊಟ್ಟು ಬೈಬೇಡ ಬಡವರ- ಎನ್ನುವ ಮಾತಿನಲ್ಲಿ ಜನಪದರ ಯಾವ ಭಾವನೆಗಳಿವೆ?
ನಮ್ಮ ಜೀವನದಲ್ಲಿ ಸಿಗುವ ಶ್ರೀಮಂತಿಕೆ ಅಲ್ಪಕಾಲದ್ದಾಗಿರುತ್ತದೆ. ಅದು ನೀರಿನ ಮೇಲೆ ಇರುವ ಗುಳ್ಳೆಯಂತೆ ಇರುತ್ತದೆ. ಇದನ್ನು ಅರ್ಥಮಾಡಿಕೊಳ್ಳದ ಶಿವಕೊಟ್ಟ ಸಂಪತ್ತನ್ನು ದರ್ಪ ತೋರುವ ಸಲುವಾಗಿ ಕೈಯಲ್ಲಿ ಬಂಗಾರದ ಬಳೆ ತೊಟ್ಟು, ಬಡವರ ಶೋಷಣೆ ಮಾಡುವುದು ಸರಿಯಲ್ಲ. ಏಕೆಂದರೆ ಶ್ರೀಮಂತಿಕೆ ಸ್ಥಿರವಾದುದಲ್ಲ ಎಂಬ ಭಾವನೆ ಜನಪದರಲ್ಲಿದೆ.

6. ಶ್ರೀಮಂತಿಕೆಯ ದರ್ಪವನ್ನು ಬಡವರ ಮೇಲೆ ಏಕೆ ತೋರಬಾರದು?
ದೇವರ ಸೃಷ್ಟಿಯಲ್ಲಿ ಎಲ್ಲರೂ ಸಮಾನರು, ಯಾರೂ ದೊಡ್ಡವರಲ್ಲ, ಯಾರೂ ಚಿಕ್ಕವರಲ್ಲ. ಸಿರಿತನ ಬಂದಾಗ ಇರುವವರು ಇಲ್ಲದವರಿಗೆ ದಾನ, ಧರ್ಮ ಮಾಡಿ ಬದುಕುವುದೇ ನಿಜವಾದ ಜೀವನ. ಇದನ್ನು ಬಿಟ್ಟು ಬಡವರ ಮೇಲೆ ದರ್ಪ ತೋರಿದರೆ ಅದು ಎಂದಿಗೂ ಒಳ್ಳೆಯ ಫಲ ನೀಡುವುದಿಲ್ಲ. ಆದ್ದರಿಂದ ಶ್ರೀಮಂತಿಕೆಯ ದರ್ಪವನ್ನು ಬಡವರ ಮೇಲೆ ತೋರಬಾರದು.

7. ನಮ್ಮ ಯಾವ ವರ್ತನೆಗಳು ಶಿವನಿಗೆ ಒಪ್ಪಿಗೆಯಾಗುವುದಿಲ್ಲ ಎಂಬುದು ಜನಪದರ ಅಭಿಪ್ರಾಯವಾಗಿದೆ?
ಇನ್ನೊಬ್ಬರಿಗೆ ಕೊಟ್ಟು ಸಂಕಟಪಡುವುದು, ಇಟ್ಟು ಹಂಗಿಸುವುದು, ಎಷ್ಟೊಂದು ತಿಂದರೆನ್ನುವ ಈ ಮೂರು ಶಿವನಿಗೆ ಒಪ್ಪಿಗೆಯಾಗುವುದಿಲ್ಲ ಎಂಬುದು ಜನಪದರ ಅಭಿಪ್ರಾಯವಾಗಿದೆ.

8. ಭಾವ, ಸಂತೆ ಹಾಗೂ ಮನೆ ಇವುಗಳ ಇರುವಿಕೆ ಸಾಧ್ಯವಾಗುವುದು ಯಾವಾಗ?
ಮನೆಯಲ್ಲಿ ಅಕ್ಕ ಇದ್ದರೆ ಭಾವ ಆಕೆಯನ್ನು ವಿವಾಹವಾಗಿ ಹೊಸ ಸಂಬಂಧ ಬೆಳೆಯುವಂತೆ, ಕೈಯಲ್ಲಿ ಹಣವಿದ್ದರಷ್ಟೇ ಸಂತೆಯಲ್ಲಿ ಎಲ್ಲ ವಸ್ತುಗಳ ಪರಿಚಯವಾಗುವಂತೆ ಒಂದು ಮನೆ ಮನೆಯೆಂದು ತಿಳಿಯಬೇಕಾದರೆ ಅಲ್ಲಿ ಮಕ್ಕಳಿರುವಂತೆ, ನಮಗೆ ಭಾವ, ಸಂತೆ, ಮನೆಗಳ ಇರುವಿಕೆ ಸಾಧ್ಯವಾಗುತ್ತದೆ.  

ಈ) ಕೆಳಗಿನ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ.

1. ಜನಪದರ ಪ್ರಕಾರ ನಮ್ಮ ನಡೆನುಡಿಗಳು ಶಿವನಿಗೆ ಯಾವಾಗ ಪ್ರಿಯವಾಗುತ್ತವೆ?
ಜನಪದರ ಪ್ರಕಾರ ನಮ್ಮ ನಡೆನುಡಿಗಳು ಶಿವನಿಗೆ  ಪ್ರಿಯವಾಗಬೇಕಾದರೆ ನಮ್ಮ ಬದುಕು ಅನುಕರಣೀಯವಾಗಿರಬೇಕು. ಅದು ಮಾದರಿ ಎನಿಸಬೇಕು. ಕಷ್ಟ ಬಂದಾಗ ಎದೆಗುಂದದೆ ಹೋರಾಡಿ ಬದುಕುವ ಛಲವಂತಿಕೆ ಇದ್ದಾಗ, ಓದಿ ತಾನು ಜ್ಞಾನಿಯಾಗಬೇಕು ಎಂಬ ಮನೋಧರ್ಮ ಇದ್ದಾಗ, ಸಿರಿತನ ಬಡತನದಲ್ಲಿ ಎಲ್ಲರನ್ನು ಸಮಾನವಾಗಿ ಕಾಣುವ ಹೃದಯವಂತಿಕೆ ಇದ್ದಾಗ, ಕೊಟ್ಟು ಕುದಿಯದೆ, ಇನ್ನೊಬ್ಬರಿಗೆ ಇಟ್ಟು ಹಂಗಿಸದೆ ಎಷ್ಟುಂಡರೆಂದು ಆಡಿಕೊಳ್ಳದಿದ್ದಾಗ, ನಮ್ಮ ನಡೆನುಡಿಗಳನ್ನು ಶಿವನು ಮೆಚ್ಚಿಕೊಳ್ಳುತ್ತಾನೆ. ಆಗ ಶಿವನಿಗೆ ನಾವು ಪ್ರೀಯರಾಗುತ್ತೇವೆ.

2. ಸುಖಕ್ಕೆ ಬರುವ ಜನ ಕಷ್ಟಕ್ಕೆ ಬಾರರು ಎನ್ನುವ ಮಾತು ಜನಪದರ ಹಾಡಿನಲ್ಲಿ ಹೇಗೆ ವ್ಯಕ್ತವಾಗಿದೆ?
ಸಿರಿತನ ಬಂದಾಗ ಊರಿನ ಜನರೆಲ್ಲ ನೆಂಟರಾಗುವರು. ಬಂಧು ಬಳಗದವರು ಬೆಲ್ಲದ ಸಿಹಿಗೆ ಮುತ್ತಿಕೊಳ್ಳುವ ಇರುವೆಯಂತೆ ಇರುತ್ತಾರೆ. ಅದೇ ಸಿರಿತನ ಕಳೆದು ಬಡತನ ಆವರಿಸಿ ಅಡವಿ ಸೊಪ್ಪು ತಿಂದು ಬದುಕುವ ಸಮಯ ಬಂದಾಗ ಒಡಹುಟ್ಟಿದ ಅಣ್ಣನು ಕೂಡ ಮುಖ ತಿರುಗಿಸಿ ನೋಡುವುದಿಲ್ಲ. ಇದ್ದಾಗ ಊರೆಲ್ಲ ನೆಂಟರು, ಇಲ್ಲದಿರುವಾಗ ಯಾರೂ ಸಹಾಯಕ್ಕೆ ಧಾವಿಸುವುದಿಲ್ಲ. ಆದ್ದರಿಂದ ಸುಖಕ್ಕೆ ಬರುವ ಜನ ಕಷ್ಟಕ್ಕೆ ಬಾರರು ಎಂದು ಜನಪದರು ಹಾಡಿನಲ್ಲಿ ತಮ್ಮ ಭಾವನೆ ವ್ಯಕ್ತಪಡಿಸಿದ್ದಾರೆ.

3. ಜ್ಯೋತಿಯೇ ಆಗು ಜಗಕೆಲ್ಲ ತ್ರಿಪದಿಗಳಲ್ಲಿ ವ್ಯಕ್ತವಾಗಿರುವ ಜನಪದರ ಭಾವನೆಗಳೇನು?
ಹೆತ್ತ ತಾಯಿಗೆ ತನ್ನ ಮಗುವಿನ ಮೇಲೆ ಅತೀವವಾದ ಪ್ರೀತಿ ಇರುತ್ತದೆ. ಜನಪದರಲ್ಲಿ ತಾಯಿ ಮತ್ತು ಮಗುವಿಗೆ ವಿಶೇಷ ಸ್ಥಾನವಿದೆ. ಮಗು ಬೆಳೆದು ದೊಡ್ಡವನಾದ ಮೇಲೆ ಹೇಗೆ ಬದುಕಬೇಕೆಂಬುದನ್ನು ತಾಯಿ ಈ ರೀತಿ ಬಯಸುತ್ತಾಳೆ. ಒಳ್ಳೆಯ ನಡತೆ ಹೊಂದುವ ಮೂಲಕ ಅರಸನಾಗಿ ಬಾಳು, ನೀತಿಯನ್ನು ಅಳವಡಿಸಿಕೊಂಡು ಯಜಮಾನನಾಗಿ ಬಾಳು, ಹೇಳುವ ಪ್ರತಿ ಮಾತಿನಲ್ಲಿ ಸತ್ಯವಿರಲಿ, ಈ ಮೇಲಿನ ಗುಣಗಳಿಂದಾಗಿ ಉತ್ತಮ ರತ್ನದಂತೆ ನಿನ್ನ ಬಾಳು ಸದಾಕಾಲ ಹೊಳೆಯುವಂತಾಗಲಿ, ಆ ಬೆಳಕಿನ ಜ್ಯೋತಿ ಜಗವೆಲ್ಲ ಪಸರಿಸಲಿ ಎಂದು ಜನಪದರು ತ್ರಿಪದಿಯಲ್ಲಿ  ತಮ್ಮ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ.

4. ಕಂದ, ಹಡೆದವ್ವ ಮತ್ತು ಶ್ರೀಮಂತಿಕೆಯ ಬಗ್ಗೆ ಜನಪದ ತ್ರಿಪದಿಗಳಲ್ಲಿ ವ್ಯಕ್ತವಾಗಿರುವ ಆಶಯವೇನು?
ಜನಪದರಲ್ಲಿ ಮಗು ಮತ್ತು ತಾಯಿಯ ಪ್ರೀತಿಗೆ ಹೆಚ್ಚಿನ ಸ್ಥಾನವಿದೆ. ಮಕ್ಕಳ ಮೇಲೆ ಅವಳು ತೋರುವ ಪ್ರೀತಿ-ವಾತ್ಸಲ್ಯಕ್ಕೆ ಕೊನೆಯೆಂಬುದಿಲ್ಲ. ಅಕ್ಕ ಇದ್ದರೆ ಭಾವ ಬರುವಂತೆ, ಹಣವಿದ್ದರೆ ಸಂತೆಯ ಬೆಲೆ ತಿಳಿಯುವಂತೆ, ಮಕ್ಕಳಿದ್ದರೆ ಮನೆಮಾರು ಎನಿಸುವಂತೆ, ಹೆತ್ತ ತಾಯಿಯೊಬ್ಬಳು ಇದ್ದರೆ ನಮಗೆ ಅದು ದೊಡ್ಡ ಸಾಮ್ರಾಜ್ಯವಿದ್ದಂತೆ ಭಾಸವಾಗುತ್ತದೆ. ಹೆತ್ತ ತಾಯಿ ಇರುವ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ, ಪ್ರೀತಿ, ವಾತ್ಸಲ್ಯ ತುಂಬಿ ತುಳುಕುತ್ತದೆ. ಆದ್ದರಿಂದ ಮಗು ಮತ್ತು ಹಡೆದವ್ವ ಶ್ರೇಷ್ಠ ಎಂಬ ಭಾವನೆ ಜನಪದರಲ್ಲಿದೆ. ನಮ್ಮ ಜೀವನದಲ್ಲಿ ಸಿಗುವ ಶ್ರೀಮಂತಿಕೆ ಅಲ್ಪಕಾಲದ್ದಾಗಿರುತ್ತದೆ. ಅದು ನೀರಿನ ಮೇಲೆ ಇರುವ ಗುಳ್ಳೆಯಂತೆ ಇರುತ್ತದೆ. ಇದನ್ನು ಅರ್ಥಮಾಡಿಕೊಳ್ಳದ ಶಿವಕೊಟ್ಟ ಸಂಪತ್ತನ್ನು ದರ್ಪ ತೋರುವ ಸಲುವಾಗಿ ಕೈಯಲ್ಲಿ ಬಂಗಾರದ ಬಳೆ ತೊಟ್ಟು, ಬಡವರ ಶೋಷಣೆ ಮಾಡುವುದು ಸರಿಯಲ್ಲ. ಏಕೆಂದರೆ ಶ್ರೀಮಂತಿಕೆ ಸ್ಥಿರವಾದುದಲ್ಲ ಎಂಬ ಭಾವನೆ ಜನಪದರಲ್ಲಿದೆ.  

ಉ) ಸಂದರ್ಭದೊಡನೆ ವಿವರಿಸಿರಿ.

1. ಜ್ಯೋತಿಯೇ ಆಗು ಜಗಕೆಲ್ಲ.
ಈ ವಾಕ್ಯವನ್ನು ಜನಪದ ಗೀತಾಂಜಲಿ  ಹಾಗೂ  ಗರತಿಯ ಹಾಡು ಎಂಬ ಕೃತಿಯಿಂದ ಆಯ್ದ ಜ್ಯೋತಿಯೇ ಆಗು ಜಗಕೆಲ್ಲ ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.  ಈ ಮಾತನ್ನು ಜನಪದರು ಹೇಳಿದ್ದಾರೆ. ಹೆತ್ತ ತಾಯಿ ತನ್ನ ಮಗನು ಒಳ್ಳೆಯ ನಡತೆ ಹೊಂದಿದ ಅರಸನಾಗಬೇಕು, ಯಜಮಾನನಾಗಬೇಕು, ರತ್ನದಂತೆ ಬಾಳು ಹೊಳೆಯಬೇಕು, ಜ್ಯೋತಿಯೇ ಆಗಿ ಕತ್ತಲಿನಲ್ಲಿರುವವರಿಗೆ ಬೆಳಕು ನೀಡಬೇಕು ಎಂದು ಹಾರೈಸುವ ಸಂದರ್ಭದಲ್ಲಿ ಈ ಮೇಲಿನ ಮಾತು ಬಂದಿದೆ.

2. ಬಂಗಾರ ನಿನಗೆ ಸ್ಥಿರವಲ್ಲ.
ಈ ವಾಕ್ಯವನ್ನು ಜನಪದ ಗೀತಾಂಜಲಿ  ಹಾಗೂ  ಗರತಿಯ ಹಾಡು ಎಂಬ ಕೃತಿಯಿಂದ ಆಯ್ದ ಜ್ಯೋತಿಯೇ ಆಗು ಜಗಕೆಲ್ಲ ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.  ಈ ಮಾತನ್ನು ಜನಪದರು ಹೇಳಿದ್ದಾರೆ. ಸಿರಿವಂತಿಕೆ ಬಂದಾಗ ಬಡವರ ಮೇಲೆ ದರ್ಪ ತೋರುವುದು ಸರಿಯಲ್ಲ. ಶ್ರೀಮಂತಿಕೆ ಎಂಬುದು ಸ್ಥಿರವಾದುದಲ್ಲ ಎಂದು ತಿಳಿಸುವ ಸಮಯದಲ್ಲಿ ಈ ಮೇಲಿನ ಮಾತು ಬಂದಿದೆ.

3. ಇಟ್ಟು ಹಂಗಿಸಬೇಡ.
ಈ ವಾಕ್ಯವನ್ನು ಜನಪದ ಗೀತಾಂಜಲಿ  ಹಾಗೂ  ಗರತಿಯ ಹಾಡು ಎಂಬ ಕೃತಿಯಿಂದ ಆಯ್ದ ಜ್ಯೋತಿಯೇ ಆಗು ಜಗಕೆಲ್ಲ ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.  ಈ ಮಾತನ್ನು ಜನಪದರು ಹೇಳಿದ್ದಾರೆ. ನಮ್ಮ ನಡವಳಿಕೆಗಳು ಉತ್ತಮವಾಗಿದ್ದರೆ ಆ ಶಿವನ ಕೃಪೆಗೆ ಪಾತ್ರರಾಗಲು ಸಾಧ್ಯ. ಕೊಟ್ಟು ಕುದಿಯುವುದು, ಇಟ್ಟು ಹಂಗಿಸುವುದು, ಎಷ್ಟು ತಿಂದರೆಂದು ಅನ್ನುವುದು, ಈ ಮೂರು ಗುಣಗಳನ್ನು ಶಿವನು ಮೆಚ್ಚುವುದಿಲ್ಲ ಎಂದು ತಿಳಿಸುವ ಸಮಯದಲ್ಲಿ ಈ ಮೇಲಿನ ಮಾತು ಬಂದಿದೆ.

4. ಒಡಹುಟ್ಟಿದಣ್ಣ ಮುಖನೋಡ.
ಈ ವಾಕ್ಯವನ್ನು ಜನಪದ ಗೀತಾಂಜಲಿ  ಹಾಗೂ  ಗರತಿಯ ಹಾಡು ಎಂಬ ಕೃತಿಯಿಂದ ಆಯ್ದ ಜ್ಯೋತಿಯೇ ಆಗು ಜಗಕೆಲ್ಲ ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.  ಈ ಮಾತನ್ನು ಜನಪದರು ಹೇಳಿದ್ದಾರೆ. ಸಿರಿತನ ಬಂದಾಗ ಊರಿನ ಜನರೆಲ್ಲ ನೆಂಟರಾಗುವರು. ಬಂಧು ಬಳಗದವರು ಬೆಲ್ಲದ ಸಿಹಿಗೆ ಮುತ್ತಿಕೊಳ್ಳುವ ಇರುವೆಯಂತೆ ಇರುತ್ತಾರೆ. ಅದೇ ಸಿರಿತನ ಕಳೆದು ಬಡತನ ಆವರಿಸಿ ಅಡವಿ ಸೊಪ್ಪು ತಿಂದು ಬದುಕುವ ಸಮಯ ಬಂದಾಗ ಒಡಹುಟ್ಟಿದ ಅಣ್ಣನು ಕೂಡ ಮುಖ ತಿರುಗಿಸಿ ನೋಡುವುದಿಲ್ಲ ಎಂದು ತಿಳಿಸುವ ಸಮಯದಲ್ಲಿ ಈ ಮೇಲಿನ ಮಾತು ಬಂದಿದೆ.

ಭಾಷಾಭ್ಯಾಸ :

ಅ) ಕೆಳಗಿನ ಪದಗಳಿಗೆ ಸಮಾನಾರ್ಥಕಗಳನ್ನು ಬರೆಯಿರಿ.

ಅರಸ - ರಾಜ; ಒಡೆಯ,  
ಕಂದ - ಮಗು; ಕೂಸು,   
ಹಂಗಿಸು - ಮೂದಲಿಸು; ಹೀಯಾಳಿಸು,  
ಬಂಗಾರ - ಚಿನ್ನ; ಅಪರಂಜಿ,   
ಅಡವಿ - ಕಾಡು; ವನ,     
ಸಾಗರ - ಸಮುದ್ರ; ಶರಧಿ.  

ಆ) ಕೆಳಗಿನ ಪದಗಳಿಗೆ ಗ್ರಾಂಥಿಕ ರೂಪ ಬರೆಯಿರಿ.
ಬೈಬೇಡ - ಬಯ್ಯಬೇಡ,  
ಹೊರಳೋದು - ಹೊರಳುವುದು,   
ಸಾಂರಾಜ್ಯ - ಸಾಮ್ರಾಜ್ಯ,  
ನಮಗ - ನಮಗೆ  

ಇ) ಕೆಳಗಿನ ಪದಗಳನ್ನು ಸ್ವಂತ ವಾಕ್ಯದಲ್ಲಿ ಬರೆಯಿರಿ.
1. ಚೂಡಾಮಣಿ :  ಸೀತೆಯು ತನ್ನ ಚೂಡಾಮಣಿ ಹಾರವನ್ನು ಆಂಜನೇಯನಿಗೆ ಕೊಟ್ಟಳು.
2. ಹಂಗಿಸು : ಶ್ರೀಮಂತರು ಬಡವರನ್ನು ಹಂಗಿಸುತ್ತಾರೆ.
3. ನೆಂಟರು  : ನಮ್ಮ ಮನೆಯ ಹಬ್ಬಕ್ಕೆ ನೆಂಟರು ಬಂದಿದ್ದರು.
4. ಸ್ಥಿರ :  ಬಂಗಾರ ಯಾರಿಗೂ ಸ್ಥಿರವಲ್ಲ.  

ಈ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕಗಳನ್ನು ಬರೆಯಿರಿ.
ಪ್ರಭು - ಸೇವಕ,
ಸ್ಥಿರ - ಅಸ್ಥಿರ,  
ನೀತಿ - ಅನೀತಿ,
ಆಚಾರ - ಅನಾಚಾರ,   
ಬಡವ - ಶ್ರೀಮಂತ.  

ಉ) ಕೆಳಗಿನ ಪದಗಳನ್ನು ಮಾದರಿಯಂತೆ ಬಿಡಿಸಿ ಬರೆಯಿರಿ.
ಮಾದರಿ : ಹಡೆದ + ಅವ್ವ = ಹಡೆದವ್ವ
ಜಗಕೆಲ್ಲ  = ಜಗಕೆ + ಎಲ್ಲ,                       
ಸಂಸಾರವೆಂಬುದು = ಸಂಸಾರ + ಎಂಬುದು,  
ಎದೆಯುದ್ದ = ಎದೆ + ಉದ್ದ,                      
ಎಷ್ಟುಂಡರೆಂದು = ಎಷ್ಟು    + ಉಂಡರೆಂದು,  
ಮಕ್ಕಳಿದ್ದರೆ = ಮಕ್ಕಳು + ಇದ್ದರೆ,                     
ಒಡಹುಟ್ಟಿದಣ್ಣ = ಒಡಹುಟ್ಟಿ + ಅಣ್ಣ.  

ಋ) ಕೆಳಗೆ ನೀಡಿರುವ ಸಜಾತೀಯ ಮತ್ತು ವಿಜಾತೀಯ ಒತ್ತಕ್ಷರದ ಪದಗಳನ್ನು ವಿಂಗಡಿಸಿ ಬರೆಯಿರಿ.

You Might Like

Post a Comment

0 Comments